ಮೇಲ್ದರ್ಜೆಗೇರಿದ ಅಶೋಕಪುರಂ ರೈಲು ನಿಲ್ದಾಣ ಉದ್ಘಾಟನೆ

KannadaprabhaNewsNetwork |  
Published : Mar 05, 2024, 01:32 AM ISTUpdated : Mar 05, 2024, 01:33 AM IST
7 | Kannada Prabha

ಸಾರಾಂಶ

ಅಭಿವೃದ್ಧಿ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಸದಾ ಮುಂದಿರುತ್ತಾರೆ. ದಶಪಥ, ರೈಲು ಮಾರ್ಗ, ಹೊಸ ರೈಲು ಎಲ್ಲವನ್ನೂ ಮೈಸೂರಿಗೆ ಕೊಡುಗೆಯಾಗಿ ನೀಡಿದ್ದಾರೆ. ಅಶೋಕಪುರಂ ರೈಲ್ವೆ ನಿಲ್ದಾಣದ ಬಳಿ ಸಂಜೆಯಾದರೆ ಜನರು ಓಡಾಡಲು ಭಯಪಡುತ್ತಿದ್ದರು. ಕಸದ ತೊಟ್ಟಿಯಾಗಿ ಮಾರ್ಪಟ್ಟಿತ್ತು. ಈಗ ನಿಲ್ದಾಣಕ್ಕೆ ಕಾಯಕಲ್ಪ ಸಿಕ್ಕಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.

ಫೋಟೋ- 4ಎಂವೈಎಸ್ 7, 8- ಮೈಸೂರಿನ ಮೇಲ್ದರ್ಜೆಗೇರಿದ ಅಶೋಕಪುರಂ ರೈಲು ನಿಲ್ದಾಣವನ್ನು ಸಂಸದ ಪ್ರತಾಪ ಸಿಂಹ ಉದ್ಘಾಟಿಸಿದರು. ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಮೇಯರ್ ಶಿವಕುಮಾರ್, ಶಿಲ್ಪಿ ಅಗರವಾಲ್, ವಿನಾಯಕ್ ನಾಯಕ್, ರವಿಚಂದ್ರ, ಕೇಶವಮೂರ್ತಿ ಮೊದಲಾದವರು ಇದ್ದಾರೆ.

---

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಮುಖ್ಯ ರೈಲು ನಿಲ್ದಾಣದ ಮೇಲಿನ ಒತ್ತಡ ತಗ್ಗಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾದ ಅಶೋಕಪುರಂ ರೈಲ್ವೆ ನಿಲ್ದಾಣವನ್ನು ಸಂಸದ ಪ್ರತಾಪಸಿಂಹ ಸೋಮವಾರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಅಶೋಕಪುರಂ ರೈಲ್ವೆ ಯಾರ್ಡ್ ಅನ್ನು ಮೈಸೂರಿನ ಎರಡನೇ ರೈಲ್ವೆ ನಿಲ್ದಾಣವಾಗಿ ಪರಿವರ್ತನೆಗೊಳಿಸಲಾಗಿದ್ದು, ಶೀಘ್ರದಲ್ಲೇ ಆರನೇ ಪ್ಲ್ಯಾಟ್ ಫಾರಂ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಅಶೋಕಪುರಂ ರೈಲ್ವೆ ನಿಲ್ದಾಣ ಅಂದರೆ ಜನರಿಗೆ ಬೇರೆಯದೆ ಕಲ್ಪನೆ ಇತ್ತು. ಇದೊಂದು ಗುಜರಿ ಅಂಗಡಿಯಂತೆ ಮಾರ್ಪಾಡಾಗಿತ್ತು. ಈಗ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಕೇಂದ್ರ ಸರ್ಕಾರಕ್ಕೆ ದುಡ್ಡು ಮತ್ತು ಇಚ್ಛಾಶಕ್ತಿ ಕೊರತೆ ಇಲ್ಲ. ಹಾಗಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿದೆ. ಮೈಸೂರಿಗೆ ಬರುವ ರೈಲುಗಾಡಿಗಳನ್ನು ಚಾಮರಾಜನಗರ ಕಡೆಗೆ ವಿಸ್ತರಿಸಬಹುದು. ಸ್ಟೇಬ್ಲಿಂಗ್ ಲೈನ್ ನಿರ್ಮಿಸಲಾಗಿದ್ದು, ಇದರಿಂದ ಹೆಚ್ಚುವರಿ ರೈಲು ಗಾಡಿಗಳನ್ನು ಈ ಜಾಗದಲ್ಲಿ ನಿಲುಗಡೆ ಮಾಡಲು ಅವಕಾಶವಾಗುತ್ತದೆ ಎಂದರು.

ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಸದಾ ಮುಂದಿರುತ್ತಾರೆ. ದಶಪಥ, ರೈಲು ಮಾರ್ಗ, ಹೊಸ ರೈಲು ಎಲ್ಲವನ್ನೂ ಮೈಸೂರಿಗೆ ಕೊಡುಗೆಯಾಗಿ ನೀಡಿದ್ದಾರೆ. ಅಶೋಕಪುರಂ ರೈಲ್ವೆ ನಿಲ್ದಾಣದ ಬಳಿ ಸಂಜೆಯಾದರೆ ಜನರು ಓಡಾಡಲು ಭಯಪಡುತ್ತಿದ್ದರು. ಕಸದ ತೊಟ್ಟಿಯಾಗಿ ಮಾರ್ಪಟ್ಟಿತ್ತು. ಈಗ ನಿಲ್ದಾಣಕ್ಕೆ ಕಾಯಕಲ್ಪ ಸಿಕ್ಕಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಮುಖ್ಯ ರೈಲ್ವೆ ನಿಲ್ದಾಣಕ್ಕೆ ಒತ್ತಡ ಕಡಿಮೆ ಆಗುತ್ತದೆ ಎಂದರು.

ಹೊಸದೇನಿದೆ?

ಮೂರು ಪ್ಲಾಟ್ಫಾರಂ, ಮೂರು ಚಾಲನೆಯಲ್ಲಿರುವ ಮಾರ್ಗಗಳು ಮತ್ತು ಎರಡು ಸ್ಟೇಬ್ಲಿಂಗ್ ಲೈನ್ ಹೊಂದಿರುವ ಅಶೋಕಪುರಂ ರೈಲ್ವೆ ನಿಲ್ದಾಣ ಮೈಸೂರು ನಗರ ರೈಲು ನಿಲ್ದಾಣಕ್ಕೆ ಸಮೀಪದಲ್ಲಿದೆ (5.2 ಕಿಮೀ).

ಇದುವರೆಗೂ ಮೈಸೂರಿನ ಕೇಂದ್ರ ರೈಲ್ವೆ ನಿಲ್ದಾಣ ಹೊರತುಪಡಿಸಿದರೆ, ಚಾಮರಾಜಪುರಂ ಮತ್ತು ಅಶೋಕಪುರಂ ರೈಲ್ವೆ ನಿಲ್ದಾಣಗಳು ಸಾಮಾನ್ಯ ನಿಲುಗಡೆಯನ್ನು ಹೊಂದಿದ್ದವು. ಆದರೆ ಅಶೋಕಪುರಂ ರೈಲ್ವೆ ನಿಲ್ದಾಣವು ವಿಶಾಲವಾದ ಜಾಗಹೊಂದಿರುವುದರಿಂದ ಮತ್ತು ಇದರ ಸಮೀಪದಲ್ಲೇ ರೈಲ್ವೆ ಕಾರ್ಯಾಗಾರವೂ ಇರುವುದರಿಂದ ನಗರದ ಎರಡನೇ ದೊಡ್ಡ ನಿಲ್ದಾಣವಾಗಿ ಪರಿವರ್ತಿಸಲಾಗಿದೆ.

ಸದ್ಯ ಐದು ಚಾಲನೆಯಲ್ಲಿರುವ ಹಳಿ ಮಾರ್ಗಗಳು ಮತ್ತು ಎರಡು ಸ್ಟೇಬ್ಲಿಂಗ್ ಲೈನ್ ಒಳಗೊಂಡಿದೆ. ಪ್ರಯಾಣಿಕರು ಪ್ಲಾಟ್ ಫಾರಂಗೆ ತೆರಳಲು ಫುಟ್ ಓವರ್ ಬ್ರಿಡ್ಜ್ ನಿರ್ಮಿಸಲಾಗಿದೆ.

ಈ ಹಿಂದೆ ಕೇವಲ ಮೂರು ಪ್ಲಾಟ್ ಫಾರಂ ಹೊಂದಿದ್ದ ರೈಲ್ವೆ ನಿಲ್ದಾಣವನ್ನು ಈಗ 5 ಪ್ಲಾಟ್ ಫಾರಂಗೆ ವಿಸ್ತರಿಸಲಾಗಿದೆ. ಮೈಸೂರಿಗೆ ಬರುವ ರೈಲುಗಾಡಿಯನ್ನು ಚಾಮರಾಜನಗರ ಕಡೆಗೆ ವಿಸ್ತರಿಸಬಹುದು. ಸ್ಟೇಬ್ಲಿಂಗ್ ಲೈನ್ ನಿರ್ಮಿಸಲಾಗಿದ್ದು, ಇದರಿಂದ ರೈಲು ಗಾಡಿಯನ್ನು ಈ ಜಾಗದಲ್ಲಿ ನಿಲುಗಡೆ ಮಾಡಲು ಅವಕಾಶವಾಗುತ್ತದೆ. ರೈಲುಗಾಡಿ ಸ್ವಚ್ಛಗೊಳಿಸುವುದು ಸೇರಿದಂತೆ ಇತರ ಕಾರ್ಯಗಳಿಗೆ ಅನುಕೂಲವಾಗಲಿದೆ. ನಿಲ್ದಾಣಕ್ಕೆ 2ನೇ ಪ್ರವೇಶದ್ವಾರ ನಿರ್ಮಿಸಲಾಗಿದ್ದು, ಪ್ರಯಾಣಿಕ ಸ್ನೇಹಿ ವಾತಾವರಣ ಕಲ್ಪಿಸಲಾಗಿದೆ.

ಇಲ್ಲಿ ರೈಲು ಬೋಗಿಗೆ ನೀರು ತುಂಬಿಸುವ ವ್ಯವಸ್ಥೆ, ಪ್ರಯಾಣಿಕರ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಿದ್ದು, ಒಟ್ಟಾರೆ 32.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಪೈಕಿ 22 ಕೋಟಿಯನ್ನು ಸಂಚಾರ ಸೌಲಭ್ಯಗಳ ಉನ್ನತೀಕರಣಕ್ಕೆ, 10,5 ಕೋಟಿಯನ್ನು ಪ್ರಯಾಣಿಕರ ಸೌಕರ್ಯ ವೃದ್ಧಿಸಲು ಬಳಸಲಾಗಿದೆ.

ಮಾಜಿ ಮೇಯರ್ ಶಿವಕುಮಾರ್, ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಿ ಅಗರವಾಲ್, ಹೆಚ್ಚುವರಿ ವ್ಯವಸ್ಥಾಪಕ ವಿನಾಯಕ್ ನಾಯಕ್, ರೈಲ್ವೆ ಎಂಜಿನಿಯರ್ ರವಿಚಂದ್ರ, ವಿಭಾಗೀಯ ಎಂಜಿನಿಯರ್ ಕೇಶವಮೂರ್ತಿ ಮೊದಲಾದವರು ಇದ್ದರು.

---

ಕೋಟ್

ಮೈಸೂರಿಗೆ ಶೀಘ್ರದಲ್ಲೇ ನಾಲ್ಕು ಮೆಮೊ ರೈಲುಗಳು ಬರಲಿವೆ. ಜತೆಗೆ ಚೆನ್ನೈಗೆ ಹೋಗಲು ಮತ್ತೊಂದು ಕಾವೇರಿ ಎಕ್ಸಪ್ರೆಸ್ ಮತ್ತು ಮಾಲ್ಗುಡಿ ರೈಲು ಶೀಘ್ರವೇ ಕಾರ್ಯಾರಂಭ ಮಾಡಲಿದೆ. ತಿರುಪತಿ ರೈಲು ಅಶೋಕಪುರಂನಲ್ಲಿ ನಿಲ್ಲುವಂತೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಪ್ರತಾಪ ಸಿಂಹ, ಸಂಸದ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ