ಶೃಂಗೇರಿ ತಾಲೂಕಿನಲ್ಲಿ ನಿಲ್ಲದ ಮಳೆ ಆರ್ಭಟ: ಏರಿಳಿತ ಸ್ಥಿತಿಯಲ್ಲಿ ತುಂಗೆ ಪ್ರವಾಹ

KannadaprabhaNewsNetwork | Published : Jul 18, 2024 1:38 AM

ಸಾರಾಂಶ

ಶೃಂಗೇರಿ, ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು ಬುಧವಾರವೂ ಗಾಳಿ ಸಹಿತ ಭಾರಿ ಮಳೆ ಸುರಿಯಿತು. ಮಂಗಳವಾರ ಸಂಜೆ ಮಳೆ ಕೊಂಚ ಕಡಿಮೆಯಾಗಿದ್ದರೂ ತುಂಗಾ ನದಿಯಲ್ಲಿ ಉಂಟಾದ ಪ್ರವಾಹ ಬುಧವಾರ ಬೆಳಿಗ್ಗೆ ಇಳಿಮುಖ ಕಂಡಿತು. ಮಂಗಳೂರು ಶೃಂಗೇರಿ ಸಂಪರ್ಕ ನೆಮ್ಮಾರು ಬಳಿ ರಸ್ತೆಯಿಂದ ಪ್ರವಾಹ ಇಳಿಮುಖವಾಗಿ ಸಹಜ ಸ್ಥಿತಿಗೆ ಬಂದಿತ್ತು.

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು ಬುಧವಾರವೂ ಗಾಳಿ ಸಹಿತ ಭಾರಿ ಮಳೆ ಸುರಿಯಿತು. ಮಂಗಳವಾರ ಸಂಜೆ ಮಳೆ ಕೊಂಚ ಕಡಿಮೆಯಾಗಿದ್ದರೂ ತುಂಗಾ ನದಿಯಲ್ಲಿ ಉಂಟಾದ ಪ್ರವಾಹ ಬುಧವಾರ ಬೆಳಿಗ್ಗೆ ಇಳಿಮುಖ ಕಂಡಿತು. ಮಂಗಳೂರು ಶೃಂಗೇರಿ ಸಂಪರ್ಕ ನೆಮ್ಮಾರು ಬಳಿ ರಸ್ತೆಯಿಂದ ಪ್ರವಾಹ ಇಳಿಮುಖವಾಗಿ ಸಹಜ ಸ್ಥಿತಿಗೆ ಬಂದಿತ್ತು.

ಕುರುಬಗೇರಿ ಬಡಾವಣೆ, ಗಾಂಧಿ ಮೈದಾನದಿಂದ ಪ್ರವಾಹ ಇಳಿದಿತ್ತು. ಆದರೆ ಭಾರತೀ ಬೀದಿ ಕೆವಿಆರ್ ಸಂಪರ್ಕ ಬೈಪಾಸ್‌ ರಸ್ತೆ ಮೇಲೆ ಪ್ರವಾಹ ಇದ್ದು ಸಂಪರ್ಕ ಕಡಿತವಾಗಿತ್ತು. ವಿದ್ಯಾರಣ್ಯಪುರ ಶೃಂಗೇರಿ ಸಂಪರ್ಕ ರಸ್ತೆ ಮೇಲೆ ಪ್ರವಾಹ ಇತ್ತು. ಕೊಪ್ಪ ಶೃಂಗೇರಿ ಕಾವಡಿ ರಸ್ತೆ ಮೇಲಿದ್ದ ನೀರು ಇಳಿದಿತ್ತು. ಮಾಣಿಬೈಲು ಸಿರಿಮನೆ ಕಿಗ್ಗಾ ಸಂಪರ್ಕ ರಸ್ತೆ, ನೆಮ್ಮಾರು ಹೊಳೆಹದ್ದು ಸಂಪರ್ಕ ರಸ್ತೆ ಪ್ರವಾಹದಿಂದ ಮುಕ್ತವಾಗಿತ್ತು,

ಆದರೆ ತುಂಗಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ತುಂಗಾ ನದಿಯಲ್ಲಿ ಪ್ರವಾಹದ ಇನ್ನು ಎದುರಾಗಿದೆ. ಶ್ರೀ ಮಠದ ತುಂಗಾ ನದಿ ತೀರದ ಕಪ್ಪೆ ಶಂಕರ ದೇವಾಲಯ, ಸಂದ್ಯಾವಂದನ ಮಂಟಪ ಇನ್ನೂ ಜಲಾವೃತಗೊಂಡಿದೆ. ತುಂಗಾ ನದಿ ದಡದಲ್ಲಿರುವ ತಗ್ಗು ಪ್ರದೇಶಗಳು, ಹೊಲಗೆದ್ದೆಗಳು, ಅಡಕೆ ತೋಟಗಳು ಇನ್ನೂ ಜಲಾವೃತ ಗೊಂಡಿದೆ.

ಇನ್ನೂ ಗಾಳಿ ಆರ್ಭಟವಿರುವುದರಿಂದ ಮರಗಳು ಧರೆಗುರುಳಿ ಬೀಳುತ್ತಿದ್ದುಪಟ್ಟಣ ಸಹಿತ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಗಲು ರಾತ್ರಿ ವಿದ್ಯುತ್‌ ಸಂಪರ್ಕ ಕಡಿತಗೊಳ್ಳುತ್ತಿದ್ದು, ಮೊಬೈಲ್ ಸಂಪರ್ಕ ಸ್ಥಗಿತವಾಗುತ್ತಿದೆ. ವಿದ್ಯುತ್‌ ಮೊಬೈಲ್ ಸಂಪರ್ಕ ಕಡಿತಗೊಳ್ಳುತ್ತಿರುವುದರಿಂದ ಅಗತ್ಯ ಕೆಲಸಗಳಿಗೆ ಜನರು ಪರದಾಡುವಂತಾಗಿದೆ.

ಇನ್ನು ಭೂಕುಸಿತ, ರಸ್ತೆ ಕುಸಿತ ಉಂಟಾಗುತ್ತಿದ್ದು ಮಂಗಳೂರು ಶೃಂಗೇರಿ ರಾಷ್ಟ್ರೀಯ ಹೆದ್ದಾರಿ 169 ರ ತ್ಯಾವಣ ಬಳಿ ಗುಡ್ಡಕುಸಿತ ಮುಂದುವರೆದಿದ್ದು ಗುಡ್ಡಕುಸಿದು ಮಣ್ಣು ರಸ್ತೆಯ ಮೇಲೆ ಬೀಳುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಯಾಗುತ್ತಿದೆ. ಮರಗಳು ರಸ್ತೆ ಉರುಳಿ ಬೀಳುತ್ತಿದ್ದು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.ಇನ್ನೂ ತುಂಗಾನದಿ ಸಹಿತ ಉಪನದಿಗಳಾದ ನಂದಿನಿ, ನಳಿನಿ ನದಿಗಳು, ಹಳ್ಳಗಳು ತುಂಬಿ ಹರಿಯುತ್ತಿದೆ.

Share this article