ಬೃಂದಾವನ ಪ್ರವೇಶ ಶುಲ್ಕ ಹೆಚ್ಚಳ: ಮಂಗಳ ನವೀನ್ ಕುಮಾರ್ ಆಕ್ರೋಶ

KannadaprabhaNewsNetwork | Published : Jun 4, 2025 1:54 AM
ಕೆಆರ್‌ಎಸ್ ಬೃಂದಾವನ ಪ್ರವೇಶಕ್ಕೆ ಮೂರು ವರ್ಷ ಒಳಪಟ್ಟ ಮಕ್ಕಳಿಗೆ 50 ರು, ಆರು ವರ್ಷ ಮೇಲ್ಪಟ್ಟ ಎಲ್ಲರಿಗೂ 100 ರು. ಪಾರ್ಕಿಂಗ್ ಶುಲ್ಕ, ಸೇತುವೆ ಮೇಲೆ ಓಡಾಡುವ ಮೂರು ಚಕ್ರ, ಕಾರು, ಮಿನಿಬಸ್, ಟೆಂಪೋಗಳಿಗೆ 100 ರು. ಆರುಚಕ್ರ ವಾಹನಕ್ಕೆ 200, 10 ಚಕ್ರವಾಹನಕ್ಕೆ 30 ರು. ಶುಲ್ಕ ಹಾಕಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ವಿಶ್ವವಿಖ್ಯಾತ ಕೆಆರ್‌ಎಸ್ ಬೃಂದಾವನ ಪ್ರವೇಶ ಶುಲ್ಕ ಹಾಗೂ ಸೇತುವೆ ಮೇಲೆ ಸಂಚರಿಸುವ ವಾಹನ ಶುಲ್ಕ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ನಾಗರಿಕರು, ಪ್ರವಾಸಿಗರಿಗೆ ಗಾಯದ ಮೇಲೆ ಬರೆಎಳೆಯುತ್ತಿದೆ ಎಂದು ಬಿಜೆಪಿ ಮಹಿಳಾ ಘಟನದ ಜಿಲ್ಲಾಧ್ಯಕ್ಷ ಮಂಗಳ ನವೀನ್‌ಕುಮಾರ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪ್ರವೇಶ ಶುಲ್ಕ ಹಾಗೂ ಟೋಲ್ ಶುಲ್ಕದ ಮೂಲಕ ಜನರನ್ನು ಸುಲಿಗೆ ಮಾಡಲು ಮುಂದಾಗಿದೆ ಎಂದು ದೂರಿದರು.

ಗ್ಯಾರಂಟಿ ಹೆಸರಿನಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಟೋಲ್ ಶುಲ್ಕ ಹೆಚ್ಚಿಸಿ ಪ್ರವಾಸಿಗರು, ನಾಗರಿಕರಿಂದ ಅಧಿಕ ಹಣ ವಸೂಲಿ ಮಾಡುವ ಮೂಲಕ ಸರ್ಕಾರ ಬೊಕ್ಕಸಕ್ಕೆ ತುಂಬಿಸಿಕೊಳ್ಳಲು ಮುಂದಾಗಿರುವುದು ಶೋಚನೀಯ ಸಂಗತಿ ಎಂದು ಕಿಡಿಕಾರಿದರು.

ಕೆಆರ್‌ಎಸ್ ಬೃಂದಾವನ ಪ್ರವೇಶಕ್ಕೆ ಮೂರು ವರ್ಷ ಒಳಪಟ್ಟ ಮಕ್ಕಳಿಗೆ 50 ರು, ಆರು ವರ್ಷ ಮೇಲ್ಪಟ್ಟ ಎಲ್ಲರಿಗೂ 100 ರು. ಪಾರ್ಕಿಂಗ್ ಶುಲ್ಕ, ಸೇತುವೆ ಮೇಲೆ ಓಡಾಡುವ ಮೂರು ಚಕ್ರ, ಕಾರು, ಮಿನಿಬಸ್, ಟೆಂಪೋಗಳಿಗೆ 100 ರು. ಆರುಚಕ್ರ ವಾಹನಕ್ಕೆ 200, 10 ಚಕ್ರವಾಹನಕ್ಕೆ 30 ರು. ಶುಲ್ಕ ಹಾಕಿರುವುದನ್ನು ಖಂಡಿಸಿದರು.

ಮೂರು ವರ್ಷದ ಮಕ್ಕಳಿಗೂ ಶುಲ್ಕ ವಿಧಿಸಲು ಮುಂದಾಗಿರುವುದು ಸರಿಯಲ್ಲ. ಇದರಿಂದ ವಾಹನ ಸವಾರರು, ಪ್ರವಾಸಿಗರಿಗೆ ಸಾಕಷ್ಟು ಅನಾನೂಕೂಲ ಉಂಟಾಗುತ್ತಿದೆ. ಸರ್ಕಾರ ಜನರಿಗೆ ಬದುಕು ಕಟ್ಟಿಕೊಡಬೇಕೆ ಹೊರತು ಜನರಿಂದ ಕಿತ್ತು ತಿನ್ನುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಇದೇರೀತಿ ಜನಸಾಮಾನ್ಯರ ಮೇಲೆ ಹೊರೆ ಹಾಕಿದರೆ ಮುಂದೆ ನಿಮಗೆ ತಕ್ಕಪಾಠ ಕಲಿಸಲಿದ್ದಾರೆ. ಹಾಗಾಗಿ ಸರ್ಕಾರ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಕೂಡಲೇ ಅಧಿಕ ಶುಲ್ಕದ ಕ್ರಮವನ್ನು ವಾಪಸ್ ಪಡಯೆಬೇಕು. ಇಲ್ಲವಾದರೆ ಉಗ್ರಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.