ಮುಂಡರಗಿ: 60 ವರ್ಷ ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದರೂ ಎಸ್ಸಿ, ಎಸ್ಟಿ ಸೇರಿದಂತೆ ವಿವಿಧ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವುದಕ್ಕೆ ಮುಂದಾಗಿರಲಿಲ್ಲ. ಈ ಮೀಸಲಾತಿಗಾಗಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೇ ಬೇಕಾಯಿತು ಎಂದು ಶಿರಹಟ್ಟಿ ಮೀಸಲು ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ರಾಜ್ಯಾದ್ಯಂತ ಬರಗಾಲ ತಾಂಡವಾಡುತ್ತಿದ್ದು, ರಾಜ್ಯ ಸರ್ಕಾರ ಜಿಲ್ಲಾ ಮಟ್ಟದಲ್ಲಿ 5 ತಿಂಗಳಿನಿಂದ ಬರ ನಿರ್ವಹಣೆ ಕುರಿತು ನಿರಂತರ ಸಭೆ ನಡೆಸುತ್ತಿದ್ದು, ಇದುವರೆಗೂ ಅದಕ್ಕಾಗಿ ಒಂದೇ ಒಂದು ರುಪಾಯಿ ಹಣ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ. ಹೀಗಾಗಿ ಮೇ 7 ರಂದು ಜರುಗಲಿರುವ ಲೋಕಸಭೆ ಚುನಾವಣೆಯಲ್ಲಿ ಮತದಾರ ಪ್ರಭುಗಳು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಗೆ ಹೆಚ್ಚಿನ ಮತ ನೀಡಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರುವಂತೆ ಮನವಿ ಮಾಡಿಕೊಂಡರು.
ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ಮಾತನಾಡಿ, 2024ರ ಲೋಕಸಭೆ ಚುನಾವಣೆ ನಮ್ಮ ದೇಶದ ಭವಿಷ್ಯ ರೂಪಿಸುವ ಮಹತ್ವದ ಚುನಾವಣೆ. 10 ವರ್ಷದ ಹಿಂದೆ ದೇಶದ ಸ್ಥಿತಿಗತಿ ಏನಾಗಿತ್ತು. ಇಂದು ಏನಾಗಿದೆ. ಭದ್ರತೆ, ಸುರಕ್ಷತೆ, ಜನಸಾಮಾನ್ಯರ ದಿನನಿತ್ಯದ ಬದುಕಿನಲ್ಲಾಗಿರುವ ಬದಲಾವಣೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ, ಗೌರವ ಹೆಚ್ಚಿಸಿರುವಂತದ್ದನ್ನು ನಾವೆಲ್ಲರೂ ಕಾಣಬಹುದಾಗಿದೆ. ಇದು ಮೋದಿಯವರ ಕೈ ಬಲಪಡಿಸುವ ಚುನಾವಣೆ ಆಗಿದೆ. ಮುಖ್ಯಮಂತ್ರಿಯಾಗಿ ಅನೇಕ ಜನಪರ ಯೋಜನೆ ಜಾರಿಗೆ ತಂದಿರುವ ಬಸವರಾಜ ಬೊಮ್ಮಾಯಿ ಅವರಿಗೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಮತ್ತೊಮ್ಮೆ ಮೋದಿ ಪ್ರಧಾನಿಯನ್ನಾಗಿ ಮಾಡಲು ನಾವೆಲ್ಲರೂ ಶ್ರಮಿಸೋಣ ಎಂದರು.ಭರತ್ ಬೊಮ್ಮಾಯಿ ಮಾತನಾಡಿ, ದೇಶಕ್ಕೆ ನರೇಂದ್ರ ಮೋದಿಯಂತಹ ಜ್ಯಾತ್ಯಾತೀತ ಜನನಾಯಕ ಬೇಕಾಗಿದ್ದಾರೆ. ಆರ್ಥಿಕತೆಯಲ್ಲಿ 11ನೇ ಸ್ಥಾನದಲ್ಲಿದ್ದ ನಮ್ಮ ದೇಶ ಇದೀಗ 5ನೇ ಸ್ಥಾನಕ್ಕೆ ಬಂದಿದೆ. 2047ಕ್ಕೆ ಭಾರತ ನಂ.1 ದೇಶವಾಗಬೇಕು ಎನ್ನುವುದು ಮೋದಿಯವರ ಕನಸು. ಅದನ್ನು ನನಸು ಮಾಡಲು ಎಲ್ಲರೂ ಕಂಕಣಬದ್ದರಾಗೋಣ. ಏ.14 ರಂದು ಗದಗ ನಗರದಲ್ಲಿ ಮಾಜಿ ಸಚಿವ ಸಿ.ಟಿ. ರವಿ ನೇತೖತ್ವದಲ್ಲಿ ಬೖಹತ್ ಬೈಕ್ ರ್ಯಾಲಿ ಹಾಗೂ ಯುವ ಸಮಾವೇಶ ಜರುಗಲಿದೆ ಎಂದರು.