ಕನ್ನಡಪ್ರಭ ವಾರ್ತೆ ಕೋಲಾರಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಮತ್ತು ಇತರೆ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣ ಶೇ. 56ಕ್ಕೆ ಹೆಚ್ಚಳ ಮಾಡಿರುವ 2022ರ ಕಾಯ್ದೆ ಶೆಡ್ಯುಲ್ 9ಕ್ಕೆ ಸೇರ್ಪಡೆ ಮಾಡುವ ಮೂಲಕ ಈ ವರ್ಗಗಳಿಗೆ ಅಗುತ್ತಿರುವ ಅನ್ಯಾಯ ತಡೆಯದೆ ಹೋದರೆ ಯಾವುದೇ ಸ್ವರೂಪದ ಹೋರಾಟಕ್ಕೂ ವಾಲ್ಮೀಕಿ ನಾಯಕ ಸಮುದಾಯವು ಸಿದ್ದವಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ರಾಜ್ಯ ವಾಲ್ಮೀಕಿ ಸಮುದಾಯದ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಎಚ್ಚರಿಕೆ ನೀಡಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ರಾಜಕಾರಣಿಯಾಗಿ ಬಂದಿಲ್ಲ, ಸಮಾಜದ ಪತ್ರಿನಿಧಿಯಾಗಿ ಬಂದಿರುವೆ. ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದಿದೆ. ಸಂವಿಧಾನ ರಚನೆಯಾಗಿ 76 ವರ್ಷಗಳು ಕಳೆದಿದ್ದರೂ ಶೋಷಿತ ಸಮುದಾಯವು ತಮ್ಮ ಹಕ್ಕುಗಳ ರಕ್ಷಣೆಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಅನಿವಾರ್ಯವಾಗಿದೆ ಎಂದರು. ಕಾಯ್ದೆ 195೦ರ ಮೀಸಲಾತಿ ಪ್ರಕಾರ ಎಸ್ಸಿಗಳಲ್ಲಿ 101 ಉಪಜಾತಿಗಳು, ಎಸ್ಟಿಯಲ್ಲಿ 52 ಉಪಜಾತಿಗಳನ್ನು ಗುರುತಿಸಿದೆ. ಎಸ್ಸಿ ಜನಸಂಖ್ಯೆ 1.20 ಕೋಟಿಯಾಗಿದ್ದರೆ, ಎಸ್.ಟಿ. ಜನಸಂಖ್ಯೆ 50 ಲಕ್ಷವಾಗಿದೆ. ಹಿಂದುಳಿದ ವರ್ಗಗಳ ಜನಸಂಖ್ಯೆ 2.40 ಲಕ್ಷ ಕೋಟಿ ಜನಸಂಖ್ಯೆ ಹೊಂದಿದ್ದಾರೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ತೀರ ಹಿಂದುಳಿದ್ದಾರೆ. ಸಂವಿಧಾನ ಬದ್ಧವಾಗಿ ಜನಸಂಖ್ಯಾ ಆಧಾರದ ಮೇಲೆ ಮೀಸಲಾತಿ ನಿಗದಿಪಡಿಸಿದಾಗ ಮಾತ್ರ ಸಮಸಮಾಜ ನಿರ್ಮಾಣವಾಗಲು ಸಾಧ್ಯವಾಗಲಿದೆ ಎಂದು ಹೇಳಿದರು. ಕಳೆದ 1984-85ರಲ್ಲಿ ರಾಮಕೃಷ್ಣ ಹೆಗಡೆ ಆಡಳಿತದಲ್ಲಿ ವೀರಣ್ಣನವರು ಮತ್ತು ತಾವು ಮಾತ್ರ ಸಮುದಾಯದ ಹೆಸರಿನಲ್ಲಿ ಅಕ್ಷರಗಳ ವ್ಯತ್ಯಾಸದಿಂದಾಗಿ ಮೀಸಲಾತಿಯ ಕುರಿತು ನೋಟಿಸ್ಗಳನ್ನು ಜಾರಿ ಮಾಡಿರುವ ಕುರಿತು ನೆನಪಿಸಿಕೊಂಡರು. ಈ ಕುರಿತು ಪರ್ಯಾಯ ಕ್ರಮಕ್ಕೆ ಆಗಿನ ಪ್ರಧಾನಿ ಚಂದ್ರಶೇಖರ್ರಿಗೆ 5 ಪರ್ಯಾಯ ಹೆಸರುಗಳನ್ನು ಮೀಸಲಾತಿಯಲ್ಲಿ ಸೇರ್ಪಡೆ ಮಾಡಲು ಶಿಫಾರಸ್ಸು ಮಾಡಿದ ಸಂದರ್ಭದಲ್ಲಿ ಎಸ್.ಟಿ. ಶೇ. 5ರಿಂದ ಶೇ. 7ಕ್ಕೆ ಮೀಸಲಾತಿ ಏರಿಕೆ ಮಾಡಲಾಯಿತು. ಎಸ್.ಸಿ ಮೀಸಲಾತಿ 17.1ರಷ್ಟು ಮಾಡಲಾಗಿದೆ. ಇದರಿಂದಾಗಿ ಶೈಕ್ಷಣಿಕವಾಗಿ. ಉದ್ಯೋಗದಲ್ಲಿ, ರಾಜಕೀಯವಾಗಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲೂ ಮೀಸಲಾತಿಯಿಂದಾಗಿ ಸ್ಥಾನಮಾನ ಪಡೆಯಲು ಸಾಧ್ಯವಾಗಿದೆ ಎಂದರು.2022ರ ಕಾಯ್ದೆ ಭಾರತದ ಸಂವಿಧಾನದ 9ನೇ ಶೆಡ್ಯೂಲ್ಗೆ ಸೇರಿಸಲು ಮತ್ತು ಅನುಚ್ಚೇದ 15 ಮತ್ತು 16ಕ್ಕೆ ಏರಿಕೆಯ ತಿದ್ದುಪಡಿ ತರಲು ಕೇಂದ್ರ ಸರ್ಕಾರದ ಬಳಿ ಎಲ್ಲಾ ಪಕ್ಷಗಳನ್ನೊಳಗೊಂಡಂತೆ ನಿಯೋಗವು ತೆರಳಬೇಕೆಂದು ಸಿಎಂ ಸಿದ್ದರಾಮಯ್ಯರಿಗೆ ಆಗ್ರಹಪಡಿಸಿದರು.ಈ ಹಿಂದೆ ಹೋರಾಟದಿಂದಾಗಿ ಶೇ. 50ರಷ್ಟು ಇದ್ದ ಮೀಸಲಾತಿ ಪ್ರಮಾಣ ಶೇ.56ಕ್ಕೆ ಏರಿಕೆ ಮಾಡಲಾಗಿತ್ತು, ಎಸ್ಸಿಗೆ ಶೇ. 17, ಎಸ್.ಟಿ.ಗೆ ಶೇ.5 ಹಾಗೂ ಹಿಂದುಳಿದ ವರ್ಗಗಳಿಗೆ ಶೇ.32ರಷ್ಟು ಮಾಡಲಾಗಿದೆ. ಇದಕ್ಕೆ ಕೆಲವು ಪಟ್ಟಭದ್ರ ಹಿತಸಕ್ತರು ಹೈಕೋರ್ಟ್ ತಡೆಯಾಜ್ಷೆ ನೀಡಿರುವುದರಿಂದ ಕಳೆದ ಎರಡು ವರ್ಷಗಳಿಗೆ ಈ ಸಮುದಾಯಗಳು ಶೈಕ್ಷಣಿಕವಾಗಿ ಔದ್ಯೋಗಿಕವಾಗಿ ಹಾಗೂ ರಾಜಕೀಯವಾಗಿ ವಂಚನೆಗೆ ಒಳಗಾಗಿದೆ. ಅನುಚ್ಛೇದ 15 ಮತ್ತು 16ಕ್ಕೆ ತಿದ್ದುಪಡಿ ತರುವ ಮೂಲಕ ಪರಿಶಿಷ್ಟ ಸಮುದಾಯದ ಮೀಸಲಾತಿ ಶೇ. 7 ರಿಂದ ಶೇ. 10ಕ್ಕೆ ಏರಿಕೆ ಮಾಡಬೇಕೆಂದು ಒತ್ತಾಯಿಸಿದರು. ಪ್ರಧಾನ ಮಂತ್ರಿಗಳು ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭಗಳಲ್ಲಿ ಹಲವಾರು ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವುದಾಗಿ ಭರವಸೆ ನೀಡಿ ಜನತೆಯ ದಿಕ್ಕು ತಪ್ಪಿಸಿದರು. ಆದರೆ ಭರವಸೆ ನೀಡಿದ ಸಮುದಾಯಗಳನ್ನು ಎಸ್.ಸಿ, ಎಸ್.ಟಿಗೆ ಸೇರ್ಪಡೆ ಮಾಡಲಿಲ್ಲ. ನುಡಿದಂತೆ ನಡೆಯಲೂ ಇಲ್ಲ. ಇದರಿಂದಾಗಿ ಇಂದು ಸಾಕಷ್ಟು ಜನ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿರುವುದು ಆಗಾಗ್ಗೆ ಬೆಳಕಿಗೆ ಬರುತ್ತಿದೆ. ಇದಕ್ಕೆ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ನಾಯಕರುಗಳೇ ಕಾರಣವಾಗಿದ್ದಾರೆ ಎಂದು ದೂರಿದರು. ರಾಜ್ಯದ ಬಜೆಟ್ನಲ್ಲಿ ಎಸ್.ಟಿ ಸಮುದಾಯದ ಜನಸಂಖ್ಯೆ ಅನುಗುಣವಾಗಿ ಎಲ್ಲಾ ಮಠಗಳ ಹಾಗೂ ಶಾಲಾ, ಕಾಲೇಜುಗಳ ಅಭಿವೃದ್ಧಿಗೆ 2 ಕೋಟಿ ರು. ಅನುದಾನ ಹಾಗೂ ಪ್ರಾರಂಭದ ಹಂತದಲ್ಲಿರುವುದಕ್ಕೆ 1 ಕೋಟಿ ರು. ಅನುದಾನ ಬಿಡುಗಡೆ ಮಾಡಬೇಕು. ಕೋಲಾರದ ಆವಣಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರು. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 25 ಕೋಟಿ ರು. ಅನುದಾನವನ್ನು ನಿಗದಿಪಡಿಸಿ ಬಿಡುಗಡೆ ಮಾಡಬೇಕು. ಈ ಸಂಬಂಧವಾಗಿ ಜನಪ್ರತಿನಿಧಿಗಳು ಧ್ವನಿಗೊಡಿಸ ಬೇಕೆಂದು ಮನವಿ ಮಾಡಿದರು
ಈಗಾಗಲೇ ತಮಿಳುನಾಡಿನಲ್ಲಿ ಶೆಡ್ಯೊಲ್ 9ಕ್ಕೆ ಸೇರ್ಪಡೆ ಮಾಡಿದ ಹಿನ್ನೆಲೆಯಲ್ಲಿ ಮೀಸಲಾತಿ ಪ್ರಮಾಣವು 69ಕ್ಕೆ ಏರಿಕೆಯಾಗಿದೆ. ಅದೇ ರೀತಿ ನಮ್ಮ ಕರ್ನಾಟಕದಲ್ಲೂ ಬದಲಾವಣೆ ತರಲು ಪಕ್ಷಾತೀತವಾಗಿ ಎಲ್ಲಾ ಜನಪ್ರತಿನಿಧಿ ಧ್ವನಿ ಎತ್ತ ಬೇಕಾಗಿದೆ.
ವಿ.ಎಸ್. ಉಗ್ರಪ್ಪ, ಕಾಂಗ್ರೆಸ್ ಮುಖಂಡ