ಬನಹಟ್ಟಿ ಮಾದಲಿಗೆ ಹೆಚ್ಚಿದ ಬೇಡಿಕೆ

KannadaprabhaNewsNetwork |  
Published : May 24, 2024, 12:47 AM IST
ಜಾತ್ರಾ ವಿಶೇಷವಾಗಿದ್ದ ಬನಹಟ್ಟಿ ಮಾದ್ಲಿ ಇದೀಗ ಗ್ರಾಹಕರ ನಂ೧ ಐಟಂ ! | Kannada Prabha

ಸಾರಾಂಶ

ಹಬ್ಬ-ಹರಿದಿನಗಳಿಗೆ ಮಾತ್ರ ಸೀಮಿತವಾಗಿದ್ದ ಉತ್ತರ ಕರ್ನಾಟಕದ ಮಾದಲಿ ಈಗ ಪ್ರತಿ ಜಾತ್ರೆಯಲ್ಲಿಯೂ ಸಿಹಿ ತಿನಿಸಾಗಿ ಬಳಕೆಯಾಗುತ್ತಿದೆ.

ಶಿವಾನಂದ ಪಿ.ಮಹಾಬಲಶೆಟ್ಟಿಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಹಬ್ಬ-ಹರಿದಿನಗಳಿಗೆ ಮಾತ್ರ ಸೀಮಿತವಾಗಿದ್ದ ಉತ್ತರ ಕರ್ನಾಟಕದ ಮಾದಲಿ ಈಗ ಪ್ರತಿ ಜಾತ್ರೆಯಲ್ಲಿಯೂ ಸಿಹಿ ತಿನಿಸಾಗಿ ಬಳಕೆಯಾಗುತ್ತಿದೆ. ವರ್ಷಪೂರ್ತಿ ಬೇಡಿಕೆ ಪಡೆದುಕೊಂಡು ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಪಡೆದಿದೆ. ನೇಕಾರ ನಗರಿ ರಬಕವಿ-ಬನಹಟ್ಟಿಯಲ್ಲಿ ತಯಾರಾಗುತ್ತಿರುವ ಮುಂಬೈ ಮಾದ್ಲಿ ಎಂದೇ ಖ್ಯಾತಿ ಪಡೆದಿರುವ ಬನಹಟ್ಟಿ ಮಾದಲಿಗೆ ಬೇಡಿಕೆ ಹೆಚ್ಚಿದ್ದು, ತನ್ನದೇ ಆದ ಬ್ರ್ಯಾಂಡ್‌ ಸೃಷ್ಟಿಸಿಕೊಂಡಿದೆ.

ಮುಂಚೆ ಉತ್ತರ ಕರ್ನಾಟಕದ ಪ್ರತಿ ಮನೆಯಲ್ಲಿಯೂ ಮಾದ್ಲಿಯನ್ನು ಆಗಾಗ್ಗೆ ಮಾಡಿಕೊಂಡು ಸವಿಯುತ್ತಿದ್ದರು. ಆದರೆ, ಇಂದಿನ ನವಪೀಳಿಗೆ ಪೌಷ್ಟಿಕವಾದ ಮಾದಲಿ ಬದಲಾಗಿ ನೂಡಲ್ಸ್, ಪಾನಿಪುರಿ, ಸೇವಪುರಿಯಂಥ ಜಂಕ್ ಫುಡ್‌ಗಳಿಗೆ ಜೋತುಬಿದ್ದ ಪರಿಣಾಮ ಮಾದಲಿ ನೇಪಥ್ಯಕ್ಕೆ ಸರಿದು ಕೇವಲ ಸಂಕ್ರಾಂತಿ ಹಬ್ಬಕ್ಕೆ ಮಾತ್ರ ಸೀಮಿತ ಎಂಬಂತಾಗಿದೆ. ಆದರೆ, ಈಚೆಗೆ ಜಿಲ್ಲೆಯಲ್ಲಿ ಮಾದಲಿಗೆ ಮತ್ತೆ ಬೇಡಿಕೆ ಬಂದಿದ್ದು, ಬನಹಟ್ಟಿಯ ಬಾಣಸಿಗ(ಅಡುಗೆ ತಯಾರಕ) ರಾಜು ಸಂಗಪ್ಪ ಕಡ್ಲಿ ಎಂಬುವವರ ಮಾದಲಿ ಋಚಿ ಹೆಸರುವಾಸಿಯಾಗಿದೆ. ಜಿಲ್ಲೆ ಸೇರಿದಂತೆ ಹೊರಜಿಲ್ಲೆಗಳ ಪ್ರತಿಯೊಂದು ಜಾತ್ರೆಗಳಿಗೆ ಕ್ವಿಂಟಾಲ್‌ಗಟ್ಟಲೆ ಮಾದಲಿ ಮಾಡಿ ಒದಗಿಸುತ್ತಿದ್ದಾರೆ.

ಒಂದೇ ದಿನ ೧ ಟನ್ ಮಾದಲಿ ಪೂರೈಕೆ: ಹುಬ್ಬಳ್ಳಿಯ ದಾಮನಕಟ್ಟೆ ಹಾಗೂ ಜಮಖಂಡಿಯ ಕೊಣ್ಣೂರ ಗ್ರಾಮದ ದ್ಯಾಮವ್ವನ ಜಾತ್ರೆಗೆ ಭಕ್ತರ ವಿಶೇಷ ಭೋಜನಕ್ಕೆ ತಲಾ ೬ ಕ್ವಿಂಟಾಲ್ ಹಾಗೂ ೪ ಕ್ವಿಂಟಾಲ್‌ನಷ್ಟು ಮಾದಲಿ ತಯಾರಿಸಿ ಕಳಿಸಿರುವುದು ರಾಜು ಕಡ್ಲಿಯ ಹೆಗ್ಗಳಿಕೆಯಾಗಿದೆ.ಮಾದಲಿ ತಯಾರಿ ಹೇಗೆ ? : ಗೋಧಿ, ಕಡ್ಲಿ ಬೇಳೆ, ಅಕ್ಕಿಯ ಮಿಶ್ರಣ, ಬೆಲ್ಲ, ಸಕ್ಕರೆ ಹಾಕಿ ಹಿಟ್ಟು ಮತ್ತು ಬೆಲ್ಲ ಹಾಗೂ ಸಕ್ಕರೆ ಒಂದಾಗುವವರೆಗೆ ಅದನ್ನು ಶುಚಿಯಾದ ಕೈಯಿಂದ ಮಿದ್ದುವರು. ಒಣ ಕೊಬ್ಬರಿ, ಗಸಗಸಿ, ಜಾಜಿಕಾಯಿ ಹಾಕಿ ಮಿಕ್ಸ್‌ ಮಾಡಲಾಗುತ್ತದೆ. ಇನ್ನು ಮುಂಬಯಿ ಮಾದಲಿ ಮಾಡಲು ಗೋಡಂಬಿ, ಒಣದ್ರಾಕ್ಷಿ, ಕ್ಯಾರಬೀಜ ಮಿಶ್ರಣ ಮಾಡುತ್ತಾರೆ.

ಮುಂಬಯಿ ಮಾದಲಿ ಫೇಮಸ್‌: ಶತಮಾನದ ಹಿಂದಿನಿಂದಲೂ ರಬಕವಿ-ಬನಹಟ್ಟಿಯಲ್ಲಿ ಮಾದಲಿ ತಯಾರಿಸುವುದು ರೂಢಿಯಲ್ಲಿದೆ. ಗೋಡಂಬಿ, ಒಣದ್ರಾಕ್ಷಿ, ಕ್ಯಾರಬೀಜ ಖರೀದಿಸಬೇಕಾದರೆ ಮುಂಬಯಿಗೇ ತೆರಳಬೇಕಾದ ಅನಿವಾರ್ಯತೆಯಿತ್ತು. ಛೋಟಾ ಮುಂಬಯಿ ಎಂದೇ ಖ್ಯಾತಿಯ ರಬಕವಿಯಿಂದ ಮುಂಬಯಿ ಜೊತೆಗೆ ಆಗಿನ ಕಾಲದಲ್ಲಿ ನೇರ ವ್ಯವಹಾರವಿತ್ತು. ರಬಕವಿ ಮೂಲಕ ಖರೀದಿಯಾಗುತ್ತಿದ್ದ ಮತ್ತು ಸುಲಭವಾಗಿ ಒಣ ಹಣ್ಣುಗಳ ಆಮದು ಕಾರಣಕ್ಕೆ ಮುಂಬಯಿ ಮಾದಲಿ ಅಂದಿನಿಂದಲೂ ಪ್ರಸಿದ್ಧಿಯಾಗಿದೆ.

ವಿದೇಶಕ್ಕೂ ರಫ್ತು: ರಾಜ್ಯ, ರಾಷ್ಟ್ರವಷ್ಟೇ ಅಲ್ಲದೆ ಕರ್ನಾಟಕದಿಂದ ವಿದೇಶದಲ್ಲಿ ನೆಲೆಸಿರುವವರ ಪೈಕಿ ದುಬೈ, ಅಮೆರಿಕ ಸೇರಿದಂತೆ ಹಲವಾರು ಕಡೆ ಮಾದಲಿ ರಫ್ತು ಮಾಡುವಲ್ಲಿ ಹೆಸರಾಗಿದ್ದಾರೆ ಬಾಣಸಿಗ ರಾಜು ಕಡ್ಲಿ.

ಮಾದಲಿ ತಯಾರಿಕೆಯಲ್ಲಿ ಹಲವಾರು ವಿಧಗಳಿವೆ. ಸಾಮಾನ್ಯ ಮಾದಲಿ ಪ್ರತಿಕೆಜಿಗೆ ₹ ೧೬೦ ರಿಂದ ಪ್ರಾರಂಭವಾಗಿ ಉತ್ಕೃಷ್ಟವಾದ ಒಣ ಹಣ್ಣುಗಳ ಮಿಶ್ರಣವಿರುವ ಮಾದಲಿ ಕೆ.ಜಿ.ಗೆ ₹ ೩೫೦ವರೆಗೂ ಮಾರಾಟವಾಗುತ್ತದೆ. ನಿಮಗೂ ಬನಹಟ್ಟಿಯ ಶುಚಿ-ರುಚಿ ಪೌಷ್ಟಿಕ ಮಾದಲಿ ಬೇಕಾದರೆ ಒಮ್ಮೆ ೯೧೬೪೧-೬೦೭೭೪ ನಂಬರ್‌ ಸಂಪರ್ಕಿಸಿ ಆಸ್ವಾದಿಸಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ