ಹೊಸಪೇಟೆ: ಅಸಮಾನತೆಯ ಬದುಕಿಗೆ ವಿದಾಯ ಹೇಳಿ ಸಮಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಶ್ರಮಿಸಲು ಮುಂದಾಗಬೇಕು ಎಂದು ವಿಜಯನಗರ ಮಹಾವಿದ್ಯಾಲಯದ ಪ್ರಾಚಾರ್ಯರು ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕ ಶಿಬಿರಾಧ್ಯಕ್ಷ ಮಹಾಂತೇಶ ಎನ್. ಆರಾಧ್ಯಮಠ ಹೇಳಿದರು.

ತಾಲೂಕಿನ ಹೊಸೂರಿನ ಹೊಸೂರಮ್ಮ ದೇವಸ್ಥಾನದಲ್ಲಿ ವಿಜಯನಗರ ಮಹಾವಿದ್ಯಾಲಯ ಹೊಸಪೇಟೆ ಮತ್ತು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಮ್ಮಿಕೊಂಡಿದ್ದ 2025-2026ನೇ ಶೈಕ್ಷಣಿಕ ವರ್ಷದ ‘ವಿಶೇಷ ಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಹೊಸೂರಿನಲ್ಲಿ ನಡೆದ ಎನ್‌ಎಸ್‌ಎಸ್‌ ಶಿಬಿರವು ಮಾ. 9 ರಿಂದ 15 ವರೆಗೆ ಏಳು ದಿನಗಳ ಶಿಬಿರದಲ್ಲಿ ವಿದ್ಯಾರ್ಥಿಗಳು ಸಲ್ಲಿಸಿದ ಸೇವೆ ಮತ್ತು ಶಿಬಿರದಲ್ಲಿ ನಡೆದ ವಿಷಯವಾರು ಚರ್ಚಿಸಿದ ಸಂಗತಿಗಳು ಬದುಕಿನ ಪಾಠಗಳಾಗಬೇಕು. ಇಂಥಹ ಶಿಬಿರಗಳಲ್ಲಿ ತೊಡಗಿಕೊಂಡಾಗ ಮಾತ್ರ ನಾವೆಲ್ಲರೂ ಒಂದೇ ಎನ್ನುವ ಭಾವ ಮೂಡಲು ಸಾಧ್ಯವಾಗಲಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂದು ಅರಿತುಕೊಂಡು ನಾವೆಲ್ಲರೂ ಜೀವನ ಸಾಗಿಸಬೇಕಾಗಿದೆ ಎಂದು ಅವರು ಹೇಳಿದರು.

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಾ. ಸೇ. ಯೋ. ಸಂಯೋಜಕ ಡಾ. ಕುಮಾರ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ತರಗತಿಯಿಂದ ಕಲಿಯಲಾಗದ ಅನೇಕ ಸಂಗತಿಯನ್ನು ಎನ್‌ಎಸ್‌ಎಸ್ ಶಿಬಿರ ಕಲಿಸುತ್ತದೆ. ವಿದ್ಯಾರ್ಥಿಗಳಲ್ಲಿ ಅರ್ಪಣ ಮನೋಭಾವನೆಯನ್ನು ಬೆಳೆಸುತ್ತದೆ. ಎ. ಆಯ್. ಸಂದರ್ಭದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಯುವಕ-ಯುವತಿಯರು ಅಂತಹ ಸನ್ನಿವೇಶಗಳಿಗೆ ಅವಕಾಶ ನೀಡಬಾರದು ಎಂದು ಅವರು ಹೇಳಿದರು.

ವಿಜಯನಗರ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಎನ್. ಮಲ್ಲಿಕಾರ್ಜುನ ಮೆಟ್ರಿ ಸಮಾರಂಭದ ಅಧ್ಯತೆವಹಿಸಿಕೊಂಡು ಮಾತನಾಡಿ, ಎನ್ಎಸ್‌ಎಸ್‌ ವಿಶೇಷ ಶಿಬಿರಗಳು ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿವೆ. ವಿದ್ಯಾರ್ಥಿಗಳು ಸೇವಾ ಮನೋಭಾವನೆಯನ್ನು ಬೆಳಸಿಕೊಂಡು ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು ಎಂದು ಅವರು ಹೇಳಿದರು.


ಸ್ಥಳೀಯ ಮುಖಂಡರಾದ ಹೊಸೂರಿನ ಸುದರ್ಶನ ನಾಯಕ ಹಾಗೂ ಡಾ. ರವಿ ಕಿರಣ ಡಿ., ಎನ್. ಎಸ್. ಎಸ್‌ಘಟಕದ ಸಂಯೋಜಕ ಡಾ. ಗಾದೆಪ್ಪ ಮತ್ತು ಡಾ. ವೀರೇಶ್‌ ಟಿ. ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸ್ವಾಮಿ ವಿವೇಕನಂದ ಗುಂಪಿನ ಶಿಬಿರಾರ್ಥಿಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು.