ಹರಪನಹಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗಳ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಶುಕ್ರವಾರ ಪಟ್ಟಣದಲ್ಲಿ ಅನಿರ್ದಿಷ್ಟ ಮುಷ್ಕರ ನಡೆಸಿದರು.
ನೌಕರರ ಪಿಂಚಣಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ 12 24, ಮತ್ತು 36 ವರ್ಷಗಳ ಸೇವೆ ಸಲ್ಲಿಸಿದ ಜಿಡಿಎಸ್ ನೌಕರರಿಗೆ ವಿಶೇಷ ಭತ್ಯೆ ನೀಡಬೇಕು. ಗ್ರಾಚ್ಯುಟಿ ಮೇಲಿನ ಗರಿಷ್ಠ ಮೊತ್ತವಾದ ₹1.5 ಲಕ್ಷ ಮಿತಿಯನ್ನು ತೆಗೆದು ಹಾಕಿ ಕಮಲೇಶಚಂದ್ರ ಸಮಿತಿ ಶಿಫಾರಸು ಮಾಡಿದಂತೆ ಗರಿಷ್ಠ ₹5 ಲಕ್ಷಗಳವರೆಗೆ ಗ್ರಾಚ್ಯುಟಿ ಮೊತ್ತವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ತಾಲೂಕು ಘಟಕದ ಪದಾಧಿಕಾರಿಗಳಾದ ಸಿ.ಎಲ್. ಭಟ್ಟರು, ಮಂಜಪ್ಪ ಬಣಕಾರ, ಮಹಾಲಿಂಗಪ್ಪ ಹುಲಿಕಟ್ಟಿ, ಅಧಿಕಾರ ಮಂಜುನಾಥ್, ರುದ್ರೇಶ ಮೇಗಳಗೇರಿ, ನಿಂಗಪ್ಪ ತಾವರಗೊಂದಿ, ಕರಿಯಪ್ಪ ಕೆರೆಗುಡಿಹಳ್ಳಿ, ಮಂಜುನಾಥ ರಫೀಕ್ ಅಹ್ಮದ್, ತಿಕ್ಯಾನಾಯ್ಕ್, ಲಕ್ಷ್ಮಣ್ನಾಯ್ಕ್, ದುರುಗಪ್ಪ, ಅವೀನಾ ಯಾದವ್ ಸೇರಿದಂತೆ ಅಂಚೆ ನೌಕರರು ಇದ್ದರು.