ಮುಳಗುಂದ: ನಮ್ಮ ಭಾರತ ದೇಶ ಪುಣ್ಯ ಭೂಮಿ, ಈ ನಾಡಿನಲ್ಲಿ ಮಹಾನ್, ಸಂತರು, ಶರಣರು, ವ್ಯಕ್ತಿಗಳು ಹುಟ್ಟಿ ದೇಶವನ್ನು ಸಾಂಸ್ಕೃತಿಕವಾಗಿ ಸಮೃದ್ಧವಾಗಿ ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.
ಪಟ್ಟಣದ ಎಸ್.ಜೆ.ಜೆ.ಎಂ ಸಂಯುಕ್ತ ಪಪೂ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಶ್ರೀ ಗ್ರಾಮ ದೇವತೆಯ ಟೋಪ ಜಾತ್ರಾ ಮಹೋತ್ಸವದ ಧರ್ಮಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 12 ವರ್ಷದ ನಂತರ ಶಕ್ತಿ ದೇವಿಯ ಜಾತ್ರೆಯ ಅದ್ಧೂರಿಯಾಗಿ ಮಾಡುತ್ತಿರುವುದನ್ನು ನೋಡಿದರೆ ಸಂತೋಷವಾಗುತ್ತೇ. ಇದೆಲ್ಲಾ ನೋಡಿದರೆ ನಮ್ಮ ಸಂಸ್ಕೃತಿ ಎಷ್ಟೊಂದು ಶ್ರೀಮಂತವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಈ ರೀತಿಯ ಧಾರ್ಮಿಕ ಆಚರಣೆಗಳಿಂದ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸುವಂತಹ ಕೆಲಸವಾಗುತ್ತದೆ ಎಂದರು.ಗ್ರಾಮ ದೇವತೆಯರ ಜಾತ್ರೆಯನ್ನು ಊರ ಸಂರಕ್ಷಣೆ, ಊರಿನ ಸಮೃದ್ಧಿಗಾಗಿ, ದೇವಿಯರ ಶಾಂತಿಗಾಗಿ ಜಾತ್ರೆಯನ್ನು ಮಾಡುತ್ತೇವೆ ಎಂದು ನಮ್ಮ ಪೂರ್ವಜರು ಹೇಳುತ್ತಾರೆ. ದೇವನೊಬ್ಬ ನಾಮ ಹಲವು ಎಂಬ ತತ್ವವನ್ನು ಬಸವಣ್ಣನವರು ಸಾರಿದ್ದಾರೆ. ದೇವರಲ್ಲಿ ನಂಬಿಕೆ ಇಟ್ಟು, ಶ್ರದ್ಧಾ, ಭಕ್ತಿಯಿಂದ ಆರಾಧನೆ ಮಾಡಿದರೆ ನಮ್ಮ ಕಷ್ಟಗಳು ಪರಿಹಾರವಾಗುತ್ತವೆ, ಶಾಂತಿ ನೆಮ್ಮದಿ ನೆಲೆಸುತ್ತದೆ ಎಂದರು.ಸದಾ ಕ್ಷೇತ್ರದ ಅಭಿವೃದ್ಧಿಗಾಗಿ ಚಿಂತನೆಯನ್ನು ಸಚಿವ ಎಚ್.ಕೆ. ಪಾಟೀಲರು ಮಾಡುತ್ತಾರೆ. ಅವರೊಬ್ಬ ಮುತ್ಸದ್ಧಿ ಹಿರಿಯ ರಾಜಕಾರಣಿ, ಅಂತವರನ್ನ ನೀವು ಆಯ್ಕೆ ಮಾಡಿದ್ದೀರಾ. ಪ್ರವಾಸೋದ್ಯಮ ಇಲಾಖೆ ಸಚಿವರಾಗಿ ಅವರು ಸವದತ್ತಿ ರೇಣುಕಾ ಯಲ್ಲಮ್ಮ ಶ್ರೀಕ್ಷೇತ್ರವನ್ನು 110(ನೂರು ಹತ್ತು) ಕೋಟಿ ಅನುದಾನ ತಂದು ದೇವಸ್ಥಾನದ ಅಭಿವೃದ್ಧಿಯನ್ನು ಮಾಡಿದ್ದಾರೆ ಎಂದು ತಿಳಿಸಿದರು.ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೇ 19 ಕಂತು ನೇರವಾಗಿ ನಿಮ್ಮ ಖಾತೆಗೆ ಬಂದಿದೆ. ಹಾಗೇ 20ನೇ ಕಂತನ್ನು ಮೊನ್ನೆ ತಾನೆ ಹಾಕಲಾಗಿದೆ. ಮಹಿಳಾ ಸಬಲೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿದೆ. ನಾಡಿನ ಸಂತರು, ಶರಣರು ಮಹಿಳಾ ಶಸಕ್ತೀಕರಣ, ಸಬಲೀಕರಣ, ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಆಸೆಯನ್ನ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಸಾಕಾರ ಮಾಡಿದೆ ಎಂದರು.ವಿಪ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ,7 ಧರ್ಮಗಳು, 3 ಸಾವಿರ ಜಾತಿ, 20 ಸಾವಿರ ಉಪ ಜಾತಿಗಳಿದ್ದರು ಕೂಡ ನಮ್ಮ ದೇಶ ವಿವಿಧೆತೆಯಲ್ಲಿ ಏಕತೆಯನ್ನು ಕಾಣಬಹುದು. ಅದಕ್ಕೆ ಸಾಕ್ಷಿ ಎಂಬಂತೆ ಈ ಟೋಪ ಜಾತ್ರೆ ನೋಡಿದರೆ ತಿಳಿಯುತ್ತೆ. ಜಾತಿ, ಮತ, ಪಂಥ ಎನ್ನದೇ ಸೌಹಾರ್ದತೆಯಿಂದ ಎಲ್ಲರೂ ಒಂದಾಗಿ ದೇವಿ ಜಾತ್ರೆಯನ್ನ ಮಾಡುತ್ತಿರುವುದು ಸಂತೋಷ ಎಂದರು.ಈ ವೇಳೆ ಬಳಗಾನೂರ ಚಿಕ್ಕೇನಕೊಪ್ಪ ಚನ್ನವೀರ ಶರಣರ ಮಠದ ಶಿವಶಾಂತ ಶರಣರು, ಗದಗ ಅಡವೀಂದ್ರಸ್ವಾಮಿ ಮಠದ ಮಹೇಶ್ವರ ಸ್ವಾಮಿಗಳು ಹಾಗೂ ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗದೇವರು ಆಶೀರ್ವಚನ ನೀಡಿದರು. ಪ್ರೊ. ವಿ.ಎಸ್. ಮಾಳಿ ಅವರು ಉಪನ್ಯಾಸ ನೀಡಿದರು. ದಾಸೋಹ ಸೇವಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು.ಮಾಜಿ ಶಾಸಕ ಡಿ.ಆರ್. ಪಾಟೀಲ, ಜಾತ್ರ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ, ಪಪಂ ಉಪಾಧ್ಯಕ್ಷೆ ಅನಸೂಯಾ ಸೋಮಗಿರಿ, ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ಅಶೋಕ ಸೋನಗೋಜಿ, ರಾಮಣ್ಣ ಕಾಮಾಜಿ, ಚಂಬಣ್ಣ ಲಕ್ಷ್ಮೇಶ್ವರ, ಮುತ್ತಣ್ಣ ಜಿಟ್ಟಿ, ಮನ್ಸೂರ ಹಣಗಿ, ಬಸವರಾಜ ಹಾರೋಗೇರಿ, ನಾಗರಾಜ ದೇಶಪಾಂಡೆ ಸೇರಿದಂತೆ ಇತರರು ಇದ್ದರು.