- ಅಗ್ನಿ ಸುರಕ್ಷತೆ, ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳಿಂದ ಸವಿಸ್ತಾರ ಮಾಹಿತಿ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು ಕ್ಷೇತ್ರ ಭೇಟಿ ಕಾರ್ಯಕ್ರಮ ಅಂಗವಾಗಿ ಶನಿವಾರ ಹೊನ್ನಾಳಿ ಪಟ್ಟಣದ ಅಗ್ನಿಶಾಮಕ ಠಾಣೆಗೆ ಭೇಟಿ ನೀಡಿ, ಅಗ್ನಿ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಸವಿಸ್ತಾರ ಮಾಹಿತಿ ಪಡೆದರು.ಠಾಣಾಧಿಕಾರಿ ಪರಶುರಾಮ್ ಟಿ.ಆರ್. ಈ ಸಂದರ್ಭ ಮಾತನಾಡಿ, ಅಗ್ನಿ ದುರಂತಗಳನ್ನು ಅವುಗಳ ಸ್ವರೂಪಕ್ಕೆ ಅನುಗುಣವಾಗಿ ಎ, ಬಿ, ಸಿ ಮತ್ತು ಡಿ ಎಂಬ 4 ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಸಾಮಾನ್ಯ ವಸ್ತುಗಳಿಂದ ಉಂಟಾಗುವ ಬೆಂಕಿಯನ್ನು ನೀರಿನ ಮೂಲಕ ಸುಲಭವಾಗಿ ನಂದಿಸಬಹುದು. ಎಣ್ಣೆ ಹಾಗೂ ದಹನಶೀಲ ದ್ರವಗಳಿಂದ ಉಂಟಾಗುವ ಬೆಂಕಿ ನಂದಿಸಲು ಗಾಳಿಯ ಸಂಪರ್ಕವನ್ನು ಕಡಿತಗೊಳಿಸುವುದು ಅತಿ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಅನಿಲಗಳಿಂದ ಉಂಟಾಗುವ ಅಗ್ನಿ ಅವಘಡಗಳ ಸಂದರ್ಭ ತಕ್ಷಣವೇ ಗ್ಯಾಸ್ ಸರಬರಾಜನ್ನು ಸ್ಥಗಿತಗೊಳಿಸಬೇಕು. ವಿದ್ಯುತ್ ಅವಘಡಗಳು ಸಂಭವಿಸಿದಾಗ ಮೊದಲು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ನಂತರವೇ ಸೂಕ್ತ ಅಗ್ನಿನಂದಕ ಉಪಕರಣಗಳನ್ನು ಬಳಸಬೇಕು ಎಂದು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.ಅಗ್ನಿಶಾಮಕ ಠಾಣೆ ಸಿಬ್ಬಂದಿ ಕೇವಲ ಸೈದ್ಧಾಂತಿಕ ಮಾಹಿತಿಗಷ್ಟೇ ಸೀಮಿತವಾಗದೇ, ವಿವಿಧ ಅಗ್ನಿಶಾಮಕ ಉಪಕರಣಗಳನ್ನು ಬಳಸುವ ವಿಧಾನಗಳ ಕುರಿತು ಪ್ರಾಯೋಗಿಕ ಪ್ರಾತ್ಯಕ್ಷಿಕೆ ನೀಡಿದರು. ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಕೂಡಲೇ 08188- 251400 ನಂಬರ್ಗೆ ಕರೆ ಮಾಡುವಂತೆ ತಿಳಿಸಿದರು.
ಠಾಣೆ ಸಿಬ್ಬಂದಿ ಗದ್ದಿಗೇಶ್, ನಿರಂಜನ್, ಶ್ರೀನಿವಾಸ್, ಪ್ರದೀಪ್ ಕುಮಾರ್, ಶಶಿಕುಮಾರ್ ಹಾಗೂ ಶಾಲಾ ಶಿಕ್ಷಕರಾದ ಗಿರೀಶ್ ಎನ್.ಎಂ, ಅಶೋಕ್ ಎಚ್, ಸಯ್ಯದ್, ಪರಶುರಾಮ್ ಮತ್ತು ಅನುಷಾ ಈ ಸಂದರ್ಭ ಇದ್ದರು.- - -
-8ಎಚ್.ಎಲ್.ಐ2.ಜೆಪಿಜಿ:ಹೊನ್ನಾಳಿ ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು ಕ್ಷೇತ್ರ ಭೇಟಿ ಕಾರ್ಯಕ್ರಮ ಅಂಗವಾಗಿ ಶನಿವಾರ ಹೊನ್ನಾಳಿ ಪಟ್ಟಣದ ಅಗ್ನಿಶಾಮಕ ಠಾಣೆಗೆ ಭೇಟಿ ನೀಡಿ ಅಗ್ನಿ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳಿಂದ ಉಪಯುಕ್ತ ಮಾಹಿತಿ ಪಡೆದುಕೊಂಡರು.