ಇಸ್ರೇಲ್‌ನಲ್ಲಿ ಮೊದಲ ಬಾರಿಗೆ ಭಯಗೊಂಡ ಭಾರತೀಯರು

KannadaprabhaNewsNetwork | Published : Jun 17, 2025 4:02 AM

ನಿರಂತರ ಯುದ್ಧದಲ್ಲೇ ತೊಡಗಿದ್ದರೂ ಮೊದಲೆಂದೂ ಆಗದ ಭಯ ಇರಾನ್ ವಿರುದ್ಧದ ಯುದ್ಧದಲ್ಲಿ ಇಸ್ರೇಲಿಗರು ಹಾಗೂ ಇಸ್ರೇಲಿನಲ್ಲಿರುವ ಭಾರತೀಯರಿಗೆ ಆಗುತ್ತಿದೆ.

‍‍ವಸಂತಕುಮಾರ್ ಕತಗಾಲ

ಕಾರವಾರ: ನಿರಂತರ ಯುದ್ಧದಲ್ಲೇ ತೊಡಗಿದ್ದರೂ ಮೊದಲೆಂದೂ ಆಗದ ಭಯ ಇರಾನ್ ವಿರುದ್ಧದ ಯುದ್ಧದಲ್ಲಿ ಇಸ್ರೇಲಿಗರು ಹಾಗೂ ಇಸ್ರೇಲಿನಲ್ಲಿರುವ ಭಾರತೀಯರಿಗೆ ಆಗುತ್ತಿದೆ. ಭಾರತೀಯರು ಈಗ ತಾಯ್ನಾಡಿಗೆ ಮರಳಲು ಕಾತರದಿಂದ ಇದ್ದಾರೆ.

ನಾಲ್ಕು ದಿನಗಳಿಂದ ರಾತ್ರಿ ಆಯಿತೆಂದರೆ ಸೈರನ್ ಮೊರೆತ. ಇರಾನ್ ಮಿಸೈಲ್ ಗಳನ್ನು ಐರನ್ ಡೋಮ್ ಹೊಡೆದುರುಳಿಸುವ ಕಿವಿಗಡಚಿಕ್ಕುವ ಶಬ್ದ ಬೆಚ್ಚಿ ಬೀಳಿಸುತ್ತಿದೆ. ಆ ಬೆಳಕು ರಾತ್ರಿಯನ್ನೂ ಹಗಲಾಗಿಸುತ್ತದೆ. ಜೊತೆಗೆ ಒಮ್ಮೆಲೇ ನೂರಾರು ಕ್ಷಿಪಣಿಗಳು ದಾಳಿ ಇಡುವುದರಿಂದ ಐರನ್ ಡೋಮ್ ಕಣ್ಣು ತಪ್ಪಿಸಿ ಕೆಲವು ಮಿಸೈಲ್ ಗಳು ಅಪ್ಪಳಿಸುತ್ತಿವೆ. ಭಾನುವಾರ ರಾತ್ರಿ ಟೆಲ್ ಅವೀವ್ ಗೆ ಎರಡು ಮಿಸೈಲ್ ಗಳು ಅಪ್ಪಳಿಸಿವೆ. ಒಂದು ಮಿಸೈಲ್ ಪಿತೆಟಿಕ್ವಾದಲ್ಲಿನ ಕಟ್ಟಡವನ್ನೇ ಉರುಳಿಸಿದೆ. ಪ್ರತಿ ದಿನ 2-3 ಜನರು ಸಾವಿಗೀಡಾಗುತ್ತಿದ್ದಾರೆ.

2024ರ ಅಕ್ಬೋಬರ್ 10ರಂದು ಹಮಾಸ್ ಒಮ್ಮೆಲೇ 400ರಷ್ಟು ಮಿಸೈಲ್ ಗಳನ್ನು ಉಡಾಯಿಸಿದಾಗ ಇಸ್ರೇಲಿ ಜನತೆ ಭಯಗೊಂಡಿದ್ದರು. ಅದಾದ ಮೇಲೆ ಹಮಾಸ್, ಹೌತಿ, ಲೆಬನಾನ್, ಯೆಮೆನ್ ಸೇರಿದಂತೆ ಯಾರೇ ದಾಳಿ ನಡೆಸಿದರೂ ಇಸ್ರೇಲಿಗರಾಗಲಿ, ಇಸ್ರೇಲಿನಲ್ಲಿರುವ ಕನ್ನಡಿಗರಾಗಲಿ ಕಿಂಚಿತ್ತೂ ಭಯಗೊಳ್ಳಲಿಲ್ಲ. ಈಗ ಇರಾನ್ ದಾಳಿಯಿಂದ ಕಳವಳ, ಆತಂಕ ಉಂಟಾಗಿದೆ ಎಂದು ಇಸ್ರೇಲಿನಲ್ಲಿರುವ ಕನ್ನಡಿಗರು ಹೇಳುತ್ತಿದ್ದಾರೆ.

ಈ ಹಿಂದೆ ಯುದ್ಧ ನಡೆಯುತ್ತಿದ್ದರೂ ಸೈರನ್ ಆದಾಗ ಅಲ್ಲಿನ ಜನತೆ ಕಟ್ಟಡದ ಕೆಳಭಾಗಕ್ಕೆ ಬಂದು ನಿಲ್ಲುತ್ತಿದ್ದರೇ ಹೊರತು ಬಂಕರ್ ಒಳಗೆ ತೂರಿಕೊಳ್ಳುತ್ತಿರಲಿಲ್ಲ. ಈಗ ಪ್ರತಿ ರಾತ್ರಿಯನ್ನೂ ಬಂಕರ್ ನಲ್ಲೇ ಕಳೆಯುವಂತಾಗಿದೆ.

ಮೊಬೈಲ್‌ನಲ್ಲೇ ಸೈರನ್:

ಇಸ್ರೇಲ್ ವಿರುದ್ಧ ಇರಾನ್ ಕ್ಷಿಪಣಿ ಹಾರಿಸುತ್ತಿದ್ದಂತೆ ಪ್ರತಿ ಇಸ್ರೇಲಿಗಳು, ಇಸ್ರೇಲಿನಲ್ಲಿರುವ ಭಾರತೀಯರ ಮೊಬೈಲನಲ್ಲಿ ಸೈರನ್ ಆಗುತ್ತದೆ. ಆಗಲೆ ಎಲ್ಲರೂ ಎಚ್ಚೆತ್ತುಕೊಳ್ಳುತ್ತಾರೆ. ಈ ತಂತ್ರಜ್ಞಾನ ಇಲ್ಲಿನ ಜನತೆಗೆ ವರದಾನವಾಗಿದೆ. ಇನ್ನು ಮಿಸೈಲ್ ಬೀಳುವ 20 ಸೆಕೆಂಡ್ ಮೊದಲು ಸಾರ್ವಜನಿಕವಾಗಿ ಸೈರನ್ ಮೊಳಗುತ್ತದೆ ಎಂದು ಇಸ್ರೇಲಿನಲ್ಲಿರುವ ಉತ್ತರ ಕನ್ನಡದವರೊಬ್ಬರು ಕನ್ನಡಪ್ರಭದೊಂದಿಗೆ ಅಭಿಪ್ರಾಯ ಹಂಚಿಕೊಂಡರು.

ಈ ನಡುವೆ ಇಸ್ರೇಲಿನಲ್ಲಿರುವ ಕನ್ನಡಿಗರ ಕುಟುಂಬದವರು ಹಾಗೂ ಬಂಧುಗಳು ತಮ್ಮವರ ಸುರಕ್ಷತೆ ಬಗ್ಗೆ ತೀವ್ರ ಕಳವಳಗೊಂಡಿದ್ದಾರೆ. ಹೇಗಾದರೂ ಮಾಡಿ ಭಾರತಕ್ಕೆ ಬಂದುಬಿಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಇಷ್ಟು ದಿನಗಳ ಕಾಲ ಇಸ್ರೇಲಿನಲ್ಲಿ ನಿರಾತಂಕವಾಗಿ ಇದ್ದೆವು. ಆದರೆ ಇರಾನ್ ನೊಂದಿಗೆ ಯುದ್ಧ ಆರಂಭವಾದ ಮೇಲೆ ಭಯ ಆವರಿಸಿದೆ. ಭಾರತಕ್ಕೆ ಮರಳಲು ಕಾಯುತ್ತಿದ್ದೇವೆ. ಆದರೆ ಸದ್ಯ ಎಲ್ಲ ವಿಮಾನಗಳ ಹಾರಾಟವನ್ನೂ ರದ್ದು ಪಡಿಸಿರುವುದರಿಂದ ವಿಶೇಷ ವಿಮಾನದಲ್ಲಿ ನಮ್ಮನ್ನು ಕರೆದೊಯ್ಯಲು ಭಾರತ ಮುಂದಾಗಬೇಕಿದೆ ಎನ್ನುತ್ತಾರೆ ಟೆಲ್ ಅವೀವ್‌ನಲ್ಲಿರುವ ಕೇರ್ ಗಿವರ್ ಪ್ರದೀಪ್ ಪಿ.