ಸ್ಫೂರ್ತಿದಾಯಕ ಪಾತ್ರಗಳು ಸಕಾರಾತ್ಮಕ ಮೌಲ್ಯ ಕಲಿಸುತ್ತವೆ

KannadaprabhaNewsNetwork |  
Published : Sep 22, 2025, 01:00 AM IST
ಪೋಟೋ,21ಎಚ್‌ಎಸ್‌ಡಿ2: ಚಿತ್ರದುರ್ಗದ ಕೋಟೆ ಆವರಣದಲ್ಲಿ    ಡಾ. ವಿಷ್ಣುವರ್ಧನ್ ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ  ಡಾ. ವಿಷ್ಣುವರ್ಧನ್ ಅವರ ಜೀವನ ಕುರಿತು ಹೊರತಂದಿರುವ  ಆ ಕರ್ಣನಂತೆ  ಪುಸ್ತಕದ ಲೇಖಕ ಸಿದ್ದಾಪುರ ಶಿವಕುಮಾರ್ ಹಾಗೂ ಚಿತ್ರಕಲಾವಿದ ಕ್ರಿಯೇಟಿವ್ ವೀರೇಶ್ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಚಿತ್ರದುರ್ಗದ ಕೋಟೆ ಆವರಣದಲ್ಲಿ ಡಾ. ವಿಷ್ಣುವರ್ಧನ್ ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಲೇಖಕ ಸಿದ್ದಾಪುರ ಶಿವಕುಮಾರ್ ಹಾಗೂ ಚಿತ್ರಕಲಾವಿದ ಕ್ರಿಯೇಟಿವ್ ವೀರೇಶ್ ರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸ್ಫೂರ್ತಿದಾಯಕ ಪಾತ್ರಗಳು ಕೇವಲ ಮನರಂಜನೆ ನೀಡುವುದಲ್ಲದೆ ಪ್ರೇಕ್ಷಕರಿಗೆ ಹೊಸ ಆಲೋಚನೆಗಳನ್ನು ಮತ್ತು ಸಕಾರಾತ್ಮಕ ಮೌಲ್ಯಗಳನ್ನು ಕಲಿಸುತ್ತವೆ ಅಂತಹ ಸ್ಫೂರ್ತಿದಾಯಕ ಮತ್ತು ಕೌಟುಂಬಿಕ ಚಲನಚಿತ್ರಗಳ ಮೂಲಕ ಅನೇಕ ಒಡೆದು ಹೋದ ಕುಟುಂಬಗಳನ್ನು ಒಟ್ಟುಗೂಡಿಸಿದ ಹಿರಿಮೆ ಡಾ.ವಿಷ್ಣುವರ್ಧನ್ ಅವರಿಗೆ ಸಲ್ಲುತ್ತದೆ ಎಂದು ಚಿತ್ರದುರ್ಗ ನಗರಸಭೆ ಸದಸ್ಯ ಆರ್.ಶ್ರೀನಿವಾಸ್ ಹೇಳಿದರು.

ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಹಾಗೂ ಕೋಟೆ ವಾಯು ವಿಹಾರಿಗಳ ಸಂಘ ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಚಿತ್ರದುರ್ಗದ ಕೋಟೆ ಆವರಣದಲ್ಲಿ ಆಯೋಜಿಸಲಾಗಿದ್ದ ನಟ ಡಾ.ವಿಷ್ಣುವರ್ಧನ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೋಟೆ ವಾಯು ವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಮಾತನಾಡಿ, ನಟ ಡಾ.ವಿಷ್ಣುವರ್ಧನ್ ಅವರಿಗೆ ಅವರ ಕರ್ಮಭೂಮಿಯಾದ ಚಿತ್ರದುರ್ಗದ ಮೇಲೆ ಅಪಾರ ಪ್ರೀತಿ ಇತ್ತು. ಇದು ಕೇವಲ ಮಾತಿನಲ್ಲಿ ಮಾತ್ರವಲ್ಲ ಅವರ ನಡೆ ಮತ್ತು ನುಡಿಗಳಲ್ಲಿಯೂ ಕಾಣುತ್ತಿತ್ತು. ಈ ನೆಲದ ಮೇಲೆ ಅವರಿಗಿದ್ದ ಪ್ರೀತಿಯನ್ನು ಹಲವಾರು ಸಂದರ್ಶನಗಳಲ್ಲಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವ್ಯಕ್ತಪಡಿಸಿದ್ದರು ಎಂದರು.

ಲೇಖಕ ಸಿದ್ದಾಪುರ ಶಿವಕುಮಾರ್ ಮಾತನಾಡಿ, ಡಾ.ವಿಷ್ಣುವರ್ಧನ್ ಅವರು ತಮ್ಮ ವೃತ್ತಿ ಜೀವನದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲಿಯೂ ತಮ್ಮ ಮಾನವೀಯ ಮೌಲ್ಯಗಳಿಗಾಗಿ ಹೆಸರುವಾಸಿಯಾಗಿದ್ದರು. ಅಭಿಮಾನಿಗಳಿಂದ ಸಾಹಸಸಿಂಹ ಎಂದು ಕರೆಸಿಕೊಳ್ಳುತ್ತಿದ್ದರೂ ಅವರ ನಿಜವಾದ ವ್ಯಕ್ತಿತ್ವ ಅತ್ಯಂತ ನಮ್ರತೆ ಮತ್ತು ನಿರ್ಗತರ ಕುರಿತು ದಯಾ ಭಾವನೆ, ಮಹಿಳೆಯರಿಗೆ ಹಿರಿಯ ಮತ್ತು ಕಿರಿಯರಿಗೆ ನೀಡುತ್ತಿದ್ದ ಗೌರವ ನನಗೆ ಆ ಕರ್ಣನಂತೆ ಗ್ರಂಥ ರಚನೆಗೆ ಪ್ರೇರಣೆ ನೀಡಿತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ವಿಷ್ಣುವರ್ಧನ್ ಅವರ ಜೀವನ ಕುರಿತು ಹೊರತಂದಿರುವ ಆ ಕರ್ಣನಂತೆ ಪುಸ್ತಕದ ಲೇಖಕ ಸಿದ್ದಾಪುರ ಶಿವಕುಮಾರ್ ಹಾಗೂ ಚಿತ್ರಕಲಾವಿದ ಕ್ರಿಯೇಟಿವ್ ವೀರೇಶ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಾದ ಕೂಬ ನಾಯಕ್, ನಿವೃತ್ತ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಚಾರ್, ನಿವೃತ್ತ ಪಾಚಾರ್ಯ ಡಾ. ಸಂಗೇನಹಳ್ಳಿ ಅಶೋಕ್ ಕುಮಾರ್ ಹಾಗೂ ಡಾಕ್ಟರ್ ವಿಷ್ಣುವರ್ಧನ್ ಅವರ ಅನೇಕ ಅಭಿಮಾನಿಗಳು ಭಾಗವಹಿಸಿದ್ದರು.

ವೇದಿಕೆ ಕಾರ್ಯಕ್ರಮದ ಬಳಿಕ ಚಿತ್ರದುರ್ಗದ ಕರಡಿ ಸಿದ್ದಾಪುರ ಗ್ರಾಮದ ಗಾಯಕ ನಾಗಭೂಷಣ್ ಅವರು ನಡೆಸಿಕೊಟ್ಟ ಡಾಕ್ಟರ್ ವಿಷ್ಣುವರ್ಧನ್ ಅವರ ಚಲನಚಿತ್ರಗಳ ಗೀತಾ ಗಾಯನ ಪ್ರೇಕ್ಷಕರನ್ನು ರಂಜಿಸಿತು. ಯೋಗ ಪ್ರಚಾರಕ ರವಿ ಕೆ. ಅಂಬೇಕರ್ ಕಾರ್ಯಕ್ರಮ ನಡೆಸಿಕೊಟ್ಟರು.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ