ಕನ್ನಡಪ್ರಭ ವಾರ್ತೆ ಸಕಲೇಶಪುರತಾಲೂಕಿನ ಕರಗೂರು ಕೂಡಿಗೆ ಪಾಲಹಳ್ಳಿಯಲ್ಲಿ ಶ್ರೀ ಆಂಜನೇಯ ಸ್ವಾವಿ ೧೬ ಅಡಿ ಎತ್ತರದ ಕಲ್ಲಿನ ಏಕಶಿಲಾ ನೂತನ ವಿಗ್ರಹದ ಪ್ರತಿಷ್ಠಾಪನೆ ಮಹೋತ್ಸವ ಭಕ್ತಿಭಾವದಿಂದ ಹಾಗೂ ಅದ್ಧೂರಿಯಾಗಿ ನಡೆಯಿತು.ಕಾರ್ಯಕ್ರಮಕ್ಕೆ ಹಾಸನ ಹಾಗೂ ಕೊಡಗು ಜಿಲ್ಲೆಯ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಆಂಜನೇಯ ಸ್ವಾಮಿ ಸೇವೆಯ ಪ್ರತೀಕವಾಗಿದ್ದು, ಎಲ್ಲಾ ಯುಗಗಳಲ್ಲೂ ಭಕ್ತರ ಪಾಲಿಗೆ ಶಕ್ತಿಯ ಮೂಲವಾಗಿದ್ದಾರೆ. ಭಕ್ತರು ನಿರಂತರ ರಾಮನಾಮ ಜಪ ಮಾಡಬೇಕು ಎಂದು ಹೇಳಿದರು. ತುಳಸಿ ಪೂಜೆ, ಗೋ ಪೂಜೆ ಮಾಡುವ ಮನೆಗಳು ಪವಿತ್ರವಾಗುತ್ತವೆ ಎಂದೂ ಅವರು ತಿಳಿಸಿದರು. ಆಂಜನೇಯನು ಬ್ರಹ್ಮಚಾರಿ, ಜಾಗೃತಿಯ ಪ್ರತೀಕವಾಗಿದ್ದು, ಯುವಜನತೆಗೆ ಆದರ್ಶ ಎಂದರು. ಹೆಗ್ಗಡಹಳ್ಳಿ ಮಠದ ಶ್ರೀ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಳೆದ ಮೂರು ದಿನಗಳಿಂದ ಯಜ್ಞ, ಹೋಮ-ಹವನ ಸೇರಿದಂತೆ ಸನಾತನ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಲಾಗಿದೆ. ಈ ವಿಗ್ರಹದ ಮುಂದೆ ಕೆಲ ಕ್ಷಣ ಪ್ರಾರ್ಥನೆ ಮಾಡಿದರೂ ಆತ್ಮಶಕ್ತಿ ಹೆಚ್ಚುತ್ತದೆ. ಕರಗೂರಿನ ಇತಿಹಾಸದಲ್ಲಿ ಇದು ಸುವರ್ಣ ಕ್ಷಣವಾಗಿದ್ದು, ಗ್ರಾಮಸ್ಥರಿಗೆ ಆರೋಗ್ಯ ಹಾಗೂ ಆಯುಷ್ಯ ಲಭಿಸಲಿ ಎಂದು ಆಶಿಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಸಕ ಸಿಮೆಂಟ್ ಮಂಜುನಾಥ್ ಮಾತನಾಡಿ, ತಾಲ್ಲೂಕಿನಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಅವಿಸ್ಮರಣೀಯ ಎಂದರು. ವಾಯುಪುತ್ರ ಸೇವಾ ಸಮಿತಿಯ ಗೌರವ ಅಧ್ಯಕ್ಷ ರಾಮಚಂದ್ರ ಕೆ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ಆಧಾರಿತ ಸಾಮಾನ್ಯ ಜನರು ಒಂದಾಗಿ ಸುಮಾರು ಒಂದು ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿ ೧೬ ಅಡಿ ಏಕಶಿಲಾ ಆಂಜನೇಯ ಮೂರ್ತಿಯನ್ನು ಸ್ಥಾಪಿಸಿರುವುದು ಹೆಮ್ಮೆಯ ವಿಷಯ ಎಂದರು. ಸಹಕರಿಸಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಮಾತನಾಡಿ, ಪುರಾಣಗಳಲ್ಲಿ ಆಂಜನೇಯ ಸ್ವಾಮಿಯ ರಾಮಭಕ್ತಿ ಅಪಾರವಾಗಿದ್ದು, ಅದನ್ನು ವರ್ಣಿಸಲು ಸಾಧ್ಯವಿಲ್ಲ. ಈ ಭಾಗದ ರೈತರಿಗೆ ಬೆಳೆಗಳಿಗೆ ಉತ್ತಮ ಬೆಲೆ ದೊರಕಲಿ ಹಾಗೂ ಮಾನವ-ವನ್ಯಜೀವಿ ಸಂಘರ್ಷ ಅಂತ್ಯವಾಗಲಿ ಎಂದು ಆಶಿಸಿದರು. ಮಾಜಿ ಸಚಿವ ಎಚ್. ಕೆ. ಕುಮಾರಸ್ವಾಮಿ ಮಾತನಾಡಿ, ಆಂಜನೇಯನ ಶ್ರದ್ಧೆ, ಭಕ್ತಿ, ಪರಾಕ್ರಮವು ಎಲ್ಲರಿಗೂ ಪ್ರೇರಣೆ ಎಂದರು. ಮಾಜಿ ಶಾಸಕ ಹಾಗೂ ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್. ಎಂ. ವಿಶ್ವನಾಥ್ ಮಾತನಾಡಿ, ಸಾಮಾನ್ಯ ಜನರು ಒಂದಾಗಿ ಸುಮಾರು ಒಂದು ಹಾಗೂ ಅರ್ಧ ಕೋಟಿ ರು. ಸಂಗ್ರಹಿಸಿ ಭವ್ಯ ವಿಗ್ರಹ ನಿರ್ಮಿಸಿರುವುದು ಯುವಕರ ಸಾಧನೆಗೆ ನಿದರ್ಶನ ಎಂದು ಪ್ರಶಂಸಿಸಿದರು.ಈ ಸಂದರ್ಭದಲ್ಲಿ ರಾಷ್ಟ್ರ ರಕ್ಷಣಾ ಸೇನಾ ಅಧ್ಯಕ್ಷ ಪುನೀತ್ ಕಿರೆಹಳ್ಳಿ, ಮುಳುಗು ತಜ್ಞ ಈಶ್ವರ ಮಲ್ಪೆ, ಆಸರೆ ಫೌಂಡೇಷನ್ನ ಜಯರಾಜ್ ನಾಯ್ಡು ಅವರಿಗೆ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ವಾಯುಪುತ್ರ ಸೇವಾ ಸಮಿತಿಯ ಅಧ್ಯಕ್ಷ ತೇಜಸ್ವಿ, ಜಾಗಟೆ ಶಿವಕುಮಾರ್, ಎಲ್. ಎಸ್. ತಮ್ಮೇಗೌಡ, ಮಾಜಿ ತಾಪಂ ಅಧ್ಯಕ್ಷೆ ಶ್ವೇತ ಪ್ರಸನ್ನ, ಪುನೀತ್ ಬನ್ನಹಳ್ಳಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ಧೇಶ್ ನಾಗೇಂದ್ರ, ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್, ಯಡಕೇರಿ ಗಂಗಾಧರ್, ಅವಿನಾಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.