ಕನ್ನಡಪ್ರಭ ವಾರ್ತೆ ಪಾಂಡವಪುರ
ನಂತರ ಮಾತನಾಡಿದ ಅವರು, ಸಣ್ಣ ನೀರಾವರಿ ಇಲಾಖೆಯ 3.10 ಕೋಟಿ ರು. ಅನುದಾನದಲ್ಲಿ ಬೇಬಿ ಗ್ರಾಮ ಮತ್ತು ಹಾಗನಹಳ್ಳಿಯ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಈ ಭಾಗದ ರೈತರ ಮನವಿಯಂತೆ ಚೆಕ್ ಡ್ಯಾಂ ಅಭಿವೃದ್ಧಿಗೆ ಚಾಲನೆ ನೀಡಿದ್ದು, ಆರು ತಿಂಗಳ ಕಾಲಾವಕಾಶದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಈ ಹಿಂದೆ ತಾಲೂಕಿನಲ್ಲಿ ನಿರ್ಮಾಣವಾಗಿರುವ ಕೆಲವು ಚೆಕ್ ಡ್ಯಾಂಗಳಿಗೆ ತೆರಳಿ ಗುಣಮಟ್ಟ ಪರಿಶೀಲಿಸಿದ್ದಾಗ ತೀರಾ ಕಳಪೆಯಾಗಿರುವುದು ಕಂಡು ಬಂದಿದೆ. ಈ ಚೆಕ್ ಡ್ಯಾಂಗಳನ್ನು ನಾವು ಪುನರ್ ನಿರ್ಮಾಣ ಮಾಡಿದ್ದೇವೆ. ಹೀಗಾಗಿ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ಗಳು ಮತ್ತು ಗುತ್ತಿಗೆದಾರರಿಗೆ ನಿಗಧಿತ ಸಮಯದೊಳಗೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚಿಸಿದರು.ಕಾಮಗಾರಿಯಿಂದ ನೀರಿನ ಸಂಗ್ರಹ ಮತ್ತು ಹರಿವಿನ ಪ್ರಮಾಣ ಹೆಚ್ಚಳವಾಗಲಿದೆ. ಸುತ್ತಮುತ್ತಲಿನ ನೂರಾರು ಎಕರೆ ಪ್ರದೇಶ ನೀರಾವರಿಯಾಗಲಿದೆ. ಜೊತೆಗೆ ನೀರು ಶೇಖರಣೆಯಿಂದ ಅಂತರ್ಜಲಮಟ್ಟ ಕೂಡ ಹೆಚ್ಚಲಿದೆ. ಇದರಿಂದ ರೈತರ ಕೊಳವೆ ಬಾವಿಗಳಲ್ಲೂ ನೀರು ಲಭ್ಯತೆ ಹೆಚ್ಚಾಗುತ್ತದೆ ಎಂದರು.
ಸಣ್ಣ ನೀರಾವರಿ ಇಲಾಖೆ, ಹೇಮಾವತಿ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಸಭೆ ಕರೆದಿದ್ದು, ಮೇಲುಕೋಟೆ ವ್ಯಾಪ್ತಿ ಎಲ್ಲಾ ಕೆರೆ-ಕಟ್ಟೆಗಳನ್ನು ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು. ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಲಭ್ಯತೆ ಇದೆ. ಹೀಗಾಗಿ,ನಾಲೆಗಳ ಮೂಲಕ ಕ್ಷೇತ್ರದ ಮೇಲುಕೋಟೆ, ಚಿನಕುರಳಿ ಹಾಗೂ ದುದ್ದ ಭಾಗದ ಕೆರೆ-ಕಟ್ಟೆಗಳನ್ನು ತುಂಬಿಸಲು ಚರ್ಚಿಸಲಾಗಿದೆ ಎಂದರು.
ಈ ವೇಳೆ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ವೈ.ಪಿ.ಮಂಜು, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಮುಖಂಡರಾದ ವೈ.ಜಿ.ರಘು, ಅರಳಕುಪ್ಪೆ ರೂಪ, ಗಿರಿಯಾರಹಳ್ಳಿ ಶ್ರೀಮೂರ್ತಿ, ಬೇಬಿ ಗ್ರಾಮದ ಕುಮಾರ್, ಮಹೇಶ್ ಇತರರು ಇದ್ದರು.