ಕಮಲ್ ಹಾಸನ್ ರಿಂದ ಕನ್ನಡಕ್ಕೆ ಅಪಮಾನ ಸಹಿಸಲ್ಲ: ಡಾ. ರಾಜಕುಮಾರ್ ಸಂಘಟನೆಗಳ ಒಕ್ಕೂಟ

KannadaprabhaNewsNetwork | Updated : Jun 02 2025, 01:20 PM IST
ಕಮಲ್ ಹಾಸನ್ ಅವರ ಹೇಳಿಕೆಯನ್ನು ಡಾ. ರಾಜ್ ಕುಮಾರ್ ಸಂಘಗಳ ಒಕ್ಕೂಟದ ಎಲ್ಲ ಸದಸ್ಯರು ಖಂಡಿಸುತ್ತೇವೆ. ರಾಜ್ಯದಲ್ಲಿ ಅವರ ಚಿತ್ರಗಳನ್ನು ಬಹಿಷ್ಕಾರ ಮಾಡಿ ಅವರ ಹೇಳಿಕೆಗೆ ದಿಟ್ಟ ಉತ್ತರ ನೀಡುವ ಮೂಲಕ ಕನ್ನಡಿಗರು ಪ್ರತಿಕಾರ ತೀರಿಸಿಕೊಳ್ಳಬೇಕು .

  ಹಾಸನ : ತಮಿಳು ಚಿತ್ರರಂಗದ ನಾಯಕ ನಟ ಕಮಲ್‌ ಹಾಸನ್ ಅವರು ಕನ್ನಡ ಭಾಷೆ ಹಾಗೂ ಡಾ. ರಾಜ್ ಕುಮಾರ್ ಕುಟುಂಬಕ್ಕೆ ಅಪಮಾನ ಮಾಡಿರುವುದಾಗಿ ಆರೋಪಿಸಿ, ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ವತಿಯಿಂದ ಭಾನುವಾರ ನಗರದ ಎನ್.ಆರ್. ವೃತ್ತದ ಬಳಿ ಇರುವ ಪುನೀತ್ ರಾಜ್ ಕುಮಾರ್ ಪುತ್ಥಳಿ ಇರುವ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಡಾ. ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಎಚ್.ಎಸ್. ರತೀಶ್ ಕುಮಾರ್ ಮಾತನಾಡಿ, ನಟ ಕಮಲ್ ಹಾಸನ್ ಕರ್ನಾಟಕದ ಋಣದಲ್ಲಿ ಬದುಕುತ್ತಿದ್ದು, ಅವರು ಕನ್ನಡ ಭಾಷೆ ಹಾಗೂ ಡಾ. ರಾಜ್ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದರಿ ಕುಟುಂಬವಾಗಿರುವ ರಾಜ್ ಕುಮಾರ್ ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಸಮಾಜಕ್ಕೆ ಹಾಗೂ ರಾಜ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಅಂಥವರಿಗೆ ಅಪಮಾನ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಕನ್ನಡಲ್ಲಿ ಕೂಡ ಚಿತ್ರಗಳನ್ನು ಮಾಡಿ ಕನ್ನಡಿಗರ ಬೆಂಬಲದಿಂದ ಇಂದು ಹೆಸರು ಮಾಡಿರುವ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಕರುನಾಡಿಗೆ ಅಪಮಾನ ಮಾಡಿದ್ದಾರೆ. ಕೂಡಲೇ ನಟ ಕಮಲ್ ಹಾಸನ್ ಕರ್ನಾಟಕದ ಜನತೆ ಹಾಗೂ ಡಾ.ರಾಜ್ ಕುಮಾರ್ ಕುಟುಂಬದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ತಮ್ಮ ಥಗ್ಸ್ ಲೈಫ್ ಚಿತ್ರದ ಪ್ರಚಾರದ ವೇಳೆ ಶಿವರಾಜ್ ಕುಮಾರ್ ಅವರ ಸಮ್ಮುಖದಲ್ಲೇ ತಮಿಳಿನಿಂದ ಕನ್ನಡ ಸೃಷ್ಟಿಯಾಗಿದೆ ಎಂಬ ಮಾತನ್ನು ಹೇಳಿದ್ದಾರೆ. ಅವರು ಕನ್ನಡದ ಮಹತ್ವ ಏನು ಎಂಬುದನ್ನು ನೋಟಿನ ಮೇಲಿನ ಕನ್ನಡ ಭಾಷೆಯ ಸ್ಥಾನವನ್ನು ಗಮನಿಸಿದರೆ ಅವರಿಗೆ ತಿಳಿಯಲಿದೆ. ಮೊದಲು ಅದನ್ನು ಅವರು ತಿಳಿದುಕೊಳ್ಳಬೇಕು, ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಮಾತನಾಡುವ ಮೊದಲು ಎಚ್ಚರದಿಂದಿರಬೇಕೆಂದು ಹೇಳಿದರು.

ಸಂಘದ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಅಂಜನಪ್ಪ ಮಾತನಾಡಿ, ಕಮಲ್ ಹಾಸನ್ ಅವರ ಹೇಳಿಕೆಯನ್ನು ಡಾ. ರಾಜ್ ಕುಮಾರ್ ಸಂಘಗಳ ಒಕ್ಕೂಟದ ಎಲ್ಲ ಸದಸ್ಯರು ಖಂಡಿಸುತ್ತೇವೆ. ರಾಜ್ಯದಲ್ಲಿ ಅವರ ಚಿತ್ರಗಳನ್ನು ಬಹಿಷ್ಕಾರ ಮಾಡಿ ಅವರ ಹೇಳಿಕೆಗೆ ದಿಟ್ಟ ಉತ್ತರ ನೀಡುವ ಮೂಲಕ ಕನ್ನಡಿಗರು ಪ್ರತಿಕಾರ ತೀರಿಸಿಕೊಳ್ಳಬೇಕು ಎಂದರು.

ಕನ್ನಡಿಗರ ಋಣ ಅವರ ಮೇಲಿದೆ ಎಂಬುದನ್ನು ಅವರು ಮರೆತಿದ್ದಾರೆ. ಅದನ್ನು ನೆನೆಸಿಕೊಂಡು ಕನ್ನಡಿಗರ ಋಣ ತೀರಿಸುವ ಕೆಲಸ ಮಾಡಬೇಕಿರುವ ನಟ ಕಮಲ್ ಹಾಸನ್ ಕೂಡಲೇ ತಮ್ಮ ಹೇಳಿಕೆಗೆ ಕ್ಷಮೆ ಕೇಳದೆ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಅರುಣ್ ಕುಮಾರ್, ಬಾಲಣ್ಣ, ಚಂದ್ರಶೇಖರ್, ಸಿದ್ದಪ್ಪ, ಶೋಭಾ ಶಂಕರ್ ಇತರರು ಉಪಸ್ಥಿತರಿದ್ದರು.

Read more Articles on