ಕನ್ನಡಪ್ರಭ ವಾರ್ತೆ ಬಾದಾಮಿ
ನಗರದ ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ವೀರಪುಲಿಕೇಶಿ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ದಿಂ.ಕೆ.ಎಂ.ಪಟ್ಟಣಶೆಟ್ಟಿ ಇವರು ಕಟ್ಟಿದ ಶ್ರೀ ವೀರಪುಲಿಕೇಶಿ ಬ್ಯಾಂಕನ್ನು ಇಂದಿನವರೆಗೆ ಉತ್ತಮವಾಗಿ ನಡೆಸಿಕೊಂಡು ಬಂದಿದ್ದಾರೆ. ಉತ್ತರ ಕರ್ನಾಟಕದಲ್ಲಿಯೇ ಜನಪ್ರಿಯ ಬ್ಯಾಂಕ್ ಆಗಿದೆ. ಕೇಂದ್ರ ಸರಕಾರ ಪ್ರತ್ಯೇಕ ಸಹಕಾರಿ ಇಲಾಖೆ ಆರಂಭವಾಗಿದೆ. ಸಹಕಾರಿ ಚಳುವಳಿಗೆ ಒತ್ತು ಕೊಡುವಂತಾಗಿದೆ. ರಾಷ್ಟ್ರೀಯ ಬ್ಯಾಂಕಿನಿಂದ ಸಾಲ ಬೇಗ ಸಿಗುವುದಿಲ್ಲ. ಸಹಕಾರಿ ಬ್ಯಾಂಕುಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಬೇಗ ಸಾಲ ಸಿಗುತ್ತದೆ. ಸಹಕಾರಿ ಬ್ಯಾಂಕುಗಳಿಂದ ಅನೇಕ ಸೌಲಭ್ಯಗಳು ಇವೆ ಎಂದರು.
ಮಾಜಿ ಡಿಸಿಎಂ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಸಹಕಾರಿ ಕ್ಷೇತ್ರ ಕಣಗಿನಹಾಳ ಸಿದ್ದನಗೌಡ ಪಾಟೀಲ ಮೊದಲ ಬಾರಿಗೆ ಸಹಕಾರಿ ಬ್ಯಾಂಕ್ ಆರಂಭಿಸಿದರು. ಇಂದು ನಾವೆಲ್ಲರೂ ದುಡಿದು, ಖರ್ಚು ಮಾಡಿ ಭವಿಷ್ಯಕ್ಕೆ ಉಳಿತಾಯ ಮಾಡಬೇಕಾಗಿದೆ. ಯುವಕರು ಗಳಿಸಿದ್ದರಲ್ಲಿ ಸ್ವಲ್ಪ ಭಾಗ ಉಳಿತಾಯ ಮಾಡಿರಿ. ಬ್ಯಾಂಕಿನಿಂದ ಅನೇಕರಿಗೆ ಸಹಾಯವಾಗಿದೆ. ಉದ್ಯೋಗ, ಸಾಲ ಸೌಲಭ್ಯ, ಗ್ರಾಮೀಣ ಪ್ರದೇಶಗಳಲ್ಲಿ ಪಿಕೆಪಿಎಸ್ ನಲ್ಲಿ ಸಾಲ ಸೌಲಭ್ಯ ಸಿಗುತ್ತದೆ. ಮೊದಲು ಶ್ರೀಮಂತ ರೈತರಿಗೆ ಮಾತ್ರ ಸೌಲಭ್ಯ ಕೊಡುತ್ತಿದ್ದರು. ಬ್ಯಾಂಕ್ ರಾಷ್ಟ್ರೀಕರಣ ದಿಂದ ಇಂದು ಎಲ್ಲರಿಗೂ ಸಾಲ ಸುಲಭವಾಗಿ ಸಿಗುತ್ತದೆ ಎಂದು ಹೇಳಿದರು.ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಬ್ಯಾಂಕ್ ಬೆಳೆಯಬೇಕಾದರೆ ಗ್ರಾಹಕರು ಯಾವ ಉದ್ದೇಶಕ್ಕೆ ಸಾಲ ಪಡೆದಿದ್ದಾರೊ ಅದೇ ಉದ್ದೇಶಕ್ಕೆ ಬಳಸಿ ಸಕಾಲಕ್ಕೆ ಮರುಪಾವತಿ ಮಾಡಬೇಕು. ಅಂದಾಗ ಮಾತ್ರ ಬ್ಯಾಂಕ್ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ದ ರಾಜಯೋಗೇಂದ್ರ ಸ್ವಾಮೀಜಿ, ಹಾಲಕೆರೆ ಅನ್ನದಾನೇಶ್ವರಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಹಾವೇರಿ ಹುಕ್ಕೇರಿಮಠದ ಡಾ.ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭಲ್ಲಿ ಸಂಸ್ಥಾಪಕ ಅಧ್ಯಕ್ಷರ ಪುತ್ಥಳಿ ಅನಾವರಣ ಮತ್ತು ಹಿಂದಿನ ಅಧ್ಯಕ್ಷರ ಭಾವಚಿತ್ರಗಳನ್ನು ಅನಾವರಣ ಮಾಡಲಾಯಿತು. ಬ್ಯಾಂಕ್ ನಿರ್ಮಾಣದಲ್ಲಿ ಶ್ರಮಿಸಿದ ಶಿಲ್ಪಿ, ಗುತ್ತಿಗೆದಾರರನ್ನು ಸನ್ಮಾನಿಸಿ ಗೌರವಿಸಲಾಯಿತು.