ಕನ್ನಡಪ್ರಭ ವಾರ್ತೆ ವಿಜಯಪುರಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ನಾವು ಖಂಡಿಸುತ್ತೇವೆ. ಮೋದಿ ಅವರು ಪ್ರಧಾನಿಯಾದ ಮೇಲೆಯೇ ದೇಶದ ಭವಿಷ್ಯ ಉಜ್ವಲವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ವಾಗ್ದಾಳಿ ನಡೆಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ನಾವು ಖಂಡಿಸುತ್ತೇವೆ. ಮೋದಿ ಅವರು ಪ್ರಧಾನಿಯಾದ ಮೇಲೆಯೇ ದೇಶದ ಭವಿಷ್ಯ ಉಜ್ವಲವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ವಾಗ್ದಾಳಿ ನಡೆಸಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಗಳು ಅಂಧ ಭಕ್ತರಲ್ಲ, ನೀವು ರಾಹುಲ ಗಾಂಧಿಯ ಅಂಧ ಭಕ್ತರು. ರಸ್ತೆಗಳ ಬಗ್ಗೆ ಮಾತನಾಡುವ ಕಾಂಗ್ರೆಸ್ನವರು ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ರಸ್ತೆಗಳ ಸ್ಥಿತಿಗತಿಯನ್ನು ನೋಡಿ ಮಾತನಾಡಬೇಕು. ಕೇಂದ್ರ ಸರ್ಕಾರದ ನಿರ್ವಹಣೆಯಲ್ಲಿರುವ ರಸ್ತೆಗಳು ಸರಿಯಾಗಿದ್ದು, ರಾಜ್ಯದ ರಸ್ತೆಗಳೆಲ್ಲ ಹದಗೆಟ್ಟಿವೆ. ಮೋದಿಯವರ ಬಗ್ಗೆ ಮಾತನಾಡುವುದನ್ನು ಬಿಟ್ಟು, ಮೊದಲು ಜಿಲ್ಲೆಯ ನೀವು ಆರು ಶಾಸಕರು ಕ್ಷೇತ್ರಗಳ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದರು.
ಜಿಲ್ಲೆಯಲ್ಲಿ ನೀರಾವರಿ ಎಂಬುದು ಕಾಂಗ್ರೆಸ್ ಕೊಡುಗೆ ಎಂದು ಸಚಿವ ಎಂ.ಬಿ.ಪಾಟೀಲರು ಹೇಳಿದ್ದಾರೆ. ಆದರೆ, ನೀರಾವರಿ ಕಾಂಗ್ರೆಸ್ ಕೊಡುಗೆಯಾಗಿದ್ದರೆ ಕಳೆದ 60 ವರ್ಷ ನೀವು ಜನಪ್ರತಿನಿಧಿಗಳು ಮಲಗಿದ್ದಿರಾ?. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದ ವೇಳೆ 108 ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ಕೊಟ್ಟಿದ್ದೇ ಬಿಜೆಪಿ. ಅದರ ಮುಂದುವರಿದ ಭಾಗ ಮಾತ್ರ ಇವರು ಮಾಡಿದ್ದಾರೆ. ಯಾರ ಸರ್ಕಾರದಲ್ಲಿ ಎಷ್ಟು ನೀರಾವರಿ ಅಭಿವೃದ್ಧಿಯಾಗಿದೆ ಎಂಬುವುದರ ಕುರಿತು ನಾವು ದಾಖಲೆ ಸಮೇತ ಚರ್ಚೆಗೆ ಬರುತ್ತೇವೆ, ನೀವು ಬನ್ನಿ ಚರ್ಚೆ ಮಾಡೋಣ. ಆಗ ಜನರಿಗೆ ಸತ್ಯಾಸತ್ಯತೆ ತಿಳಿಯುತ್ತದೆ. ಪ್ರಭುದ್ಧ ಜನತೆ ನಿಮ್ಮ ಸುಳ್ಳು ಹೇಳಿಕೆಯನ್ನು ಓದಿ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಸಚಿವರೇ ನೀರಾವರಿಯ ಬಗ್ಗೆ ನೀವು ಕೊಡುವ ಹೇಳಿಕೆಗಳು ಸತ್ಯವಾಗಿರಬೇಕು, ಸುಳ್ಳು ಹೇಳಿ ಕಾಂಗ್ರೆಸ್ ಸರ್ಕಾರದ ಮಾನ ಕಳೆಯಬಾರದು ಎಂದು ಸಲಹೆ ನೀಡಿದರು.ರೈತ ವಿರೋಧಿಗಳಾಗಿರುವ ನೀವು ಬಿಜೆಪಿ ಅಧಿಕಾರದಲ್ಲಿದ್ದಾಗ 20 ಸಾವಿರಕ್ಕೆ ಸಿಗುತ್ತಿದ್ದ ರೈತರ ಪಂಪಸೆಟ್ ಸಂಪರ್ಕ ಇದೀಗ 2ರಿಂದ 5 ಲಕ್ಷಕ್ಕೆ ಹೆಚ್ಚಿಸಿದ್ದಾರೆ. ರೈತರ ಜಮೀನಿನಲ್ಲಿ ಟಿಸಿ ಸುಟ್ಟಾಗ ರೈತರಿಗೆ 24 ಗಂಟೆಗಳಲ್ಲಿ ಕೊಡುವ ಬದಲು ವಾರಗಟ್ಟಲೆ ಅಲೆದಾಡಿಸುತ್ತಾರೆ. ಪಂಚ ಗ್ಯಾರಂಟಿಯೇ ಸರ್ಕಾರದ ಸಾಧನೆ ಎಂದು ತಿಳಿದುಕೊಂಡಿದ್ದಾರೆ. ಅದಕ್ಕೆ ಸರ್ಕಾರವೇ ಬೇಕಾಗಿಲ್ಲ. ಗ್ಯಾರಂಟಿಯೇ ಸಾಧನೆಯಾಗಬಾರದು. ರಸ್ತೆ, ನೀರಾವರಿ, ಕುಡಿಯುವ ನೀರು ಸೇರಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದರು.ಬಡವರ ಮಕ್ಕಳು ಸರ್ಕಾರದ ದಾರಿ ಕಾಯುತ್ತಿದ್ದು, ಕಳೆದ 2 ವರ್ಷಗಳಿಂದ ಯಾವುದೇ ನೌಕರಿಗೆ ಅರ್ಜಿ ಕರೆದಿಲ್ಲ. ಯತ್ನಾಳ ಬಿಜೆಪಿ ಶಾಸಕರಿದ್ದಾಗ ಬಿ.ಎಸ್.ವೈ ರವರು ಸಾಕಷ್ಟು ಅನುದಾನ ನೀಡಿದ್ದರಿಂದ, ವಿಜಯಪುರ ಹಸರೀಕರಣ ಹಾಗೂ ಸೌಂದರ್ಯೀಕರಣವಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಡಿ.ಜಿ.ಬಿರಾದಾರ, ಈರಣ್ಣ ರಾವೂರ ಇದ್ದರು.
ಇಂಡಿಯ ಶಾಸಕರು ಬುದ್ಧಿವಂತರು ಎಂದುಕೊಂಡಿದ್ದೆ. ಬಂಗಾರ ಖರೀದಿ ಮಾಡಬೇಡಿ ಎಂದು ಇಂದಿರಾಗಾಂಧಿ ಪ್ರಧಾನಿ ಆಗಿದ್ದಾಗಲೇ ಹೇಳಿದ್ದರು. ಅದು ಅವರಿಗೆ ನೆನಪಿಲ್ಲವೆ?. ಎಲ್ಲ ರಸ್ತೆಗಳನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಹೇಳುವ ಇವರಿಗೆ ಸಾಮಾನ್ಯ ಜ್ಞಾನವೇ ಇಲ್ಲವೆ ಎನ್ನುವಂತಾಗಿದೆ. ತಮ್ಮ ಕೆಲಸಗಳನ್ನು ಕೇಂದ್ರದ ಮೇಲೆ ಹಾಕಿಬಿಡುತ್ತಿದ್ದಾರೆ.
-ಎಸ್.ಎ.ಪಾಟೀಲ, ಬಿಜೆಪಿ ಮುಖಂಡ