ಕನ್ನಡಪ್ರಭ ವಾರ್ತೆ ಅಜ್ಜಂಪುರ
ಚಿತ್ರದುರ್ಗ ಮತ್ತು ಚಿಕ್ಕಮಗಳೂರಿನ ಪ್ರಥಮ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ 2023 ಡಿ.30, 31ರಂದು ನಡೆಯಬೇಕಿತ್ತು. ಕಾರಣಾಂತರಗಳಿಂದ ಅದನ್ನು ಮುಂದೂಡಲಾಗಿತ್ತು. ಸಮಿತಿ ಪದಾಧಿಕಾರಿಗಳು ಚರ್ಚಿಸಿ ಫೆ.2, 3ರಂದು ನಡೆಸಲು ನಿರ್ಣಯಿಸಲಾಗಿದೆ. 2ರ ಬೆಳಗ್ಗೆ 9ಗಂಟೆಗೆ ಪ್ರಾರಂಭವಾಗುವ ಸಮ್ಮೇಳನವು 3ರ ರಾತ್ರಿ 9ರವರೆಗೆ ನಿರಂತರವಾಗಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರುಗಲಿವೆ ಎಂದು ಸ್ವಾಗತ ಸಮಿತಿ ಅಧ್ಯಕ್ಷರು ಎ.ಸಿ.ಚಂದ್ರಪ್ಪ ರವರು ಅಜ್ಜಂಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.ಸಾಣೇಹಳ್ಳಿ ಶ್ರೀಮಠದ ಪಟ್ಟಾಧ್ಯಕ್ಷರಾಗಿರುವ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ. ಪೂಜ್ಯರ ಸಾಹಿತ್ಯ ಸೇವೆ ಅಪಾರವಾಗಿದ್ದು, ಅವರಿಂದ 6 ನಾಟಕಗಳು, 2 ಸ್ವತಂತ್ರ ವಚನ ಸಮಗ್ರ, 52 ವೈಚಾರಿಕ ಪ್ರಬಂಧ ಕೃತಿಗಳು, 1 ಪ್ರವಾಸ ಕಥನ, 65 ಸಮಪಾದನಾ ಕೃತಿಗಳು ಒಟ್ಟು 126 ಕೃತಿಗಳು ಕನ್ನಡ ಸಾಹಿತ್ಯ ಭಂಡಾರವನ್ನು ಸೇರಿ ಶ್ರೀಮಂತಗೊಂಡಿವೆ.
ಸಮ್ಮೇಳನದಲ್ಲಿ ಸಾಂಸ್ಕೃತಿಕ ರಾಜಕಾರಣ ರಂಗಭೂಮಿ ಕೊಡುಗೆ, ಉಭಯ ಜಿಲ್ಲೆಗಳ ಇತಿಹಾಸ-ಸಾಹಿತ್ಯ, ಕವಿ ಗೋಷ್ಠಿಗಳು ನಡೆಯಲಿವೆ. ಸಂಜೆ 2 ಜಿಲ್ಲೆಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕನ್ನಡ ಸಾಹಿತ್ಯ ಕೃತಿಗಳು ಬಿಡುಗಡೆಗೊಳ್ಳಲಿವೆ. ರಾಜ್ಯದ ಪ್ರಸಿದ್ಧ ವಿದ್ವಾಂಸರು, ಸಂಶೋಧಕರು, ಕವಿಗಳು, ವಿವಿಧ ಮಥಾಧೀಶರು ಭಾಗವಹಿಸುವರು. ಎರಡು ಜಿಲ್ಲೆಗಳ ಕೇಂದ್ರ ಸಚಿವರು, ರಾಜ್ಯ ಸಚಿವರು, ವಿದಾಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ಅಧಿಕಾರಿ ವರ್ಗದವರು ಭಾಗವಹಿಸುವರು.ಸಾಣೇಹಳ್ಳಿ ಗ್ರೀಕ್ ಮಾದರಿಯ ಶಿವ ಕುಮಾರ ಬಯಲು ರಂಗ ಮಂದಿರ ಮತ್ತು ಸಾಮನೂರು ಶಿವಶಂಕರಪ್ಪ ಒಳಾಂಗಣ ರಂಗ ಮಂದಿರದಲ್ಲಿ 2 ದಿನದ ಸಮ್ಮೇಳನದ ಕಾರ್ಯಕ್ರಮಗಳು ಜರುಗಲಿವೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎಂದು ಸ್ವಾಗತ ಸಮಿತಿ ಅಧ್ಯಕ್ಷರು ವಿವರಿಸಿದರು.
ಗೋಷ್ಠಿಯಲ್ಲಿ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್. ಚಂದ್ರಪ್ಪ, ಎಚ್ ಪುಟ್ಟಸ್ವಾಮಿ ರಂಗಕರ್ಮಿ, ಕೃಷ್ಣಪ್ಪ.ಕೆ.ಎಸ್ ಪಂಚಾಕ್ಷರಿ, ಲೋಕೇಶ್ ಇತರರಿದ್ದರು.