ಮನಗುಂಡಿಯಲ್ಲಿ ಮಕ್ಕಳಿಂದ ಪುಸ್ತಕಗಳ ಪರಿಚಯ

KannadaprabhaNewsNetwork | Published : Jun 27, 2024 1:00 AM
Follow Us

ಸಾರಾಂಶ

ಮಕ್ಕಳು ಶಾಲಾ ಪುಸ್ತಕಗಳೊಂದಿಗೆ ಇತರ ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು. ಉತ್ತಮ ಪುಸ್ತಕ ಓದುವುದರಿಂದ ಅರಿವು, ಜ್ಞಾನ, ವಿವೇಕ ಅಧಿಕವಾಗುವುದು. ಸಮಯದ ಸದ್ಬಳಕೆ ಆಗುವುದು.

ಧಾರವಾಡ:

ಮಕ್ಕಳ ಮುಖದಲ್ಲಿ ಸಂತಸದ ಛಾಯೆ. ತಾವು ಓದಿದ ಕೃತಿಗಳನ್ನು ಪರಿಚಯಿಸುವ ಸಂಭ್ರಮವಿತ್ತು. ಪುಸ್ತಕಗಳ ಕುರಿತು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಹಂಬಲವೂ ಇತ್ತು. ಒಟ್ಟಾರೆ ಪುಸ್ತಕ ಹಿಡಿದು ಸಂಭ್ರಮಿಸುವ ದೃಶ್ಯವದು.

ತಾಲೂಕಿನ ಮನಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಇಚ್ಛಾಶಕ್ತಿಯಿಂದ ನಡೆದ ವಿಭಿನ್ನ ಪುಸ್ತಕ ಕಾರ್ಯಕ್ರಮದ ದೃಶ್ಯವಿದು. ಶಾಲಾ ಗ್ರಂಥಾಲಯದ ಆಯ್ದ ಪುಸ್ತಕಗಳ ಪರಿಚಯ ಹಾಗೂ ಎಲ್ಲ ಪುಸ್ತಕಗಳ ಪುನರ್‌ ಮನನ ಕಾರ್ಯಕ್ರಮದಲ್ಲಿ ಮಕ್ಕಳು ತಾವು ಓದಿದ ಪುಸ್ತಕಗಳನ್ನು ಪರಿಚಯಿಸಿದರು.

ಶಾಲಾ ಡೆಸ್ಕ್‌ಗಳ ಮೇಲೆ ಕಲೆ, ಸಾಹಿತ್ಯ, ಸಚಿತ್ರ, ಕಥೆಗಳು, ಕಾದಂಬರಿ, ಮೋಜಿನ ಗಣಿತ, ವಿಜ್ಞಾನ, ಯೋಗದ, ಉಪವಾಸದ ಮಹತ್ವ, ಬ್ರಹ್ಮಾಂಡ ರಹಸ್ಯ, ಸಾಮಾನ್ಯ ಜ್ಞಾನ, ಕ್ಷಣ ಹೊತ್ತು ಆಣಿ ಮುತ್ತು, ವ್ಯಕ್ತಿತ್ವ ವಿಕಸನ, ಸಮಾಜ, ಇತಿಹಾಸ, ಶಬ್ದಕೋಶಗಳು ಹೀಗೆ ಎಲ್ಲ ಮಾದರಿಯ, ವೈವಿಧ್ಯಮಯ ವಿಷಯಗಳುಳ್ಳ ಮೂರು ಸಾವಿರಕ್ಕೂ ಅಧಿಕ ಪುಸ್ತಕಗಳು ಕಂಡುಬಂದವು.

ಅಧ್ಯಕ್ಷತೆ ವಹಿಸಿದ್ದ ಬಿ.ಪಿ ಜೋಶಿ, ಮಕ್ಕಳು ಶಾಲಾ ಪುಸ್ತಕಗಳೊಂದಿಗೆ ಇತರ ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು. ಉತ್ತಮ ಪುಸ್ತಕ ಓದುವುದರಿಂದ ಅರಿವು, ಜ್ಞಾನ, ವಿವೇಕ ಅಧಿಕವಾಗುವುದು. ಸಮಯದ ಸದ್ಬಳಕೆ ಆಗುವುದು. ಉತ್ತಮ ವಿಚಾರಗಳನ್ನು ಅರಿತು ಉತ್ತಮ ಬದುಕು ನಡೆಸಲು ಪುಸ್ತಕಗಳು ದಾರಿದೀಪದಂತೆ ಕೆಲಸ ಮಾಡುತ್ತೇವೆ ಎಂದರು.

ಶಿಕ್ಷಕ ಸಿ.ಸಿ. ಹಿರೇಮಠ ಮಾತನಾಡಿ, ಗ್ರಂಥಗಳ ಓದು ಒಳ್ಳೆಯ ಹವ್ಯಾಸ ಹಾಗೂ ಅಭ್ಯಾಸ. ಒಂದು ಉತ್ತಮ ಪುಸ್ತಕ ನೂರಾರು ಉತ್ತಮ ಗೆಳೆಯರಿಗೆ ಸಮ ಎಂದರು. ಮಕ್ಕಳ ಪರವಾಗಿ ಆಯ್ದ ಮಕ್ಕಳು ಕಾದಂಬರಿ, ಕಥೆ, ಶಬ್ದಕೋಶ, ನಿತ್ಯಜೀವನದಲ್ಲಿ ವಿಜ್ಞಾನ, ಮೋಜಿನ ಗಣಿತ, ಯೋಗ, ಉಪವಾಸ, ಕ್ಷಿಜ್‌ ಇತರ ಪುಸ್ತಕಗಳ ಕುರಿತು ಕವಿತಾ ಕಲ್ಲಾಗೌಡತಿ, ನಾಗರತ್ನಾ ದುಪ್ಲಾಪೂರ, ಸಂಜನಾ ಬೇಟಗೇರಿ, ಪುಷ್ಪಾ ಬಾಳಿಕಾಯಿ, ಪೇಮಾ ಕಳ್ಳಿಮನಿ, ಕಾವ್ಯ ಸಣ್ಣಿಂಗಮ್ಮನವರ, ಸೃಷ್ಟಿ ಮರಿತಮ್ಮನವರ, ಶಿವಲೀಲಾ ಗುರಕ್ಕನವರ, ಸುರೇಖಾ ಜ್ಯೋತಿಬಾಯಿ, ವಿನೋದಾ ಕಳ್ಳಿಮನಿ ಪುಸ್ತಕ ಪರಿಚಯಿಸಿ ಅವುಗಳನ್ನು ಏಕೆ ಓದಬೇಕೆಂದು ತಿಳಿಸಿದರು.

ಶಾಲಾ ಸಿಬ್ಬಂದಿ ಸತ್ಯನಾರಾಯಣ ಜೋಶಿ ಇದ್ದರು. ಲೇಖಕ ಶಿಕ್ಷಕರಾದ ರಂಗನಾಥ ವಾಲ್ಮೀಕಿ ನಿರೂಪಿಸಿದರು. ಶಿಕ್ಷಕಿಯರಾದ ಸುನೀತಾ ಗೊರವರ ಸ್ವಾಗತಿಸಿದರು. ಉಷಾ ಶಿವಣ್ಣನವರ ವಂದಿಸಿದರು.