ಪತ್ರಕರ್ತರಿಗೆ ಅಂತರ್‌ ದೃಷ್ಟಿ ಮುಖ್ಯ: ಚುಂಚಶ್ರೀ

KannadaprabhaNewsNetwork |  
Published : Nov 18, 2025, 12:15 AM IST
೧೭ಕೆಎಂಎನ್‌ಡಿ-೧ಮಂಡ್ಯದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ನೂತನ ಆಡಳಿತ ಮಂಡಳಿ ಅಧಿಕಾರ ಸ್ವೀಕಾರ ಸಮಾರಂಭವನ್ನು ಶಾಸಕ ರವಿಕುಮಾರ್ ಉದ್ಘಾಟಿಸಿದರು. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಡಾ.ಕುಮಾರ, ಶಿವಾನಂದ ತಗಡೂರು ಇತರರಿದ್ದರು. | Kannada Prabha

ಸಾರಾಂಶ

ಸಾಮಾಜಿಕ ಕಳಕಳಿ ಇಟ್ಟುಕೊಂಡು ವರದಿಗಳನ್ನು ಮಾಡಬೇಕು. ಸುದ್ದಿಯ ವೇಗ ನಾಗಾಲೋಟದಲ್ಲಿದೆ. ಆ ವೇಗದಲ್ಲಿ ಯಾವುದಾದರೊಂದು ತಪ್ಪಾದರೂ ಅದು ಅತಿ ಶೀಘ್ರದಲ್ಲಿ ಲಕ್ಷಾಂತರ ಜನರನ್ನು ತಲುಪಿರುತ್ತದೆ. ಆ ತಪ್ಪನ್ನು ಸರಿಪಡಿಸುವಷ್ಟರಲ್ಲಿ ಅದೇ ಸತ್ಯವೆಂದು ಜನರು ನಂಬಿರುತ್ತಾರೆ. ಅಂತಹ ತಪ್ಪುಗಳು ವರದಿಗಾರರಿಂದ ಆಗಬಾರದು.

ಕನ್ನಡಪ್ರಭ ವಾರ್ತೆ ಮಂಡ್ಯ

ಪತ್ರಕರ್ತರಾದವರಿಗೆ ಅಂತರ್‌ ದೃಷ್ಟಿ ಇರಬೇಕು. ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಹ ವರದಿಗಳನ್ನು ಮಾಡಬಾರದು. ಪ್ರತಿಯೊಂದನ್ನೂ ವಿಮರ್ಶೆ ಮಾಡಿ ಸತ್ಯವನ್ನು ಸಮಾಜಕ್ಕೆ ತಲುಪಿಸಬೇಕು ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ನೂತನ ಆಡಳಿತ ಮಂಡಳಿ ಅಧಿಕಾರ ಸ್ವೀಕಾರ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು.

ಪತ್ರಕರ್ತರಿಗೆ ಜ್ಞಾನ, ಹೃದಯವಂತಿಕೆ, ಬರವಣಿಗೆ ಈ ಮೂರೂ ಅಂಶಗಳನ್ನು ಹೊಂದಿರಬೇಕು. ಸಾಮಾಜಿಕ ಕಳಕಳಿ ಇಟ್ಟುಕೊಂಡು ವರದಿಗಳನ್ನು ಮಾಡಬೇಕು. ಸುದ್ದಿಯ ವೇಗ ನಾಗಾಲೋಟದಲ್ಲಿದೆ. ಆ ವೇಗದಲ್ಲಿ ಯಾವುದಾದರೊಂದು ತಪ್ಪಾದರೂ ಅದು ಅತಿ ಶೀಘ್ರದಲ್ಲಿ ಲಕ್ಷಾಂತರ ಜನರನ್ನು ತಲುಪಿರುತ್ತದೆ. ಆ ತಪ್ಪನ್ನು ಸರಿಪಡಿಸುವಷ್ಟರಲ್ಲಿ ಅದೇ ಸತ್ಯವೆಂದು ಜನರು ನಂಬಿರುತ್ತಾರೆ. ಅಂತಹ ತಪ್ಪುಗಳು ವರದಿಗಾರರಿಂದ ಆಗಬಾರದು ಎಂದು ಉದಾಹರಣೆ ಸಹಿತ ವಿವರಿಸಿದರು.

ಪತ್ರಕರ್ತರ ಮೇಲೆ ಸಮಾಜ ಇನ್ನೂ ವಿಶ್ವಾಸ, ನಂಬಿಕೆ ಇಟ್ಟುಕೊಂಡಿದೆ. ಅದಕ್ಕೆ ಚ್ಯುತಿ ಬರದ ರೀತಿಯಲ್ಲಿ ಸುದ್ದಿಗಳನ್ನು ಬಿತ್ತರಿಸಬೇಕು. ಕಪೋಲಕಲ್ಪಿತ ವರದಿಗಳಿಗೆ ಮನ್ನಣೆ ನೀಡಬಾರದು. ವರದಿ ಮಾಡುವುದಕ್ಕೂ ಮುನ್ನ ಅದರ ಸತ್ಯಾಸತ್ಯತೆಯನ್ನು ವಿಮರ್ಶೆ ಮಾಡುವುದು ಪತ್ರಕರ್ತರಾದವರ ಕರ್ತವ್ಯ. ಅದನ್ನು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ವರದಿಗಾರಿಕೆಯಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು. ಸುದ್ದಿಗಳನ್ನು ನೀಡುವ ಧಾವಂತದಲ್ಲಿ ತಪ್ಪುಗಳಾಗದಂತೆ ಎಚ್ಚರವಹಿಸಬೇಕು. ಎಷ್ಟೋ ವಿಷಯಗಳು ಅಧಿಕಾರಿಗಳಿಗೆ ತಿಳಿಯುವ ಮುನ್ನವೇ ಪತ್ರಕರ್ತರಿಗೆ ತಿಳಿದಿರುತ್ತದೆ. ಅಷ್ಟು ವೇಗವಾಗಿ ಮಾಹಿತಿ ಪತ್ರಕರ್ತರನ್ನು ತಲುಪುತ್ತದೆ. ಅಷ್ಟೊಂದು ತೀವ್ರಗತಿಯಲ್ಲಿ ಮಾಹಿತಿ ಪಡೆದುಕೊಂಡು ಟಿವಿ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ಪ್ರಕಟಿಸುವ ಸಾಮರ್ಥ್ಯ ಪತ್ರಕರ್ತರಿಗಿದೆ ಎಂದರು.

ಸತ್ಯನಿಷ್ಠ ವರದಿಗಾರಿಕೆಯನ್ನು ಪತ್ರಕರ್ತರು ರೂಢಿಸಿಕೊಳ್ಳಬೇಕು. ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು, ಸಮಾಜದ ಸ್ವಾಸ್ಥ್ಯ ಹಾಳಾಗದ ರೀತಿಯಲ್ಲಿ ವರದಿಗಾರಿಕೆ ಮಾಡಬೇಕು. ಸಂವಿಧಾನದ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ಎಂದಿಗೂ ಮರೆಯಬಾರದು ಎಂದರು.

ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲೆಡೆ ಚುನಾವಣೆ ನಡೆದಿದೆ. ಹಲವು ಜಿಲ್ಲೆಗಳಲ್ಲಿ ಅವಿರೋಧ ಆಯ್ಕೆಗಳಾಗಿದ್ದರೆ, ಬಹುತೇಕ ಕಡೆ ಚುನಾವಣೆ ಎದುರಿಸಿದ್ದಾರೆ. ಗೆದ್ದವರು ಬೀಗಬೇಕಿಲ್ಲ, ಸೋತವರು ಕುಗ್ಗಬೇಕಿಲ್ಲ. ಗೆದ್ದವರು ಸೋತವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಎಲ್ಲರೂ ಒಟ್ಟಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದರು.

ಶಾಸಕ ಪಿ.ರವಿಕುಮಾರ್ ಮಾತನಾಡಿ, ಪತ್ರಕರ್ತರ ಸಂಘಕ್ಕೆ ಲಿಫ್ಟ್ ವ್ಯವಸ್ಥೆ ಮಾಡಿಸಿಕೊಡಲು ೫ ಲಕ್ಷ ರು. ನೀಡಿದ್ದೇನೆ. ಇನ್ನೂ ಹೆಚ್ಚಿನ ನೆರವು ನೀಡುವುದಕ್ಕೂ ಸಿದ್ಧನಿದ್ದೇನೆ. ಪತ್ರಕರ್ತರಿಗಾಗಿ ವಿವೇಕಾನಂದ ಬಡಾವಣೆಯಲ್ಲಿ ವಿಶಾಲವಾದ ಜಾಗ ನೀಡಲು ಸಿದ್ಧನಿದ್ದೇನೆ. ಎಲ್ಲರೂ ಒಟ್ಟಾಗಿ ಬಂದರೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ದೊರಕಿಸಿಕೊಡಲು ಬದ್ಧನಾಗಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪುರಸ್ಕೃತ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರನ್ನು ಅಭಿನಂದಿಸಲಾಯಿತು. ಪತ್ರಕರ್ತರಾದ ಕೆ.ಎನ್.ರವಿ, ಪಿ.ಜೆ.ಚೈತನ್ಯಕುಮಾರ್, ಎ.ಎಲ್.ಬಸವೇಗೌಡ, ಶಿವನಂಜಯ್ಯ, ಬಿ.ಪಿ.ಪ್ರಕಾಶ್, ಕೆ.ಎನ್.ನವೀನ್‌ಕುಮಾರ್, ಆನಂದ ಅವರನ್ನು ಸನ್ಮಾನಿಸಲಾಯಿತು.

ನೂತನ ಆಡಳಿತ ಮಂಡಳಿ ಸದಸ್ಯರಿಗೆ ನಿರ್ಮಲಾನಂದನಾಥ ಸ್ವಾಮೀಜಿ ಅವರು ಶಾಲು ಹೊದಿಸಿ ಪ್ರಮಾಣಪತ್ರಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ಪ್ರಧಾನ ಕಾರ್ಯದರ್ಶಿ ಬಿ.ಸಿ.ಲೋಕೇಶ್, ಕಾರ್ಯದರ್ಶಿ ಸೋಮಶೇಖರ್, ಜಿಲ್ಲಾ ಸಂಘದ ಅಧ್ಯಕ್ಷ ಕೆ.ಎನ್.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಶಶಿಧರ, ಕೆ.ಶ್ರೀನಿವಾಸ್ ಇತರರು ಹಾಜರಿದ್ದರು.

PREV

Recommended Stories

ಮಕ್ಕಳ ಪ್ರತಿಭೆಗೆ ಚಿತ್ರಕಲಾ ಸ್ಪರ್ಧೆ ವೇದಿಕೆ
ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದಕ್ಕೆ ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿದೆ: ಎಚ್‌.ಎನ್.ಅಶೋಕ್