ಕನ್ನಡಪ್ರಭ ವಾರ್ತೆ ಬೆಳ್ತಂಗಡಿವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ಕೂಲಂಕಷ ತನಿಖೆ ನಡೆಯುತ್ತಿದೆ. ಸ್ಫೋಟದ ಸ್ಥಳದ 100 ಮೀ. ವ್ಯಾಪ್ತಿಯಲ್ಲಿ ಪೊಲೀಸ್ ಹಾಗೂ ಅಗತ್ಯ ಅಧಿಕಾರಿಗಳನ್ನು ಹೊರತುಪಡಿಸಿ ಇತರರಿಗೆ ಪ್ರವೇಶ ನಿಷೇಧಿಸಲಾಗಿದೆ. ಸುಡುಮದ್ದು ತಯಾರಿಕಾ ಘಟಕದ ಮಾಲಕ ಸೈಯ್ಯದ್ ಬಶೀರ್ (45) ಎಂಬಾತನನ್ನು ಸುಳ್ಯದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಘಟನೆಯಲ್ಲಿ ಸುಡುಮದ್ದು ತಯಾರಿಯಲ್ಲಿ ತೊಡಗಿದ್ದ ಕೇರಳದ ಸ್ವಾಮಿ ಯಾನೆ ಕುಂಞ(60), ವರ್ಗಿಸ್(62) ಹಾಸನದ ಅರಸೀಕೆರೆಯ ಚೇತನ್(24) ಎಂಬವರು ಮೃತಪಟ್ಟಿದ್ದರು. ಇದರಲ್ಲಿ ವರ್ಗಿಸ್ ಹಾಗೂ ಚೇತನ್ ಎಂಬವರ ದೇಹಗಳು ಸ್ಥಳದಲ್ಲಿ ಛಿದ್ರಗೊಂಡಿದ್ದರೆ, ಸ್ವಾಮಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದರು. ಇವರ ಪೈಕಿ ವರ್ಗೀಸ್ ಎಂಬವರು ಸುಡುಮದ್ದು ತಯಾರಿಯಲ್ಲಿ 25 ವರ್ಷಗಳಿಗಿಂತ ಹೆಚ್ಚಿನ ಅನುಭವ ಹೊಂದಿದ್ದರು ಎಂದು ಹೇಳಲಾಗಿದೆ. ಸ್ವಾಮಿ ಮತ್ತು ಚೇತನ್ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಫಾರೆನ್ಸಿಕ್, ಅಗ್ನಿಶಾಮಕ ದಳ, ಬಿಡಿಡಿಎಸ್, ಕಂದಾಯ, ಕಾರ್ಮಿಕ ಇಲಾಖೆ ಸೇರಿದಂತೆ ಅಗತ್ಯ ಇಲಾಖೆಗಳ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.ಜಿಲ್ಲಾ ಪೊಲೀಸ್ ಅಧೀಕ್ಷಕ ರಿಶ್ಯಂತ್ ಸಿ. ತಿಳಿಸಿದಂತೆ, ಪ್ರಾಥಮಿಕ ಹಂತದ ತನಿಖೆಗಳ ಪ್ರಕಾರ ಮೈಸೂರಿನ ಓರ್ವರಿಂದ ಬಂದ ಬೇಡಿಕೆಯಂತೆ ಸುಡುಮದ್ದು ತಯಾರಿ ನಡೆಯುತ್ತಿದ್ದು, ಅವುಗಳನ್ನು ತಯಾರಿಸುವ ಕಚ್ಚಾ ವಸ್ತುಗಳ ಮಿಶ್ರಣದ ಪ್ರಮಾಣದಲ್ಲಿ ಏರುಪೇರು ಆಗಿರುವುದು ಸ್ಫೋಟಕ್ಕೆ ಕಾರಣವಾಗಿದೆ. ಇಲ್ಲಿ ಕಂಡುಬಂದಿದ್ದ ದೊಡ್ಡ ಪ್ರಮಾಣದ ಸ್ಫೋಟಕಗಳ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದು, ಇದು ಸ್ಥಳೀಯವಾಗಿ ತಯಾರಾಗುವ ಕದೋನಿ ಸುಡುಮದ್ದು ಎಂದು ಹೇಳಲಾಗಿದೆ ಎಂದು ತಿಳಿಸಿದ್ದಾರೆ.
ಸುಡುಮದ್ದು ನಿರ್ಮಾಣ ಘಟಕದ ಸುತ್ತಲೂ 8 ಅಡಿ ಎತ್ತರದಷ್ಟು ಕಾಂಪೌಂಡ್ ಇದ್ದು, ಒಳಗಿನ ಚಟುವಟಿಕೆ ಯಾರಿಗೂ ಕಾಣುತ್ತಿರಲಿಲ್ಲ. ಇದರಲ್ಲಿ ಒಂದು ಭಾಗದ ಕಂಪೌಂಡ್ ಪಕ್ಕವೇ ಟೆಂಟ್ ಹಾಕಿ ಸುಡುಮದ್ದು ತಯಾರಿ ನಡೆಸುತ್ತಿದ್ದು, ಸ್ಫೋಟದ ತೀವ್ರತೆಗೆ ಸುಮಾರು 25 ಮೀ.ಯಷ್ಟು ಕಂಪೌಂಡ್ ಧರಾಶಾಯಿಯಾಗಿದೆ. ಅಲ್ಲದೆ ಅಲ್ಲಿ ಶೆಡ್ ಇದ್ದ ಕುರುಹುಗಳು ಕಂಡು ಬರದ ಸ್ಥಿತಿ ಉಂಟಾಗಿದೆ.
* ಸುತ್ತಮುತ್ತಲ ಮನೆಗಳಿಗೆ ಹಾನಿ
। ರಿಶ್ಯಂತ್, ಪೋಲಿಸ್ ಅಧೀಕ್ಷಕರು, ದಕ.ವಿವಿಧ ಇಲಾಖೆಗಳು ನೀಡಿದ ಪೂರಕ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಘಟಕಕ್ಕೆ ಅನುಮತಿ ನೀಡಲಾಗಿದೆ. ಅನುಮತಿ ನೀಡುವ ವೇಳೆ ತಿಳಿಸಲಾಗಿರುವ ಷರತ್ತುಗಳನ್ನು ಪಾಲಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
-----------------ಸ್ಫೋಟದಿಂದ ನಮ್ಮ ಮನೆಗೆ ತೀವ್ರ ಹಾನಿಯಾಗಿದ್ದು, ಇದರಲ್ಲಿ ವಾಸಿಸುವುದು ಅಸಾಧ್ಯವಾಗಿದೆ. ಯಾರೋ ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವಂತಾಗಿರುವುದು ವಿಪರ್ಯಾಸ. ಈ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿ ನಮಗೆ ಸೂಕ್ತ ವಾಸ್ತವ್ಯ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕು. ಸಂಸದ ನಳಿನ್ ಕುಮಾರ್, ಶಾಸಕ ಹರೀಶ್ ಪೂಂಜ ಈ ಬಗ್ಗೆ ಭರವಸೆ ನೀಡಿದ್ದಾರೆ.