ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ.ಪ್ರಶಸ್ತಿಗಳು ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಹೊಂದಿರುತ್ತದೆ. ಆಯ್ಕೆಯಾದ ಕೃತಿಗಳಿಗೆ ಜೂನ್ 23 ರಂದು ಬೆಳಗ್ಗೆ 10ಕ್ಕೆ ಕನ್ನಡಭವನದ ನಯನ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷೆ ಡಾ। ಎಚ್.ಎಲ್.ಪುಷ್ಟಾ ತಿಳಿಸಿದ್ದಾರೆ.
2023ರ ಜನವರಿಯಿಂದ 2023ರ ಡಿಸೆಂಬರ್ ವರೆಗೆ ಪ್ರಕಟಗೊಂಡ ಕೃತಿಗಳನ್ನು ಮಾತ್ರ ಪ್ರಶಸ್ತಿಗೆ ಕಳುಹಿಸಬೇಕು. ಕಾಕೋಳು ಸರೋಜಮ್ಮ ಪ್ರಶಸ್ತಿ (ಕಾದಂಬರಿ), ಭಾಗ್ಯ ನಂಜಪ್ಪ ಪ್ರಶಸ್ತಿ (ವಿಜ್ಞಾನ ಸಾಹಿತ್ಯ,), ನಾಗರತ್ನ ಚಂದ್ರಶೇಖರ್ ಪ್ರಶಸ್ತಿ (ಲಲಿತ ಪ್ರಬಂಧ), ಜಿ.ವಿ.ನಿರ್ಮಲಾ ಪ್ರಶಸ್ತಿ (ಭಾರತದ ಯಾವುದೇ ಭಾಷೆಯ ಅನುವಾದಿತ ಕಾದಂಬರಿ, ಕಥಾ ಸಂಕಲನ, ಜೀವನ ಚರಿತ್ರೆ), ತ್ರಿವೇಣಿ ಸಾಹಿತ್ಯ ಪುರಸ್ಕಾರ (ಸಣ್ಣಕಥೆ ಅಥವಾ ಕಾದಂಬರಿ), ಕಮಲಾ ರಾಮಸ್ವಾಮಿ ಪ್ರಶಸ್ತಿ (ಪ್ರವಾಸ ಸಾಹಿತ್ಯ), ನುಗ್ಗೆಹಳ್ಳಿ ಪಂಕಜ ಪ್ರಶಸ್ತಿ (ಹಾಸ್ಯ ಕೃತಿ), ಗುಣಸಾಗರಿ ನಾಗರಾಜ್ ಪ್ರಶಸ್ತಿಗೆ (ಮಕ್ಕಳ ಸಾಹಿತ್ಯ) ಕೃತಿಗಳನ್ನು ಕಳುಹಿಸಬಹುದು.ಹಾಗೆಯೇ ಇಂದಿರಾ ವಾಣಿರಾವ್ ಪ್ರಶಸ್ತಿ (ನಾಟಕ), ಜಯಮ್ಮ ಕರಿಯಣ್ಣ ಪ್ರಶಸ್ತಿ (ಸಂಶೋಧನೆ), ತ್ರಿವೇಣಿ ದತ್ತಿನಿಧಿ ಪ್ರಶಸ್ತಿ (ಕಥೆ, ಕಾದಂಬರಿ ಪ್ರಥಮ, ದ್ವಿತೀಯ, ತೃತೀಯ), ಉಷಾ ಪಿ.ರೈ ಪ್ರಶಸ್ತಿ (ಕವನ ಸಂಕಲನ- 2021- 2022 - 2023 ಈ ಮೂರು ವರ್ಷಗಳಲ್ಲಿ ಪ್ರಕಟಗೊಂಡ ಕವನ ಸಂಕಲನ), ನಿರುಪಮಾ ಪ್ರಶಸ್ತಿಗೆ (ಡಿಜಿಟಲ್ ಮತ್ತು ಮುದ್ರಣ ಮಾಧ್ಯಮದಲ್ಲಿ ಪ್ರಕಟಗೊಂಡ ಕಥೆಗಳು) ಕೃತಿಗಳನ್ನು ಆಹ್ವಾನಿಸಲಾಗಿದೆ.
ದತ್ತಿ ಬಹುಮಾನಕ್ಕಾಗಿ ಲೇಖಕಿಯರು, ಸಾಹಿತ್ಯಾಸಕ್ತರು ಮೇಲೆ ಸೂಚಿಸಿರುವ ಯಾವುದೇ ಪ್ರಕಾರಗಳಿಗೆ ಕೃತಿಗಳನ್ನು ಕಳುಹಿಸಬಹುದು. ಕೃತಿಗಳ ಮೇಲೆ ಆಯಾ ದತ್ತಿನಿಧಿಯ ಹೆಸರು ಬರೆಯಬೇಕು. ಲೇಖಕಿಯರು ತಮ್ಮ 3 ಕೃತಿಗಳನ್ನು ಕಳುಹಿಸಬೇಕು. ಮೇ 23 ಕೃತಿಗಳನ್ನು ಕಳುಹಿಸಲು ಕಡೆಯ ದಿನವಾಗಿದೆ. ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು, 206, 2ನೇ ಮಹಡಿ, ವಿಜಯ ಮ್ಯಾನ್ಷನ್, 2ನೇ ತಿರುವು, 2ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು 18 ಇಲ್ಲಿಗೆ ಕೃತಿಗಳನ್ನು ತಲುಪಿಸುವಂತೆ ಸಂಘ ಕೋರಿದೆ.