ಪಶ್ಚಿಮ ಘಟ್ಟದ ಸಂಪತ್ತು ಕಬಳಿಸಲು ಯತ್ನವೇ?

KannadaprabhaNewsNetwork |  
Published : Feb 15, 2026, 02:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಪಶ್ಚಿಮ ಘಟ್ಟ ಶ್ರೇಣಿಗಳು ಜೀವ ವೈವಿದ್ಯತಾ ತಾಣಗಳು ಮಾತ್ರವಲ್ಲದೆ ತನ್ನೊಡಲೊಳಗೆ ಅಗಾಧವಾದ ಗಣಿಸಂಪತ್ತನ್ನೆ ಹೊಂದಿವೆ. ಈ ಸಂಪತ್ತನ್ನು ಪತ್ತೆ ಮಾಡಿ ಗಣಿಗಾರಿಕೆ ಮೂಲಕ ಕಬಳಿಸುವ ಯತ್ನ ನಡೆದಿದೆಯೇ ಎಂಬ ಚರ್ಚೆಗಳು ಇದೀಗ ಮಲೆನಾಡಿನಲ್ಲಿ ಆರಂಭಗೊಂಡಿವೆ.

ಸಮೀಕ್ಷೆ ಜುಲೈ 31ರ ವರೆಗೆ ನಡೆಯಲಿದೆ

ವಿಶ್ವನಾಥ ಮಲೇಬೆನ್ನೂರುಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪಶ್ಚಿಮ ಘಟ್ಟ ಶ್ರೇಣಿಗಳು ಜೀವ ವೈವಿದ್ಯತಾ ತಾಣಗಳು ಮಾತ್ರವಲ್ಲದೆ ತನ್ನೊಡಲೊಳಗೆ ಅಗಾಧವಾದ ಗಣಿಸಂಪತ್ತನ್ನೆ ಹೊಂದಿವೆ. ಈ ಸಂಪತ್ತನ್ನು ಪತ್ತೆ ಮಾಡಿ ಗಣಿಗಾರಿಕೆ ಮೂಲಕ ಕಬಳಿಸುವ ಯತ್ನ ನಡೆದಿದೆಯೇ ಎಂಬ ಚರ್ಚೆಗಳು ಇದೀಗ ಮಲೆನಾಡಿನಲ್ಲಿ ಆರಂಭಗೊಂಡಿವೆ.

ಇದಕ್ಕೆ ಪುಷ್ಟಿ ನೀಡುವಂತೆ ಕಳೆದೊಂದು ವಾರದಿಂದ ಚಿಕ್ಕಮಗಳೂರು‌ ಜಿಲ್ಲೆ ವ್ಯಾಪ್ತಿಯಲ್ಲಿ ಲಘು ವಿಮಾನ ಅತ್ಯಂತ ಕೆಳ ಮಟ್ಟದಲ್ಲಿ ಹಾರಾಟ ನಡೆಸುತ್ತಿದ್ದು, ಈ ಬಗ್ಗೆ ಸ್ಪಷ್ಟಣೆ ನೀಡಿರುವ ಅಧಿಕಾರಿಗಳು,

ಭಾರತೀಯ ಭೂವೈಜ್ಞಾನಿಕ ಏರೋ ಜಿಯೋಫಿಸಿಕಲ್ (ವಾಯುಗಾಮಿ ಭೂಭೌತಿಕ) ಸಮೀಕ್ಷೆಯನ್ನು ಮೆಸರ್ಸ್ ಎಕ್ಸ್ಕ್ಯಾಲಿ ಬರ್ ಮೆಕ್ಫಾರ್ ಪ್ರೈವೇಟ್ ಕಂಪನಿಯಿಂದ ಖನಿಜ ನಿಕ್ಷೇಪಗಳ ಪ್ರದೇಶವನ್ನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ. ಹೀಗಾಗಿ, ಚಿಕ್ಕಮಗಳೂರು ಜಿಲ್ಲೆಯ ಹೊರನಾಡು, ಬಾಳೆಹೊನ್ನೂರು, ಖಾಂಡ್ಯ, ಭದ್ರಾ ಅಭಯಾರಣ್ಯ ವ್ಯಾಪ್ತಿ, ತರೀಕೆರೆ ಹಾಗೂ ಅಜ್ಜಂಪುರ ಭಾಗದಲ್ಲಿ ಲಘು ವಿಮಾನ ಹಾರಾಟದ ಮೂಲಕ ಸರ್ವೇ ನಡೆಸುತ್ತಿದೆ. ಈ ಸಮೀಕ್ಷೆ ಜುಲೈ 31ರ ವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಆದರೆ, ಹೇಗೆ, ಅರಣ್ಯ ಇಲಾಖೆ ಕಾಯ್ದೆಗಳು ಅಷ್ಟೊಂದು ಬಿಗಿಯಾಗಿದ್ದರೂ, ನಿಕ್ಷೇಪಗಳ ಪತ್ತೆ ಮುಂದಾಗಿದ್ದಾರೆ‌ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.

ಮಲೆನಾಡು ಭಾಗದ ಜನರು ಜೀವನೋಪಾಯಕ್ಕಾಗಿ ಅರಣ್ಯ ವ್ಯಾಪ್ತಿಯಲ್ಲಿ ಕೃಷಿ ನಡೆಸಿದರೂ ಸುಮ್ಮನಿರದ ಸರ್ಕಾರ ಹಾಗೂ ಅರಣ್ಯ ಅದೇಗೆ ನಿಕ್ಷೇಪಗಳ ಪತ್ತೆ ಅವಕಾಶ ನೀಡಿದೆ. ಒಂದು ವೇಳೆ ನಿಕ್ಷೇಪಗಳು ಪತ್ತೆಯಾದರೂ ಯಾವ ರೀತಿ ಅದನ್ನು ಹೊರಗೆ ತೆಗೆಯುತ್ತಾರೆಂಬ ಪ್ರಶ್ನೆ ಮಾಡುತ್ತಿದ್ದಾರೆ.

ದಿನೇ ದಿನೇ ಅರಣ್ಯ ಕಾಯ್ದೆಗಳು ಬಿಗಿಯಾಗುತ್ತಿದ್ದು, ಜನ ಆತಂಕದಲ್ಲೇ ದಿನಗಳನ್ನು ಕಳೆಯುವಂತಾಗಿದೆ. ಇತರ ನಡುವೆ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಅತ್ಯಂತ ತಳಮಟ್ಟದಲ್ಲಿ ಖನಿಜಗಳ ಪತ್ತೆಗೆ ಸರ್ವೆ ನಡೆಸಲು ಲಘು ವಿಮಾನ ಹಾರಾಟ ನಡೆಸಿ ರುವುದು ಮಲೆನಾಡಿಗರ ಆತಂಕಕ್ಕೆ ಕಾರಣವಾಗಿದೆ.

ಇದೀಗ ವಿಮಾನದ ಹಾರಾಟ ಮಲೆನಾಡಿಗರ ಶಕ್ತಿಯನ್ನೇ ಕುಂದಿಸಿದೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಖನಿಜ ಸಂಪತ್ತು ಪತ್ತೆಯಾಗಿ ಗಣಿಗಾರಿಕೆ ಆರಂಭಗೊಂಡರೆ ತಮ್ಮ ಪಾಡೇನು ಎಂಬ ಚಿಂತೆ ಎಲ್ಲರನ್ನೂ ಕಾಡಲಾರಂಭಿಸಿದೆ....ಬಾಕ್ಸ್....

ಭೂಮಿ ನೀಡಲು ಕಾನೂನು ತೊಡಕು ರೈತರಿಗೆ ಮಾತ್ರವೇ?

ಪಶ್ಚಿಮಘಟ್ಟ ಶ್ರೇಣಿಯ ಮಲೆನಾಡಿನ ರೈತರಿಗೆ ಭೂ ಮಂಜೂರಾತಿ ನೀಡಲು ಸಾಕಷ್ಟು ಕಾನೂನು ತೊಡಕುಗಳು ಎದು ರಾಗುತ್ತವೆ. ಆದರೆ ಗಣಿಗಾರಿಕೆ ವಿಷಯ ಬಂದಾಗ ಮಾತ್ರ ಎಲ್ಲಾ ಕಾನೂನುಗಳು ತೆರೆಮರೆಗೆ ಸರಿದು ಬಿಡುತ್ತವೆ. ಇದಕ್ಕೆ ಹತ್ತಾರು ಉದಾಹರಣೆಗಳು ಪಶ್ಚಿಮಘಟ್ಟ ಶ್ರೇಣಿಯಲ್ಲಿಯೇ ಇವೆ. ಸ್ಥಳೀಯರ ಹೋರಾಟದ ಪರಿಣಾಮ ಗಣಿಗಾರಿಕೆ ಸ್ಥಗಿತ ಗೊಂಡು ಪಶ್ಚಿಮ ಘಟ್ಟ ಶ್ರೇಣಿ ಉಳಿದಿದೆಯೇ ಹೊರತು ಯಾವುದೇ ಕಾನೂನುಗಳಿಂದ ಅಲ್ಲ ಎನ್ನುವುದು ಇನ್ನೊಂದು ವಿಶೇಷವಾಗಿದೆ.

ಈಗಾಗಲೇ ಮಲೆನಾಡಿನ ಸಾವಿರಾರು ಮಂದಿ ರೈತರು ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ ಅವರಿಗೆ ಭೂಮಿ ಮಂಜೂರು ಮಾಡಲು ಕಾನೂನಿನ ನೆಪವೊಡ್ಡಲಾಗುತ್ತಿದೆ. ಇದೇ ವೇಳೆಗೆ ರಾಜಕಾರಣಿಗಳು ಹಾಗೂ ಪ್ರಭಾವಿಗಳು ಭೂಮಿ ಖರೀದಿಸುವ ಜತೆಗೆ ಸಾಕಷ್ಟು ಒತ್ತುವರಿ ಮಾಡಿದರೂ ಪ್ರಶ್ನಿಸುವವರೇ ಇಲ್ಲದಂತಾಗಿದೆ. ಇದಕ್ಕೂ ವೈಮಾನಿಕ ಸಮೀಕ್ಷೆಗೂ ಸಂಬಂಧವಿದೆಯೇ ಎಂಬ ಅನುಮಾನ ಶುರುವಾಗಿದೆ.

ಕೋಟ್....

ಪಶ್ಚಿಮಘಟ್ಟದಲ್ಲಿರುವ ಖನಿಜಾಂಶಗಳ ಪತ್ತೆಗಾಗಿ ವೈಮಾನಿಕ ಸಮೀಕ್ಷೆ ನಡೆಸಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಬೇಕು. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಗಣಿಗಾರಿಕೆಗು ಅವಕಾಶ ಮಾಡಿಕೊಡಬಾರದು.

ವೀರೇಶ್, ಪರಿಸರಾಸಕ್ತ, ಚಿಕ್ಕಮಗಳೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ಮಾ. 13 ರವರೆಗೆ ಕಪ್ಪಡಿ ಜಾತ್ರಾ ಮಹೋತ್ಸವ
ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ನಂದಿಗ್ರಾಮ ಸಜ್ಜು