)
-ಪ್ರಜಾಸೇವಾ ಆಂದೋಲನಕ್ಕಾಗಿ ಶಿಕ್ಷಕರ ದಿನದ ಗೌರವಕ್ಕೆ ಧಕ್ಕೆ: ಶಶೀಲ್ ಜಿ ನಮೋಶಿ ಆಕ್ಷೇಪ
ಕನ್ನಡಪ್ರಭ ವಾರ್ತೆ ಕಲಬುರಗಿ
ಸೆಪ್ಟೆಂಬರ್ 5ರಂದು ದೇಶದಾದ್ಯಂತ ಶಿಕ್ಷಕರ ದಿನಾಚರಣೆ ನಡೆಯುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಅದೇ ದಿನ ಬೆ. 11ರಿಂದ ಮಧ್ಯಾಹ್ನ 3ರವರೆಗೆ ‘ಪ್ರಜಾಸೇವಾ ಆಂದೋಲನ’ ಸಭೆಗಳನ್ನು ನಡೆಸಿ, ನಂತರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಮಧ್ಯಾಹ್ನ 3 ಗಂಟೆಗೆ ನಡೆಸುವಂತೆ ಸೂಚಿಸಿತ್ತು. ಈ ಬೆಳವಣಿಗೆ ಶಿಕ್ಷಕ ಸಮುದಾಯಕ್ಕೆನೋವು ಮಾಡಿದೆ ಎಂದು ವಿಪ ಸದಸ್ಯ ಶಶೀಲ್ ಜಿ ನಮೋಶಿ ಅಭಿಪ್ರಾಯಪಟ್ಟಿದ್ದಾರೆ.ಸರ್ಕಾರದ ಆಗಸ್ಟ್ 27, 2026ರ ಸೂಚನೆಯಂತೆ ಸೆಪ್ಟೆಂಬರ್ 5ರಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಜಾಸೇವಾ ಆಂದೋಲನ ಸಭೆಗಳನ್ನು ಆಯೋಜಿಸಲಾಗುತ್ತಿದೆ.
ಶಿಕ್ಷಕರ ದಿನಾಚರಣೆ ಕೇವಲ ಒಂದು ಸರ್ಕಾರಿ ಕಾರ್ಯಕ್ರಮವಲ್ಲ. ಗುರು-ಶಿಷ್ಯ ಪರಂಪರೆ, ಶಿಕ್ಷಣ ಕ್ಷೇತ್ರದ ಸೇವೆ ಮತ್ತು ಶಿಕ್ಷಕರ ಕೊಡುಗೆಯನ್ನು ಗೌರವಿಸುವ ವಿಶೇಷ ದಿನ. ಇಂತಹ ದಿನದಂದು ಶಿಕ್ಷಕರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮಕ್ಕೆ ಆದ್ಯತೆ ನೀಡಬೇಕೇ ಹೊರತು, ಮತ್ತೊಂದು ಆಡಳಿತಾತ್ಮಕ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ಸಮಯ ಬದಲಿಸಿದ್ದು ಸೂಕ್ತವಲ್ಲ ಎಂಬ ಅಭಿಪ್ರಾಯ ನಮೋಶಿ ವ್ಯಕ್ತಪಡಿಸಿದ್ದಾರೆ.