ಹಾವೇರಿ: ಬಿಜೆಪಿಯವರು ರಾಮಮಂದಿರ, ಮುಸ್ಲಿಮರ ವಿರುದ್ಧ ಮಾತನಾಡುವುದು ಬಿಟ್ಟು ಬೇರೇನೂ ಮಾಡಿಲ್ಲ. ಈ ಚುನಾವಣೆ ನ್ಯಾಯ - ಅನ್ಯಾಯ, ಸುಳ್ಳು- ಸತ್ಯಗಳ ನಡುವಿನ ಚುನಾವಣೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಪದವಿ ಓದಿರುವ ಶೇ. 65ರಷ್ಟು ವಿದ್ಯಾರ್ಥಿಗಳಿಗೆ ಕೆಲಸ ಸಿಗುತ್ತಿಲ್ಲ. ಚೀನಾ ಸೇನೆ ಭಾರತದ ಗಡಿಯೊಳಗೆ ಬಂದಿದೆ. 2019ರಲ್ಲಿ ಪುಲ್ವಾಮಾದಲ್ಲಿ 300 ಕೆಜಿ ಆರ್ಡಿಎಕ್ಸ್ ಎಲ್ಲಿಂದ ಬಂತು? ಈ ಬಗ್ಗೆ ಚರ್ಚೆಯಾಗಬೇಕಲ್ಲವೇ? ಗೋಹತ್ಯೆ ನಿಷೇಧದ ಬಗ್ಗೆ ಮಾತನಾಡುವವರು ಗೋಮಾಂಸ ರಫ್ತು ನಿಲ್ಲಿಸಿದ್ದಾರಾ ? ಸುಳ್ಳು ಹೇಳುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಅದಾನಿ, ಅಂಬಾನಿಗೆ ಅಷ್ಟು ಆಸ್ತಿ ಹೇಗೆ ಬಂತು? 6 ವರ್ಷದಲ್ಲಿ ₹11 ಲಕ್ಷ ಕೋಟಿ ಹೇಗೆ ಗಳಿಸಿದರು ಎಂದು ಪ್ರಶ್ನಿಸಿದರು.
ನೇಹಾ ಪ್ರಕರಣವನ್ನು ನಾವೆಲ್ಲರೂ ಖಂಡಿಸಿದ್ದೇವೆ. ಬಿಜೆಪಿಯ ಎಲ್ಲರೂ ಆಕೆಯ ಮನೆಗೆ ಹೋದರು. ಬೇರೆ ಪ್ರಕರಣಗಳಲ್ಲಿ ಯಾಕೆ ಹೋಗಲಿಲ್ಲ? ಚುನಾವಣೆ ಬಳಿಕ ಅವರ ಮನೆಗೆ ಎಷ್ಟು ಜನ ಹೋಗುತ್ತಾರೆಯೋ ನೋಡೋಣ ಎಂದರು.ನಮ್ಮ ಸರ್ಕಾರದ ಸಾಧನೆಯಿಂದಾಗಿ ಈ ಬಾರಿ ಆನಂದಸ್ವಾಮಿ ಗಡ್ಡದೇವರಮಠ ಗೆಲುವು ಖಚಿತ ಎಂದರು.ಶಾಸಕ ರುದ್ರಪ್ಪ ಲಮಾಣಿ, ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಧಾರವಾಡ ಕ್ಷೇತ್ರದ ಅಭ್ಯರ್ಥಿ ವಿನೋದ ಅಸೂಟಿ, ಎಂ.ಎಂ. ಹಿರೇಮಠ, ರಾಜೇಶ್ವರಿ ಪಾಟೀಲ, ಪ್ರೇಮಾ ಪಾಟೀಲ ಇತರರು ಇದ್ದರು.