ಕುಕನೂರು: ರಂಗಭೂಮಿ ಕಲೆ ಉಳಿಸಿ ಬೆಳಸುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ. ಆಧುನಿಕ ಯುಗದಲ್ಲಿ ನಶಿಸುತ್ತಿರುವ ರಂಗಭೂಮಿ ಕಲೆ ಉಳಿವಿಗೆ ಹಬ್ಬ, ಹರಿದಿನ ಜಾತ್ರಾ ಸಂದರ್ಭದಲ್ಲಿ ನಾಟಕ ಹಮ್ಮಿಕೊಂಡು ಕಲೆ ಉಳಿವಿಗೆ ಸದಾ ಶ್ರಮಿಸುತ್ತಿರುವ ಚಿಕೇನಕೊಪ್ಪ ಯುವಕರ ಕಾರ್ಯ ಶ್ಲಾಘನೀಯ ಎಂದು ಕುಕನೂರಿನ ಅನ್ನದಾನೇಶ್ವರ ಶಾಖಾಮಠದ ಶ್ರೀ ಮಹಾದೇವ ಸ್ವಾಮೀಜಿ ಹೇಳಿದರು.ತಾಲೂಕಿನ ಚಿಕೇನಕೊಪ್ಪ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಹಾಗೂ ಶ್ರೀ ಈಶ್ವರ ದೇವರ ೬ನೇ ವರ್ಷದ ಕಾರ್ತಿಕೋತ್ಸವದ ನಿಮಿತ್ಯ ಯುವ ನಾಟ್ಯ ಸಂಘದ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ದುರಂತ ನಾಯಕಿ ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಆರ್ಶೀವಚನ ನೀಡಿ ಮಾತನಾಡಿದ ಅವರು, ಧಾರ್ಮಿಕ ಕಾರ್ಯಗಳಿಂದ ಪುಣ್ಯಪ್ರಾಪ್ತಿಯಾಗುತ್ತದೆ. ಚಿಕೇನಕೊಪ್ಪ ಗ್ರಾಮ ಧಾರ್ಮಿಕ ಕಾರ್ಯಕ್ಕೆ ಹೆಸರುವಾಸಿಯಾಗಿದೆ. ಗ್ರಾಮದ ಲಿಂ.ಚೆನ್ನವೀರ ಶರಣರು ಮೌನತಪಸ್ವಿಗಳಾಗಿದ್ದರು. ಹಲವಾರು ಪವಾಡಗಳನ್ನು ಮಾಡಿದ್ದರು. ಮನುಕುಲದ ಉದ್ದಾರಕ್ಕೆ ಶ್ರಮಿಸಿದ್ದಾರೆ. ಈ ಗ್ರಾಮ ಪುಣ್ಯ ಗ್ರಾಮವಾಗಿದೆ ಎಂದರು.
ನಾಟಕ ರಂಗಭೂಮಿಯಲ್ಲಿಯೇ ನಿಜವಾದ ಮತ್ತು ಜೀವಂತ ಕಲೆ ಅಡಗಿದ್ದು, ಅದನ್ನು ಉಳಿಸಿ-ಬೆಳೆಸುವ ಕೆಲಸ ಎಲ್ಲೆಡೆ ನಡೆಯಬೇಕಿದೆ. ಸರಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರ ನೆರವಿಗೆ ಧಾವಿಸಲಿ ಎಂದರು.
ಸಾನಿಧ್ಯ ವಹಿಸಿದ್ದ ಯೋಗ ಗುರು ನಿರಂಜನ ಸ್ವಾಮೀಜಿ ಮಾತನಾಡಿ, ನಿಜ ಜೀವನದಲ್ಲಿ ಭಗವಂತ ಮೆಚ್ಚಿಕೊಳ್ಳುವ ರೀತಿಯಲ್ಲಿ ನಾಟಕ ಅಭಿನಯಿಸಬೇಕಿದೆ. ರಂಗಭೂಮಿಯಲ್ಲಿ ನಟನೆ ಮಾಡುವುದು ಒಂದು ಸವಾಲಿನ ಕೆಲಸವಾಗಿದೆ. ರಂಗಕಲೆಯನ್ನು ಕರಗತ ಮಾಡಿಕೊಂಡಲ್ಲಿ ಉತ್ತಮ ಸಾಮಾಜಿಕ ನಾಟಕಗಳನ್ನು ಹೊರತರಬಹುದು ಎಂಬುದಕ್ಕೆ ಗ್ರಾಮದ ಯುವಕರು ಪ್ರಮುಖ ಉದಾಹರಣೆಯಾಗಿದ್ದಾರೆ.ಒಂದು ಕಾಲದಲ್ಲಿ ರಂಗಭೂಮಿಯೂ ಕೇವಲ ಕೆಲವರ ಸ್ವತ್ತಾಗಿತ್ತು. ಇಂದು ವಿವಿದೆಡೆ ರಂಗಭೂಮಿ ಪ್ರಯೋಗಗಳು ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಈ ವಿನೂತನ ಪರಂಪರೆ ಮುಂದುವರಿಯಬೇಕಿದೆ. ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಹಾಗೂ ಮಾನವೀಯತೆಯನ್ನು ಬೆಳೆಸುವಲ್ಲಿ ರಂಗಭೂಮಿ ಕಲೆ ಸಹಕಾರಿಯಾಗಿದೆ ಎಂದರು.