ಹಾವೇರಿ: ಮನುಷ್ಯನ ದೇಹದಲ್ಲಿ ಶೇ. 70ರಷ್ಟು ನೀರಿನಂಶವಿರುವಂತೆ ಪ್ರಕೃತಿಯ ಸಮತೋಲನಕ್ಕೂ ನೀರು ಅತಿ ಅಗತ್ಯ. ಬೇಸಿಗೆಯ ಈ ಕಠಿಣ ಸಮಯದಲ್ಲಿ ಬಾಯಾರಿದ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಮೂಲಕ ಜೀವ ಸಂಕುಲ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿರಾದಾರ ದೇವೇಂದ್ರಪ್ಪ ಎನ್. ಅವರು ಕರೆ ನೀಡಿದರು.
ವಿಶ್ವ ಜಲ ದಿನಾಚರಣೆಯ ಮಹತ್ವವನ್ನು ವಿವರಿಸಿದ ನ್ಯಾಯಾಧೀಶರು ಹಿಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಜನರು ದೂರದೂರಿಗೆ ಹೋಗುತ್ತಿದ್ದ ಪರಿಸ್ಥಿತಿಯನ್ನು ಸ್ಮರಿಸಿದ ಅವರು ಇಂದಿನ ದಿನಗಳಲ್ಲಿ ನೀರಿನ ಕೊರತೆ ಮತ್ತೊಮ್ಮೆ ಹೆಚ್ಚುತ್ತಿರುವುದರಿಂದ ಸಂಗ್ರಹಣೆ ಮರುಬಳಕೆ ಮತ್ತು ಸಮರ್ಪಕ ಉಪಯೋಗಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು. ಪ್ರಾಣಿ ಪಕ್ಷಿಗಳಿಗೆ ನೀರು ಒದಗಿಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಸಿ. ಸಿದ್ದನಗೌಡ ಮಾತನಾಡಿ, ಪರಿಸರದಲ್ಲಿ ಮಾನವನು ಇತರ ಜೀವಿಗಳ ಮೇಲೆ ಅವಲಂಬಿತನಾಗಿದ್ದಾನೆ. ಪರಿಸರದಲ್ಲಿ ಜೇನುನೊಣಗಳು ನಾಶವಾದರೆ ಮನುಷ್ಯನ ಅಂತ್ಯ ಹತ್ತಿರವಾದಂತೆ ಎಂಬ ಮಾತಿದೆ. ಆದ್ದರಿಂದ ಪ್ರಾಣಿ ಪಕ್ಷಿಗಳಿಗೆ ನೀರು ಒದಗಿಸುವ ಮೂಲಕ ಪರಿಸರ ಸಮತೋಲನ ಕಾಪಾಡಬೇಕು, ಪ್ರಕೃತಿಯಲ್ಲಿರುವ ಮೂಕ ಜೀವಿಗಳು ನಮ್ಮಿಂದ ಏನನ್ನೂ ಕೇಳುವುದಿಲ್ಲ. ಬಾಯಾರಿದಾಗ ಸ್ವಲ್ಪ ನೀರು ಕೊಟ್ಟರೆ ಸಾಕು. ತಾಪಮಾನ ಏರುತ್ತಿರುವ ಈ ಕಾಲದಲ್ಲಿ ನಮ್ಮ ಮನೆಯ ಸುತ್ತಮುತ್ತ ಪ್ರಾಣಿ-ಪಕ್ಷಿಗಳಿಗೆ ನೀರು ಇಡುವ ಮೂಲಕ ಪರಿಸರ ಪ್ರೇಮ ಮೆರೆಯೋಣ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ವಾಟರ್ ಫಾರ್ ವಾಯ್ಸಲೆಸ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಂಜನಾ ಚಂದ್ರಶೇಖರ ಅವರು ಪ್ರಾಣಿ-ಪಕ್ಷಿಗಳಿಗೆ ನೀರಿನ ಅಗತ್ಯತೆ ಹಾಗೂ ನೀರಿನ ತೊಟ್ಟಿಗಳನ್ನು ಇಡುವ ಕುರಿತು ಉಪನ್ಯಾಸ ನೀಡಿದರು. ಕಾನೂನು ನೆರವು ಸಹಾಯಕ ಅಭಿರಕ್ಷಣಾ ವಕೀಲರಾದ ಎನ್. ಎಸ್. ಡಿಳ್ಳೆಪ್ಪನವರ ಅವರು ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಅಭಿಯೋಜಕರಾದ ಸರೋಜಾ ಕೂಡ್ಲಗಿಮಠ, ಮುಖ್ಯ ಕಾನೂನು ನೆರವು ಅಭಿರಕ್ಷಣಾ ವಕೀಲರು, ಎಲ್.ಎ.ಡಿ.ಸಿ.ಎಸ್ ವಿ.ಜಿ. ದೊಡ್ಡಗೌಡರ, ವಕೀಲರು, ನ್ಯಾಯಾಲಯದ ಸಿಬ್ಬಂದಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.