ಹಾವೇರಿ: ಗುರುಗಳ ಮಾರ್ಗದರ್ಶನ, ಆಶೀರ್ವಾದ ಹಾಗೂ ಗುರುಬಲದಿಂದಲೇ ವ್ಯಕ್ತಿಯ ಜೀವನ ಉನ್ನತ ಸ್ಥಾನಮಾನಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ಅತ್ಯುನ್ನತ ಸ್ಥಾನವಿದ್ದು, ಗುರು-ಶಿಷ್ಯ ಪರಂಪರೆ ನಮ್ಮ ದೇಶದ ಹೆಮ್ಮೆಯ ಪರಂಪರೆಯಾಗಿದೆ ಎಂದು ಹೇಳಿದರು.
ರಾಮಾಯಣ, ಮಹಾಭಾರತ ಸೇರಿದಂತೆ ಪೌರಾಣಿಕ ಇತಿಹಾಸವನ್ನು ಅವಲೋಕಿಸಿದರೆ, ರಾಜರು ಮತ್ತು ಮಹಾರಾಜರು ಯಾವುದೇ ಶುಭ ಕಾರ್ಯ ಆರಂಭಿಸುವ ಮುನ್ನ ಗುರುಗಳ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದು ಮುನ್ನಡೆಯುತ್ತಿದ್ದರು. ಅಜ್ಞಾನದಿಂದ ಜ್ಞಾನದ ಕಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ ಹಾಗೂ ಭಯದಿಂದ ನಿರ್ಭಯದ ಕಡೆಗೆ ಕೊಂಡೊಯ್ಯುವ ಶಕ್ತಿ ಗುರುಗಳಿಗೆ ಮಾತ್ರ ಇದೆ ಎಂದು ಅವರು ತಿಳಿಸಿದರು.ಭಕ್ತಿ, ಶ್ರದ್ಧೆ ಮತ್ತು ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಗುರುಗಳ ತತ್ವಗಳನ್ನು ಪಾಲಿಸಿದರೆ ಯಶಸ್ಸು ಸಾಧಿಸಲು ಸಾಧ್ಯ. ಗುರು ಪೂರ್ಣಿಮೆಯನ್ನು ವ್ಯಾಸ ಮಹರ್ಷಿಗಳ ಜನ್ಮದಿನವಾಗಿಯೂ ಆಚರಿಸಲಾಗುತ್ತದೆ. ಗುರುಗಳ ಸ್ಮರಣೆ ಮತ್ತು ಗೌರವದ ಸಂಕೇತವಾಗಿರುವ ಈ ಹಬ್ಬವು ದೇಶದಾದ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತದೆ ಎಂದರು.
ಶ್ರೀಮಠದ ಭಕ್ತ ರುದ್ರೇಶ ಚಿನ್ನಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿ, ಗುರುಬಲ ಎಲ್ಲ ಬಲಕ್ಕಿಂತ ಶ್ರೇಷ್ಠವಾಗಿದ್ದು, ಪ್ರತಿಯೊಬ್ಬರ ಜೀವನದಲ್ಲೂ ಗುರುಗಳ ಪ್ರಭಾವ ಮಹತ್ವದ್ದಾಗಿದೆ. ಗುರುಗಳ ಮಾರ್ಗದರ್ಶನವನ್ನು ಸದುಪಯೋಗಪಡಿಸಿಕೊಂಡರೆ ಜೀವನ ಸಾರ್ಥಕವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪರಶುರಾಮ ಹರ್ಲಾಪುರ, ಜಯದೇವ ಕೆರೂಡಿ, ಉಡಚಪ್ಪ ಮಾಳಗಿ, ಸೋಮಣ್ಣ ಸವೂರ, ಎ.ಎಚ್. ಕಬ್ಬಿಣಕಂತಿಮಠ, ನಿಂಗಪ್ಪ ಆರೇರ, ಹೊನ್ನಪ್ಪ ಅಗಸಿಬಾಗಿಲ, ಅಮೀರಜಾನ್ ಬೇಪಾರಿ, ಶಾಹಿದ್ ದೇವಿಹೊಸೂರ, ಮಂಜಣ್ಣ ಗಾಜೀಗೌಡ್ರ, ಹೇಮಾವತಿ ಹರ್ಲಾಪುರ, ನವೀದ್ ಅಮ್ಮಿನಭಾವಿ, ಮಾಲತೇಶ ಆನವಟ್ಟಿ, ಗಣೇಶ ಹೆಚ್. ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಇದ್ದರು.