ಹಾವೇರಿ: ಬದುಕಿನ ಕೊನೆಯ ಗಳಿಗೆಯಲ್ಲೂ ನಮ್ಮ ಜತೆಗೆ ಬರುವುದು ಧರ್ಮವೇ ಹೊರತು ಭೌತಿಕ ಸಂಪತ್ತು ಅಲ್ಲ. ಧರ್ಮವನ್ನು ಯಾರೂ ದೂರ ಮಾಡಬಾರದು. ಧರ್ಮ ರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಪೂಜಿಸುವ ಪರಂಪರೆ ಭಾರತದಲ್ಲಿದೆ. ಬೆಳಗ್ಗೆ ಬೇಗನೇ ಏಳುವ ಜನರಿಗೆ ದುಃಖವನ್ನು ದೂರ ಮಾಡುವ ಶಕ್ತಿಯಿದೆ. ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ. ಆರೋಗ್ಯ ಮತ್ತು ಆಯುಷ್ಯ ಹೆಚ್ಚಿಸಲು ದುಶ್ಚಟಗಳ ಹೋಮ ಮಾಡಬೇಕಿದೆ ಎಂದರು.
ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ, ಭಕ್ತಿ ಎಂಬ ಬಿರುಗಾಳಿಗೆ ಬೀಸುತ್ತಿರುವ ಈ ಸಂದರ್ಭದಲ್ಲಿ ದುಶ್ಚಟಗಳನ್ನು ತೂರಬೇಕಿದೆ ಎಂದರು.ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ಕೃಷ್ಣ ಮಂದಿರದಿಂದ ಆರಂಭವಾದ ಪಾದಯಾತ್ರೆ ಅಶ್ವಿನಿ ನಗರದಲ್ಲಿ ಸಂಚರಿಸಿ ಶಿರಡಿ ಸಾಯಿಬಾಬಾ ಮಂದಿರ ಎದುರು ಸಮಾಪ್ತಗೊಂಡಿತು. ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಕೂಡಲದ ಗುರು ಮಹೇಶ್ವರ ಸ್ವಾಮೀಜಿ, ವಿಜಯಪುರದ ಅಭಿನವ ಷಣ್ಮುಖರೂಢ ಸ್ವಾಮೀಜಿ, ರಾವೂರಿನ ಸಿದ್ಧಲಿಂಗ ಸ್ವಾಮೀಜಿ, ಹೇರೂರಿನ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ, ಆಸಂಗಿಯ ವೀರಬಸವ ದೇವರು ಪಾದಯಾತ್ರೆಯಲ್ಲಿ ಸಾಗಿದರು.
ಮಾಜಿ ಶಾಸಕ ಶಿವರಾಜ ಸಜ್ಜನರ, ಮುಖಂಡರಾದ ಕೊಟ್ರೇಶಪ್ಪ ಬಸೇಗಣ್ಣಿ, ಪಿ.ಡಿ. ಶಿರೂರ, ಜಗದೀಶ ಬೆಟಗೇರಿ, ರಾಜಣ್ಣ ಮಾಗನೂರ, ಮಹೇಶ ಚಿನ್ನಿಕಟ್ಟಿ, ವಿಜಯಣ್ಣ ಗೊಡಚಿ, ಕೆ.ಸಿ. ಪಾವಲಿ, ರಾಜಣ್ಣ ಕಲ್ಲಮ್ಮನವರ, ಗಿರೀಶ ತುಪ್ಪದ ಇದ್ದರು. ಸಿದ್ಧಲಿಂಗಯ್ಯ ಶಾಸ್ತ್ರಿ ಕಾರ್ಯಕ್ರಮ ನಿರ್ವಹಿಸಿದರು.