ಸರ್ಕಾರ ಎಚ್ಚರಿಸುವ ಹೊಣೆ ಸಾಹಿತಿಗಳದ್ದು: ಆರ್. ಸುಂದರಮ್ಮ

KannadaprabhaNewsNetwork |  
Published : May 27, 2024, 01:00 AM IST
26ಕೆಪಿಎಲ್27 ಕೊಪ್ಪಳ ನಗರದಲ್ಲಿ ನಡೆದ ಎರಡು ದಿನಗಳ ಮೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಆಳುವ ಸರ್ಕಾರ ಯಾವುದೇ ಇರಲಿ, ಜನವಿರೋಧಿ ನೀತಿ ಮತ್ತು ಪ್ರಜೆಗಳ ಹಿತಕ್ಕೆ ಧಕ್ಕೆಯಾದಾಗ ಅದನ್ನು ಎಚ್ಚರಿಸುವ ಹೊಣೆ ಸಾಹಿತಿಗಳದ್ದಾಗಿದೆ.

ಮೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ

ಗವಿಮಠ ಹಿಂದೆ ಬೌದ್ಧರ, ಆನಂತರ ಜೈನರ ಕೇಂದ್ರವಾಗಿತ್ತು. ಈಗ ವೀರಶೈವ ಕೇಂದ್ರವಾಗಿದೆ.ಕನ್ನಡಪ್ರಭ ವಾರ್ತೆ ಕೊಪ್ಪಳ

ಆಳುವ ಸರ್ಕಾರ ಯಾವುದೇ ಇರಲಿ, ಜನವಿರೋಧಿ ನೀತಿ ಮತ್ತು ಪ್ರಜೆಗಳ ಹಿತಕ್ಕೆ ಧಕ್ಕೆಯಾದಾಗ ಅದನ್ನು ಎಚ್ಚರಿಸುವ ಹೊಣೆ ಸಾಹಿತಿಗಳದ್ದಾಗಿದೆ. ತಮ್ಮ ಜನಮುಖಿ ಸಾಹಿತ್ಯದ ಮೂಲಕ ಸರ್ಕಾರದ ಕಣ್ಣು ತೆರೆಸಬೇಕು ಎಂದು ಸಾಹಿತಿ ಆರ್. ಸುನಂದಮ್ಮ ಅಭಿಪ್ರಾಯಪಟ್ಟಿದ್ದಾರೆ.

ನಗರದ ಶಿವಶಾಂತ ಮಂಗಲಭವನದಲ್ಲಿ ನಡೆದ ಎರಡು ದಿನಗಳ ಮೇ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ದೇಶದ ಏಕತೆ ಮತ್ತು ಭ್ರಾತೃತ್ವಕ್ಕೆ ಪೆಟ್ಟು ನೀಡುವಂತಹ ಆಡಳಿತವನ್ನು ಸಹಿಸಲಾಗದು. ಅದಕ್ಕೆ ಸರಿಯಾಗಿ ತಿವಿದು, ಸರಿದಾರಿಗೆ ತರಬೇಕು. ಇದಕ್ಕಾಗಿ ಸಾಹಿತ್ಯದ ಮೂಲಕ ಜನಜಾಗೃತಿ ಮೂಡಿಸಬೇಕು ಎಂದರು.

ಇಷ್ಟು ಬೆಳೆದ ನಾಗರಿಕತೆಯ ನಡುವೆಯೂ ಇನ್ನು ಮಹಿಳೆಗೆ ದೊರೆಯಬೇಕಾದ ಸ್ವಾತಂತ್ರ್ಯ ಮತ್ತು ಮನ್ನಣೆ ದೊರೆಯುತ್ತಿಲ್ಲ. ಮಹಿಳಾ ಸ್ವಾತಂತ್ರ್ಯ ಇರದ ಪ್ರಜಾಪ್ರಭುತ್ವ ಪರಿಪೂರ್ಣವಾಗದು. ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸಮಾನತೆಯ ಜತೆಗೆ ಮಹಿಳಾ ಸಮಾನತೆಯೂ ಬಹಳ ಮುಖ್ಯವಾಗಿದೆ. ಈ ದಿಸೆಯಲ್ಲಿ ಜಾಗೃತಿ ಅಗತ್ಯ ಎಂದರು.

ಜಾತಿ ಇನ್ನು ಹೋಗಿಲ್ಲ, ಜಾತಿಯ ಹೆಸರಿನಲ್ಲಿ ಶೋಷಣೆಯೂ ಹಾಗೆಯೇ ಇದೆ. ಆದರೆ, ಇದನ್ನು ಅನುಭವಿಸುವರ ನೋವು ನಮ್ಮೆಲ್ಲರಿಗೂ ಕಾಣುತ್ತಿಲ್ಲ. ಅದನ್ನು ಕಾಣುವ ನೋಟ ನಮ್ಮದಾಗಬೇಕು. ಸಾಹಿತಿಗಳು ಹಾಗೂ ಚಿಂತಕರು ಸಮಾಜದಲ್ಲಿನ ತಲ್ಲಣಗಳನ್ನು ನೋಡಿಯೂ ಮೌನವಾಗಿರಬಾರದು ಎಂದು ಮನವಿ ಮಾಡಿದರು.

ಗವಿಮಠ ಬುದ್ದ ವಿಹಾರ:

ಅಧ್ಯಕ್ಷತೆ ವಹಿಸಿದ್ದ ಪ್ರೊ. ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ, 10ನೇ ಮೇ ಸಾಹಿತ್ಯ ಸಮ್ಮೇಳನ ನಮ್ಮ ನಿರೀಕ್ಷೆ ಮೀರಿ ಯಶಸ್ಸು ಕಂಡಿದೆ. ಹೊಸ ಚಿಂತನೆಗೆ ನಾಂದಿ ಹಾಡಿದೆ, ಜಾಗೃತಿಯನ್ನು ಮೂಡಿಸಿದೆ. ಹೋರಾಟದ ನೆಲವಾದ ಕೊಪ್ಪಳದಲ್ಲಿ ನಿಜಕ್ಕೂ ಇದೊಂದು ಅರ್ಥಪೂರ್ಣ ಸಮ್ಮೇಳನವಾಗಿ ಹೊರಹೊಮ್ಮಿತು ಎಂದರು.

ರೈತರು ಈಗ ಸಂಕಷ್ಟದಲ್ಲಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ಅವರು ತಮ್ಮ ಭೂಮಿ ಮಾರಾಟ ಮಾಡುವುದು ಹಾಗೂ ದೊಡ್ಡ ದೊಡ್ಡ ಕಂಪನಿಗಳಿಗೆ ಗುತ್ತಿಗೆ ನೀಡುವುದು ಮಾಡುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳೆವಣಿಗೆಯಾಗಿದೆ ಎಂದರು.

ಇಲ್ಲಿನ ಗವಿಮಠ ಹಿಂದೆ ಬೌದ್ಧರ, ಆನಂತರ ಜೈನರ ಕೇಂದ್ರವಾಗಿತ್ತು. ಈಗ ವೀರಶೈವ ಕೇಂದ್ರವಾಗಿ ಸಾಕಷ್ಟು ಅಭಿವೃದ್ಧಿ ಕಂಡಿದೆ‌. ಇಲ್ಲಿನ ಗವಿಮಠದ ಜಾತ್ರೆ ಎಲ್ಲ ಜಾತಿ, ಧರ್ಮದವರು ಒಟ್ಟಾಗಿ ಸೇರಿ ಆಚರಿಸುವ ಬಹುದೊಡ್ಡ ಸೌಹಾರ್ದದ ಆಚರಣೆಯಾಗಿದೆ. ಬಸವಾದಿ ಶರಣರ ವಿಚಾರಗಳ ಹಿನ್ನೆಲೆಯ ಈ ಮಠ ಇನ್ನೂ ದೊಡ್ಡ ಪ್ರಮಾಣದಲ್ಲಿ ಆ ನಿಟ್ಟಿನಲ್ಲಿ ಸಾಗಿದರೆ ಸಮಾಜಕ್ಕೆ ದೊಡ್ಡ ಕೊಡುಗೆ ನೀಡುವ ಅವಕಾಶಗಳಿವೆ ಎಂದರು.

ಸಾಹಿತಿ ಬಿ. ಪೀರಬಾಷಾ, ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ತೀರ್ಥಹಳ್ಳಿಯ ಸವಿರಾಜ್ ಆನಂದ್ ಮಾತನಾಡಿದರು.

ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ ಪಡೆದ ಧಾರವಾಡದ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ , ನವಲಕಲ್ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿ ಪಡೆದ ಕೆರೆಕೋಣದ ಮಾಧವಿ ಭಂಡಾರಿ ಮಾತನಾಡಿದರು.

ಕೆ‌.ಬಿ. ಗೋನಾಳ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ
ಎಚ್ಚೆತ್ತ ಬೆಂ.ವಿವಿ: ಲೋಪ ಸರಿಪಡಿಸಿ 400 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ