ಸಿದ್ಧಾಂತದ ಅಡಿಯಲ್ಲಿ ಪಕ್ಷ ಕಟ್ಟುವುದು ಬಹಳ ಮುಖ್ಯ

KannadaprabhaNewsNetwork |  
Published : Mar 09, 2026, 02:15 AM IST
ಹಾವೇರಿ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪಂಡಿತ ದೀನ್ ದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-2026 ಹಾವೇರಿ ಜಿಲ್ಲಾ ಮಟ್ಟದ ಯೋಜನಾ ಸಭೆಯಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು. | Kannada Prabha

ಸಾರಾಂಶ

ಸಿದ್ಧಾಂತದಲ್ಲಿ ರಾಜಿಯಾಗಬಾರದು, ಸಿದ್ಧಾಂತ ಶಾಶ್ವತವಾಗಿರುತ್ತದೆ. ದೀನ ದಯಾಳ ಉಪಾಧ್ಯಾಯ ಮತ್ತು ಶಾಮ್ ಪ್ರಸಾದ ಮುಖರ್ಜಿ ಅವರ ಸಿದ್ಧಾಂತಗಳು ಈಗಲೂ ಪ್ರಸ್ತುತ. ಆ ಸಿದ್ಧಾಂತಗಳನ್ನು ಯಾರು ಅರ್ಥ ಮಾಡಿಕೊಂಡು ಮುಂದುವರೆಯುತ್ತಾರೆ ಅವರು ಯಶಸ್ವಿಯಾಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ:ಸಿದ್ಧಾಂತದಲ್ಲಿ ರಾಜಿಯಾಗಬಾರದು, ಸಿದ್ಧಾಂತ ಶಾಶ್ವತವಾಗಿರುತ್ತದೆ. ದೀನ ದಯಾಳ ಉಪಾಧ್ಯಾಯ ಮತ್ತು ಶಾಮ್ ಪ್ರಸಾದ ಮುಖರ್ಜಿ ಅವರ ಸಿದ್ಧಾಂತಗಳು ಈಗಲೂ ಪ್ರಸ್ತುತ. ಆ ಸಿದ್ಧಾಂತಗಳನ್ನು ಯಾರು ಅರ್ಥ ಮಾಡಿಕೊಂಡು ಮುಂದುವರೆಯುತ್ತಾರೆ ಅವರು ಯಶಸ್ವಿಯಾಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪಂಡಿತ ದೀನ್ ದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-2026 ಹಾವೇರಿ ಜಿಲ್ಲಾ ಮಟ್ಟದ ಯೋಜನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಹಾವೇರಿ ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಶಿಸ್ತಿನಿಂದ ಸಿದ್ಧಾಂತದ ಅಡಿಯಲ್ಲಿ ಕಟ್ಟಬೇಕೆಂಬ ಕಾರಣದಿಂದ ಪ್ರಶಿಕ್ಷಣ ವರ್ಗ ಇಟ್ಟುಕೊಳ್ಳಲಾಗಿದೆ. ಸಿದ್ಧಾಂತದ ಅಡಿಯಲ್ಲಿ ಪಕ್ಷ ಕಟ್ಟುವುದು ಬಹಳ ಮುಖ್ಯ. ಬಿಜೆಪಿ ದೂರ ದೃಷ್ಟಿ ಇರುವ, ದೇಶವನ್ನು ಸಮಗ್ರವಾಗಿ, ಸುರಕ್ಷಿತವಾಗಿ, ಸಾಮಾಜಿಕವಾಗಿ ಕಟ್ಟುವ ನೈತಿಕ ಜವಾಬ್ದಾರಿಯನ್ನು ಬಿಜೆಪಿ ತೆಗೆದುಕೊಂಡಿದೆ. ಆ ದೂರದೃಷ್ಟಿಯನ್ನು ಇಟ್ಟುಕೊಂಡು ನಾವು ದೀರ್ಘ ಕಾಲದ ಪಕ್ಷವನ್ನು ಕಟ್ಟಬೇಕಿದೆ. ಬಹಳಷ್ಟು ಪಕ್ಷಗಳು ಚುನಾವಣೆ ಮುಂಚೆ ಹುಟ್ಟಿ ಚುನಾವಣೆ ನಂತರ ಇರುವುದಿಲ್ಲ. ಕೆಲವು ಪಕ್ಷಗಳು ಅಧಿಕಾರದಲ್ಲಿ ಇದ್ದಾಗ ಮಾತ್ರ ಜೀವಂತ ಇರುತ್ತವೆ. ಬಿಜೆಪಿ ಹಾಗಲ್ಲ, ನಮ್ಮ ಪಕ್ಷ ನಿರಂತರವಾಗಿ ನಡೆಯುತ್ತದೆ. ಸಿದ್ಧಾಂತವೇ ಈ ಪಕ್ಷದ ಬೇರು. ಇದರಲ್ಲಿ ಬಹಳ ಪ್ರಮುಖವಾಗಿ ಇತಿಹಾಸ ವಿಕಾಸದ ಬಗ್ಗೆ ತಿಳಿಸಿ ಪಕ್ಷ ಕಟ್ಟಬೇಕು. ನಮ್ಮ ಕಾರ್ಯ ಪದ್ಧತಿ, ನಮ್ಮ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವುದು ಇದರ ಉದ್ದೇಶ ಎಂದು ಹೇಳಿದರು.ಹೊಸ ನಾಯಕತ್ವ: ತಳ ಹಂತದಿಂದ ಹೊಸ ನಾಯಕತ್ವ ಬರಬೇಕು. ಆ ಬೀಜಾಂಕುರ ಆಗಲು ಸಿದ್ಧಾಂತದ ತಳ ಹದಿ ಹಾಕಬೇಕು. ಬೂತ್ ಮಟ್ಟದ ನಾಯಕರ ಮೂರು ತಂಡ ಮಾಡಿ, ಒಂದು ದಿನ ಅವರಿಗೆ ಹೊರಗೆ ಕರೆದುಕೊಂಡು ಹೋಗಿ ಏಳು ಸೂತ್ರಗಳನ್ನು ತಿಳಿಸಿ ಅವರನ್ನು ನಮ್ಮ ಸಿದ್ಧಾಂತದ ಬಗ್ಗೆ ಗಟ್ಟಿ ಮಾಡುವುದು. ಎಲ್ಲರೂ ಒಟ್ಟಿಗೆ ಒಂದು ದಿನ ಇದ್ದರೆ ಸ್ನೇಹ ಸಂಬಂಧ ಬೆಳೆಯುತ್ತದೆ. ಸಿದ್ಧಾಂತದ ಅರಿವಾಗುತ್ತದೆ. ಅಲ್ಲಿ ಹೇಳಿರುವುದನ್ನು ಆಚರಣೆಗೆ ತರಬೇಕು, ನೀವು ಮಾಡಿದ್ದೀರೊ ಇಲ್ಲವೋ ಎನ್ನುವುದು ನಿಮ್ಮ ಸಂಘಟನಾತ್ಮಕ ನಡವಳಿಕೆಯಲ್ಲಿ ಗೊತ್ತಾಗುತ್ತದೆ. ಸಿದ್ಧಾಂತಗಳನ್ನು ಯಾರು ಅರ್ಥ ಮಾಡಿಕೊಂಡು ಮುಂದುವರೆಯುತ್ತಾರೆ ಅವರು ಯಶಸ್ವಿಯಾಗುತ್ತಾರೆ. ಅಲ್ಲದೇ ಅವರಿಗೆ ನೈತಿಕ ಬಲ ಬರುತ್ತದೆ. ನೈತಿಕ ಬಲ ಬಂದರೆ ಯಶಸ್ಸು, ಸೋಲು-ಗೆಲುವು, ಸನ್ಮಾನ, ಅಪಮಾನ ಎಲ್ಲವನ್ನು ಸಮ ಚಿತ್ರದಿಂದ ತೆಗೆದುಕೊಳ್ಳುವ ಮನಸ್ಥಿತಿ ಬರುತ್ತದೆ. ಎಲ್ಲ ಯುವಕರು ಗಂಭೀರವಾಗಿ ಪರಿಗಣಿಸಿ ಈ ತರಬೇತಿ ತೆಗೆದುಕೊಳ್ಳಬೇಕು, ನಾವು ನೀವು ಸೇರಿ ಪಕ್ಷ ಕಟ್ಟೋಣ, ನಮ್ಮ ಪಕ್ಷ ಸದೃಢ ಆಗಬೇಕು ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ಮಾಜಿ ವಿಧಾನ ಪರಿಷತ್ ಸದಸ್ಯ ಶಿವಯೋಗಿ ಸ್ವಾಮಿ, ಯುವ ಮುಖಂಡ ಭರತ ಬೊಮ್ಮಾಯಿ, ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್, ಭೋಜರಾಜ ಕರೂದಿ, ಗವಿಸಿದ್ದಪ್ಪ ದ್ಯಾಮಣ್ಣವರ, ಡಾ. ಬಸವರಾಜ ಕೆಲಗಾರ, ಶ್ರೀಪತಿ ಉಡುಪಿ, ಕಲ್ಯಾಣಕುಮಾರ ಶೆಟ್ಟರ, ನಂಜುಂಡೇಶ ಕಳ್ಳೇರ, ಭಾರತಿ ಅಳವಂಡಿ, ಡಾ. ಶೋಭಾ ನಿಸ್ಸಿಮಗೌಡ್ರ ಸೇರಿದಂತೆ ಇತರರು ಇದ್ದರು. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಜನ ವಿರೋಧಿ ರಾಜಕಾರಣ ಮಾಡುತ್ತಿದೆ. ಜನ ವಿರೋಧಿ ಸರ್ಕಾರ ಕಿತ್ತೊಗೆದು ನಮ್ಮ ಸಿದ್ಧಾಂತದ ಸರ್ಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶ ಅದಕ್ಕೆ ಇನ್ನೂ ಎರಡು ವರ್ಷ ಇದೆ. ನನ್ನ ಎಂಪಿ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗುವಂತೆ ಮಾಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿ ಯೋಜನೆಗಳಿಂದ ಬಡತನ ನಿರ್ಮೂಲನೆ: ರಾಜೇಂದ್ರ ರಾಣೆ
ಹದಿಹರೆಯ ವಿದ್ಯಾರ್ಥಿ ಜೀವನದ ಸೂಕ್ಷ್ಮ, ಸವಾಲಿನ ಸಮಯ: ಡಾ. ಸುಜ್ಞಾನಿದೇವಿ