ಚಿಕ್ಕಪ್ಪನಹಳ್ಳಿ ಷಣ್ಮುಖ
ಚಿತ್ರದುರ್ಗ ನಗರದಲ್ಲಿ ಅವೈಜ್ಞಾನಿಕ ಡಿವೈಡರ್ ನಿರ್ಮಿಸಿ ಪಾದಾಚಾರಿಗಳ ಓಡಾಟ ಹಾಗೂ ಸುಗಮ ಸಂಚಾರಕ್ಕೆ ಧಕ್ಕೆ ತಂದ ಅಧಿಕಾರಿ ವಲಯದ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವ ಅವಕಾಶವೊಂದನ್ನು ಸುಪ್ರಿಂ ಕೋರ್ಟ್ ಮುಕ್ತವಾಗಿರಿಸಿದೆ.
ಮೂರು ವರ್ಷಗಳ ಹಿಂದೆ ಕನ್ನಡಪ್ರಭ 52 ಸರಣಿ ವರದಿಗಳ ಮೂಲಕ ಇಡೀ ಚಿತ್ರದುರ್ಗ ಸಂಚಾರಿ ವ್ಯವಸ್ಥೆಗೆ ಆಗಿರುವ ಧಕ್ಕೆಯ ವಿವಿಧ ಮಜಲುಗಳ ಅನಾವರಣಗೊಳಿಸಿತ್ತು. ಸುಪ್ರಿಂ ಕೋರ್ಟ್ ಸಮಿತಿಯ ಸೂಚನೆಗಳ ಅಧಿಕಾರಿ ವರ್ಗ ಕ್ಯಾರೇ ಅನ್ನದೇ ಇರುವುದರ ಬಗ್ಗೆ ಎಚ್ಚರಿಸಿತ್ತು. ಅಧಿಕಾರಿಗಳು ಜೈಲಿಗೆ ಹೋಗಲು ರೆಡಿ ಇದ್ದಾರಾ ಎಂಬುದ ಪ್ರಶ್ನಿಸಿತ್ತು.ನಿನ್ನೆಯಷ್ಟೇ ಅಂದರೆ ಆಗಸ್ಟ್ 3ರ ಸೋಮವಾರ ಮಹತ್ವದ ತೀರ್ಪು ನೀಡಿರುವ ಸುಪ್ರಿಂಕೋರ್ಟ್ ಸುರಕ್ಷಿತ ನಡಿಗೆ ಜೀವಿಸುವ ಹಕ್ಕಿನ ಭಾಗವೆಂದು ಹೇಳಿದೆ. ಪಾದಚಾರಿ ರಸ್ತೆ ಗುರುತಿಸುವುದು, ನಿರ್ವಹಣೆ, ರಕ್ಷಣೆ, ಪಾದಾಚಾರಿಗೆ ಸಂಬಂಧಿಸಿದ ಮೂಲ ಸೌಕರ್ಯ ಒದಗಿಸುವುದು ಸ್ಥಳೀಯ ಸಂಸ್ಥೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಕರ್ತವ್ಯವೆಂದು ನೆನಪಿಸಿದೆ. ಪಾದಚಾರಿ ಮಾರ್ಗ ಅತಿಕ್ರಮಣ ಆಗಬಾರದು. ಪಾದಚಾರಿಗಳು ಸಂಚರಿಸುವ ಮಾರ್ಗದಲ್ಲಿ ವಾಹನಗಳು ಬರಬಾರದು ಎಂದು ಎಚ್ಚರಿಸಿದೆ.
ರಸ್ತೆ ಅಂಚಿನಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದ್ದು ಜನತೆ ಜೀವ ಕೈಲಿಡಿದು ಸಂಚರಿಸಬೇಕಾಗಿದೆ. ಹೊಳಲ್ಕೆರೆ ರಸ್ತೆಯಲ್ಲಿ ಚರಂಡಿ ಮೇಲೆ ಚಪ್ಪಡಿ ಕಲ್ಲುಗಳ ಹಾಕಿ ಅದರ ಮೇಲೆ ಕಾಂಕ್ರಿಟ್ ಎಳೆದು ರಸ್ತೆ ಮಾಡಲಾಗಿದೆ. ರಸ್ತೆಗಳ ನಿರ್ಮಿಸುವಾಗ ಪಾದಚಾರಿಗಳಿಗೆ ಅಗತ್ಯವಾದ ಮೂಲ ಸೌಕರ್ಯದ ಕಡೆ ಗಮನ ಹರಿಸಲಾಗಿಲ್ಲ. ಮಳೆ ಬಂದರೆ ಇಡೀ ನೀರು ಗಾಂಧಿ ವೃತ್ತವ ಸುತ್ತುವರಿದು ಪ್ರವಾಹ ಮಾದರಿಗಳ ಸೃಷ್ಟಿಸುತ್ತದೆ. ರಸ್ತೆ ಬದಿ ಸಂಚರಿಸುವವರ ಮೈಮೇಲೆ ಕೊಳಚೆ ನೀರು ಸಿಂಪರಣೆಯಾಗುತ್ತದೆ. ಅಷ್ಟರ ಮಟ್ಟಿಗೆ ರಸ್ತೆಗಳ ನಿರ್ಮಿಸಿ ನಡೆದಾಡುವ ಹಕ್ಕನ್ನು ಕಸಿದುಕೊಳ್ಲಲಾಗಿದೆ.
ಪಾದಾಚಾರಿಗಳ ಹಕ್ಕು ಕಸಿದರೆ ಮೋಟಾರು ವಾಹನ ಕಾಯಿದೆ ಅಡಿಯಲ್ಲಿಯೂ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಸುಪ್ರಿಂ ಅಭಿಪ್ರಾಯಪಟ್ಟಿದೆ. ನಗರ ಸ್ಥಳೀಯ ಸಂಸ್ಥೆಗಳ ವಿರುದ್ಧ ನಾಗರಿಕರು ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಸ್ಪಷ್ಟವಾಗಿ ತಿಳಿಸಿದೆ.