ಗ್ರಾಮ ದೇವತೆ ಹೊನ್ನಾಲದಮ್ಮನ ಜಾತ್ರೆ ಸಂಪನ್ನ

KannadaprabhaNewsNetwork |  
Published : May 03, 2024, 01:06 AM IST
ಗ್ರಾಮ ದೇವತೆ ಹೊನ್ನಾಲದಮ್ಮ ದೇವಿ ಹಾಗೂ ವೀರಭದ್ರೇಶ್ವರ ಸ್ವಾಮಿ ಮತ್ತು ಅಮ್ಮಯ್ಯಜ್ಜಿ ದೇವಿ, ಧೂತರಾಯ ಸ್ವಾಮಿ, ಚಿಕ್ಕಮ್ಮ ದೇವಿಯವರ ದಿವ್ಯ ಜಾತ್ರಾ ಮಹೋತ್ಸವವು ಗುರುವಾರ ನೆರವೇರಿದ ದಿವ್ಯ ರಥೋತ್ಸವದೊಂದಿಗೆ ಸಂಪನ್ನಗೊಂಡಿತು. | Kannada Prabha

ಸಾರಾಂಶ

ಅರಸೀಕೆರೆಯ ಜಾಜೂರು ಗ್ರಾಮದಲ್ಲಿ 5 ದಿನಗಳ ಕಾಲ ಸತತವಾಗಿ ನಡೆದ ಗ್ರಾಮ ದೇವತೆ ಹೊನ್ನಾಲದಮ್ಮ ದೇವಿ ಹಾಗೂ ವೀರಭದ್ರೇಶ್ವರ ಸ್ವಾಮಿ, ಅಮ್ಮಯ್ಯಜ್ಜಿ ದೇವಿ, ಧೂತರಾಯ ಸ್ವಾಮಿ, ಚಿಕ್ಕಮ್ಮ ದೇವಿಯರ ಜಾತ್ರಾ ಮಹೋತ್ಸವ ಗುರುವಾರ ನೆರವೇರಿದ ರಥೋತ್ಸವದೊಂದಿಗೆ ಸಂಪನ್ನಗೊಂಡಿತು.

ವೀರಭದ್ರೇಶ್ವರ ಸ್ವಾಮಿ, ಅಮ್ಮಯ್ಯಜ್ಜಿ ದೇವಿ, ಧೂತರಾಯ ಸ್ವಾಮಿ, ಚಿಕ್ಕಮ್ಮ ದೇವಿಯರ ಹಬ್ಬ । 5 ದಿನ ನಡೆದ ಉತ್ಸವ

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರ ಹೊರವಲಯದ ಜಾಜೂರು ಗ್ರಾಮದಲ್ಲಿ 5 ದಿನಗಳ ಕಾಲ ಸತತವಾಗಿ ನಡೆದ ಗ್ರಾಮ ದೇವತೆ ಹೊನ್ನಾಲದಮ್ಮ ದೇವಿ ಹಾಗೂ ವೀರಭದ್ರೇಶ್ವರ ಸ್ವಾಮಿ, ಅಮ್ಮಯ್ಯಜ್ಜಿ ದೇವಿ, ಧೂತರಾಯ ಸ್ವಾಮಿ, ಚಿಕ್ಕಮ್ಮ ದೇವಿಯರ ಜಾತ್ರಾ ಮಹೋತ್ಸವ ಗುರುವಾರ ನೆರವೇರಿದ ರಥೋತ್ಸವದೊಂದಿಗೆ ಸಂಪನ್ನಗೊಂಡಿತು.

ಜಾಜೂರು ಸೇರಿದಂತೆ ಸುತ್ತಮುತ್ತಲಿನ ನಾಗತಿಹಳ್ಳಿ, ಹೆಂಜಗೊಂಡನಹಳ್ಳಿ, ಬೈರಗೊಂಡನಹಳ್ಳಿ, ಹೊಸಹಳ್ಳ, ಬೆಂಡೇಕೆರೆ, ಕಾಟೀಕೆರೆ, ಗೊಲ್ಲರಹಟ್ಟಿ, ಬಿ.ಜಿ.ತಾಂಡ್ಯ, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು.

ಗುರುವಾರ ಬೆಳಿಗ್ಗೆ ಗ್ರಾಮ ದೇವತೆಗಳಾದ ಹೊನ್ನಾಲದಮ್ಮ ದೇವಿ ಹಾಗೂ ಅಮ್ಮಯ್ಯಜ್ಜಿ ದೇವಿಯರನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ವೀರಭದ್ರೇಶ್ವರ ಸ್ವಾಮಿ, ಧೂತರಾಯ ಸ್ವಾಮಿ, ಹೊಸಪಟ್ಟಣ ಗ್ರಾಮದ ಧೂತರಾಯ ಸ್ವಾಮಿಯ ರಥಕ್ಕೆ ಪೂಜೆ ಸಲ್ಲಿಸಿ ರಥದ ಗಾಲಿಗಳಿಗೆ ತೆಂಗಿನ ಕಾಯಿಯ ಈಡುಗಾಯಿ ಸಮರ್ಪಿಸಿದ ನಂತರ ರಥೋತ್ಸವಕ್ಕೆ ಚಾಲನೆ ದೊರೆಯಿತು,

ನೆರೆದಿದ್ದ ಭಕ್ತ ಸಮೂಹವು ರಥೋತ್ಸವ ಆರಂಭವಾಗುತ್ತಿದ್ದಂತೆ ಗ್ರಾಮ ದೇವತೆ ಹೊನ್ನಾಲದಮ್ಮ ದೇವಿ ಹಾಗೂ ವೀರಭದ್ರೇಶ್ವರ ಸ್ವಾಮಿ ದೇವರ ನಾಮ ಸ್ಮರಣೆಯೊಂದಿಗೆ ತಮ್ಮ ಮನದ ಸಂಕಲ್ಪಗಳನ್ನು ಈಡೇರಿಸುವಂತೆ ರಥದ ಕಲಶಕ್ಕೆ ಬಾಳೆಹಣ್ಣು ಮತ್ತು ದವನವನ್ನು ಅರ್ಪಿಸಿ ಭಕ್ತಿ ಸಮರ್ಪಿಸಿದರು. ಕೆಲವು ಭಕ್ತರು ಬಾಳೆಹಣ್ಣಿನ ಮೇಲೆ ತಮ್ಮ ಕೋರಿಕೆಗಳು ಮತ್ತು ಹೆಸರುಗಳನ್ನು ಬರೆದು ರಥದ ಕಲಶಕ್ಕೆ ಅರ್ಪಿಸಿದ್ದು ವಿಶೇಷವಾಗಿತ್ತು.

ಬಿಸಿಲಿನ ತಾಪಕ್ಕೆ ದಣಿವರಿದ ಭಕ್ತರಿಗೆ ಕೆಲವು ಗ್ರಾಮಗಳ ಭಕ್ತರು ತಾವೇ ತಯಾರಿಸಿ ತಂದಿದ್ದ ತಂಪಾದ ಪಾನಕ ಮತ್ತು ಫಲಹಾರ ವಿತರಿಸಿದರು, ರಥೋತ್ಸವದ ನಿಮಿತ್ತ ಗ್ರಾಮದ ದೇವರಾದ ರಂಗನಾಥ ಸ್ವಾಮಿ, ಹೊನ್ನಾಲದಮ್ಮ ದೇವಿ, ಅಮ್ಮಯ್ಯಜ್ಜಿ ದೇವಿ, ಧೂತರಾಯ ಸ್ವಾಮಿ, ಚಿಕ್ಕಮ್ಮ ದೇವಿ, ಪ್ಲೇಗಿನಮ್ಮ ದೇವಿ, ಹುತ್ತದಮ್ಮ ದೇವಿ, ಗಂಗಮ್ಮ ದೇವಿ ದೇಗುಲಗಳ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು, ಗುರುವಾರ ಬೆಳಿಗ್ಗೆ ಸಿಡಿ ಉತ್ಸವ ನಡೆಯಿತು.

ವೀರಭದ್ರೇಶ್ವರ ಸ್ವಾಮಿ ಮತ್ತು ಹೊಸಪಟ್ಟಣದ ಧೂತರಾಯ ಸ್ವಾಮಿ ದೇವರ ಮಣೇವು ಉತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ನೆರವೇರಿತು, ಈ ಮಣೇವು ಉತ್ಸವ ಜಾತ್ರಾ ಮಹೋತ್ಸವದ ವಿಶೇಷವಾಗಿದೆ. ರಥೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಂಡ ಬಳಿಕ ಗ್ರಾಮ ದೇವರ ಉಯ್ಯಾಲೋತ್ಸವ ಮತ್ತು ಗಂಗಾ ಸ್ನಾನ ನೆರವೇರಿದ ಬಳಿಕ, ದೇವರ ಉತ್ಸವ ಮೂರ್ತಿಗಳು ಗ್ರಾಮದೊಳಿಗಿರುವ ದೇಗುಲಕ್ಕೆ ಬಂದು ಗದ್ದುಗೆಯಾದವು.

ಏ.28 ರಿಂದ ಮೇ 2 ರ ವರೆಗೆ ನಡೆದ 5 ದಿನಗಳ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಗುರುವಾರ ನೆರವೇರಿದ ರಥೋತ್ಸವದೊಂದಿಗೆ ಸಂಪನ್ನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿಲ್ಲಿಯಲ್ಲಿ ಡಿಕೆಶಿ ರಾಜ್ಯ ನೀರಾವರಿ ಸಭೆ
ಗ್ಯಾಸ್ ಇಲ್ಲದೇ ಬೆಳಗಾವಿಯ 60 + ಕೈಗಾರಿಕೆ ಬಂದ್‌ ಹಂತಕ್ಕೆ