ಶಿಲೆ ಸಿಕ್ಕ ಜಾಗದಲ್ಲೇ ರಾಮಮಂದಿರ ನಿರ್ಮಾಣ: ಜಿ.ಟಿ. ದೇವೇಗೌಡ

KannadaprabhaNewsNetwork |  
Published : Jan 21, 2024, 01:32 AM IST
3 | Kannada Prabha

ಸಾರಾಂಶ

ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಮೈಸೂರು ತಾಲೂಕು ಗುಜ್ಜೇಗೌಡನಪುರ ಸಮೀಪದ ಹಾರೋಹಳ್ಳಿ ಸರ್ವೆ 196 ಮತ್ತು 197 ರಲ್ಲಿ ಇರುವ 2.16 ಎಕರೆ ಜಮೀನಿನಲ್ಲಿ ದಲಿತ ಸಮುದಾಯಕ್ಕೆ ಸೇರಿದ ರಾಮದಾಸ್ ಅವರ ಜಮೀನಿನಲ್ಲಿ ಕೃಷ್ಣಶಿಲೆ ದೊರೆತಿದೆ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ ರಾಮಲಲ್ಲಾನ ವಿಗ್ರಹವು ಈ ಜಮೀನಿನಲ್ಲಿ ಸಿಕ್ಕಿರುವುದು ದೇಶದ ಗಮನ ಸೆಳೆದಿದೆ

- ನಾಳೆ ಹಾರೋಹಳ್ಳಿಯಲ್ಲಿ ಭೂಮಿಪೂಜೆ, ವಿಗ್ರಹ ಕೆತ್ತನೆಗೆ ಶಿಲ್ಪಿ ಅರುಣ್ ಯೋಗಿರಾಜ್ ಗೆ ಮನವಿಕನ್ನಡಪ್ರಭ ವಾರ್ತೆ ಮೈಸೂರು

ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ಬಾಲರಾಮ (ರಾಮಲಲ್ಲಾ) ವಿಗ್ರಹದ ಕೃಷ್ಣಶಿಲೆ ಸಿಕ್ಕಿರುವ ಮೈಸೂರಿನ ಹಾರೋಹಳ್ಳಿ ಜಮೀನಿನಲ್ಲಿ ರಾಮ ಮಂದಿರ ನಿರ್ಮಿಸಲು ನಿರ್ಧರಿಸಲಾಗಿದ್ದು, ಜ.22 ರಂದು ಭೂಮಿಪೂಜೆ ನೆರವೇರಿಸಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು.

ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆ ರಾಮಮಂದಿರ ಮಾದರಿಯಲ್ಲಿ ವಿಗ್ರಹವನ್ನು ಕೆತ್ತನೆ ಮಾಡಿಸಲು ನಿರ್ಧರಿಸಲಾಗಿದೆ. ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದಲೇ ವಿಗ್ರಹ ಕೆತ್ತನೆ ಮಾಡಿಸಲು ಮನವಿ ಮಾಡಲಾಗುವುದು ಎಂದರು.

ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಮೈಸೂರು ತಾಲೂಕು ಗುಜ್ಜೇಗೌಡನಪುರ ಸಮೀಪದ ಹಾರೋಹಳ್ಳಿ ಸರ್ವೆ 196 ಮತ್ತು 197 ರಲ್ಲಿ ಇರುವ 2.16 ಎಕರೆ ಜಮೀನಿನಲ್ಲಿ ದಲಿತ ಸಮುದಾಯಕ್ಕೆ ಸೇರಿದ ರಾಮದಾಸ್ ಅವರ ಜಮೀನಿನಲ್ಲಿ ಕೃಷ್ಣಶಿಲೆ ದೊರೆತಿದೆ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ ರಾಮಲಲ್ಲಾನ ವಿಗ್ರಹವು ಈ ಜಮೀನಿನಲ್ಲಿ ಸಿಕ್ಕಿರುವುದು ದೇಶದ ಗಮನ ಸೆಳೆದಿದೆ ಎಂದು ಅವರು ಹೇಳಿದರು.

ಹಾರೋಹಳ್ಳಿಯ ಒಬ್ಬ ದಲಿತ ರೈತನ ಜಮೀನಿನಲ್ಲಿ ದೊರೆತ ಕಲ್ಲನ್ನು ಪಡೆದು ಶಿಲ್ಪಿ ಅರುಣ್ ಯೋಗಿರಾಜ್ ಅವರು ಶಿಲೆಯನ್ನು ಕೆತ್ತಿದ್ದಾರೆ. ಅದೇ ರೀತಿ ಪೂಜಾ ಕಾರ್ಯಕ್ರಮಗಳಲ್ಲೂ ಕರ್ನಾಟಕದ ಅರ್ಚಕರೇ ಭಾಗವಹಿಸುತ್ತಿರುವುದರಿಂದ ರಾಜ್ಯಕ್ಕೆ ಹೆಮ್ಮೆ ತಂದಿದೆ ಎಂದರು.

ಜ.22 ರಂದು ಕಲ್ಲು ಸಿಕ್ಕಿದ ಭೂಮಿಯಲ್ಲಿ ಬೆಳಗ್ಗೆ 6 ರಿಂದ 8 ರವರೆಗೆ ಭೂಮಿ ಪೂಜೆ ನೆರವೇರಿಸುವ ಜೊತೆಗೆ ಧ್ಯಾನ, ಭಜನೆ ಕಾರ್ಯಕ್ರಮಗಳು ನಡೆಯಲಿವೆ. ಮುಂದಿನ ದಿನಗಳಲ್ಲಿ ಈ ಜಾಗದಲ್ಲಿ ಶ್ರೀರಾಮಮಂದಿರ ನಿರ್ಮಾಣ ಮಾಡುವ ಕಾರಣ ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದಲೇ ವಿಗ್ರಹ ಕೆತ್ತನೆ ಮಾಡಿಸಲಾಗುವುದು ಎಂದು ಅವರು ತಿಳಿಸಿದರು.

ಹಳ್ಳಿಯಲ್ಲಿ ರಾಮಮಂದಿರ ನಿರ್ಮಾಣ ಮಾಡಿ ಮೊದಲಿನಿಂದಲೂ ಪೂಜೆ ಮಾಡಿಕೊಂಡು ಬರಲಾಗುತ್ತಿದೆ. ಈ ಊರಿನಲ್ಲಿ ದೇಣಿಗೆ ಸಂಗ್ರಹಿಸಿ ನಿರ್ಮಾಣ ಮಾಡುತ್ತೇವೆ. ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸುತ್ತಿರುವ ಮೂರ್ತಿಯ ಶಿಲೆಯು ಈ ನೆಲದಲ್ಲಿ ದೊರೆತಿರುವುದರಿಂದ ಎಲ್ಲರ ಸೌಭಾಗ್ಯವಾಗಿದೆ. ಹೀಗಾಗಿಯೇ, ಈ ಸ್ಥಳವನ್ನು ಪ್ರಮುಖ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಅವರು ವಿವರಿಸಿದರು.

ಶಿಲ್ಪಿ ಅರುಣ್ ಯೋಗಿರಾಜ್ ಅವರು ಮೈಸೂರಿಗೆ ವಾಪಸ್ ಬಂದ ಮೇಲೆ ಅವರ ಸಮ್ಮುಖದಲ್ಲೇ ಭೂ ಮಾಲೀಕರು, ಕಲ್ಲು ತೆಗೆದವರಿಗೂ ಸನ್ಮಾನ ಮಾಡಲಾಗುವುದು. ಅವರೊಂದಿಗೆ ಉತ್ತರಪ್ರದೇಶದ ಅಯೋಧ್ಯೆ ವೀಕ್ಷಣೆಗೂ ಕಳುಹಿಸಿಕೊಡಲಾಗುವುದು. ವಿಗ್ರಹ ಕೆತ್ತನೆಗೂ ಅವರಲ್ಲಿ ಕೋರಲಾಗುವುದು ಎಂದರು.

ಜಮೀನು ಮಾಲೀಕ ರಾಮದಾಸ್, ಕಲ್ಲು ಹೊರ ತೆಗೆದ ಶ್ರೀನಿವಾಸ್ ಮೊದಲಾದವರು ಇದ್ದರು.

---

ಕೋಟ್...

ಹಾರೋಹಳ್ಳಿಯ ಶಿಲೆಯಲ್ಲಿ ರಾಮಲಲ್ಲಾ ವಿಗ್ರಹ ಕೆತ್ತನೆ ಮಾಡಿದ್ದನ್ನು ಆಯ್ಕೆ ಮಾಡಿದ ಬಳಿಕ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ನಾನು ಕೂಡ ಕ್ಷೇತ್ರದ ಜನರ ಪರವಾಗಿ ಕೃತಜ್ಞತೆ ಹೇಳುತ್ತೇನೆ. ಶ್ರೀರಾಮನ ಭಕ್ತನಾಗಿರುವ ಮೋದಿ ಅವರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ಚಾಮುಂಡೇಶ್ವರಿದೇವಿಯ ಅಶೀರ್ವಾದ ಪಡೆದಿದ್ದರು. ದೇವರ ಆಶೀರ್ವಾದದಿಂದಲೇ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಮನ ಮೂರ್ತಿಯ ಶಿಲೆ ದೊರೆತಿರುವುದು ವಿಶೇಷವಾಗಿದೆ

- ಜಿ.ಟಿ. ದೇವೇಗೌಡ, ಶಾಸಕ

----

ಬಾಕ್ಸ್...

ನಮ್ಮ ಜಮೀನಿನಲ್ಲಿ ಕಲ್ಲು ಸಿಕ್ಕಿದ್ದು ಪೂರ್ವಜನ್ಮದ ಪುಣ್ಯ- ರಾಮದಾಸ್

ನಮ್ಮದು ಸಣ್ಣ ರೈತ ಕುಟುಂಬ. ನಮ್ಮ ತಾತನ ಕಾಲದಿಂದಲೂ ಉಳುಮೆ ಮಾಡಿಕೊಂಡು ಬಂದಿದ್ದೇವು. ಜಮೀನಿನಲ್ಲಿ ಸ್ವಲ್ಪ ಮಟ್ಟಿಗೆ ಬಂಡೆಯಂತೆ ಕಲ್ಲು ಬೆಳೆದಿದ್ದರಿಂದ ಕಲ್ಲು ತೆಗೆದು ಸಮತಟ್ಟು ಮಾಡಿಕೊಡುವಂತೆ ಹೇಳಿದ್ದೇವು. ನಂತರ ಇಲ್ಲಿ ಕಲ್ಲು ಜಾಸ್ತಿ ದೊರೆತು ಮೂರ್ತಿಯ ಕಲ್ಲು ದೊರೆತಿರುವುದು ನಮ್ಮ ಪೂರ್ವಜನ್ಮದ ಪುಣ್ಯ ಎಂದು ಭೂ ಮಾಲೀಕ ರಾಮದಾಸ್ ತಿಳಿಸಿದರು.

ನಮ್ಮ ಜಮೀನಿನಲ್ಲಿ ಈ ಮಟ್ಟದ ಶಿಲೆ ದೊರೆಯುತ್ತದೆ ಎನ್ನುವ ನಿರೀಕ್ಷೆ ಮಾಡಿರಲಿಲ್ಲ. ಮೇಲ್ನೋಟಕ್ಕೆ ನೋಡಿದಾಗ ಬಂಡೆ ಕಲ್ಲು ಇತ್ತು. ಆದರೆ, ಒಳಗೆ ನೋಡಿದರೆ ಇಡೀ ಜಮೀನು ಕಲ್ಲು ಆಗಿರುವುದರಿಂದ ಸಂತಸವಾಯಿತು ಎಂದು ಅವರು ಹೇಳಿದರು.

ದೇವಸ್ಥಾನ ನಿರ್ಮಾಣಕ್ಕೆ ಎಷ್ಟು ಜಮೀನು ಬೇಕು ಅಷ್ಟನ್ನು ಬಳಸಿಕೊಳ್ಳಬಹುದು. ನಮ್ಮದೇನೂ ಅಭ್ಯಂತರವಿಲ್ಲ. ನಮ್ಮ ಜಮೀನಿನ ಕಲ್ಲು ಮೂರ್ತಿಯಾಗಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ದೊರೆಯುತ್ತಿರುವುದೇ ದೊಡ್ಡ ಹೆಮ್ಮೆ. ಇದಕ್ಕಾಗಿ ನಾವು ಸದಾ ಅಭಾರಿಯಾಗಿದ್ದೇವೆ ಎಂದರು.

---

ಬಾಕ್ಸ್...

ಶಿಲೆಗಾಗಿ 3 ಕಲ್ಲನ್ನು ತೆಗೆದುಕೊಂಡು ಹೋದರು- ಶ್ರೀನಿವಾಸ್

ಜಮೀನಿನಲ್ಲಿ ಬೆಳೆದಿರುವ ಕಲ್ಲನ್ನು ಹೊರ ತೆಗೆದು ಉಳುಮೆ ಮಾಡಲು ಸಮತಟ್ಟು ಮಾಡಿಕೊಡುವಂತೆ ಹೇಳಿದ್ದರಿಂದ ಕೆಲಸ ಶುರು ಮಾಡಿದ್ದೇವು. ಜೆಸಿಬಿಯಲ್ಲಿ ಕಲ್ಲು ಎಳೆಯಲು ಸಾಧ್ಯವಾಗದಂತಾಯಿತು. ದೊಡ್ಡ ಕಲ್ಲನ್ನು ಹೊರ ತೆಗೆದು ಮಾರ್ಕಿಂಗ್ ಮಾಡಿ ಡಾಟ್, ಐರನ್ ಇಲ್ಲದಂತೆ ಹೊರಗೆ ತೆಗೆಯಲಾಯಿತು. ನಂತರ ಮೂರು ಭಾಗ ಮಾಡಿ ಅದನ್ನು ಒಂದು ಕಡೆ ಇರಿಸಲಾಗಿತ್ತು. ಈ ಕಲ್ಲು 10 ಅಡಿ ಉದ್ದ ಆಗಿದ್ದರಿಂದ 2- 3 ಬಾರಿ ಪರಿಶೀಲನೆ ನಡೆಸಿ ಕ್ರಾಕ್ ಆಗದಂತೆ ಒಂದು ಕಡೆ ಇರಿಸಿದ್ದೇವು ಎಂದು ಕಲ್ಲು ಕೆಲಸ ಮಾಡುವ ಗುಜ್ಜೇಗೌಡನಪುರದ ಶ್ರೀನಿವಾಸ್ ತಿಳಿಸಿದರು.

ಇದೇ ವೇಳೆ ಮಾನಯ್ಯ ಬಡೀಗಾರ್, ಸುರೇಂದ್ರ ಶಿಲ್ಪಿ ವಿಶ್ವಕರ್ಮ, ಗೋಪಾಲ್ ಅವರು ರಾಮಲಲ್ಲಾನ ವಿಗ್ರಹಕ್ಕೆ ಚೆನ್ನಾಗಿರುವ ಕಲ್ಲು ಹುಡುಕಿಕೊಡುವಂತೆ ಹೇಳಿದ್ದರು. ನಾನು ಬನ್ನಿ 3 ಕಲ್ಲನ್ನು ಎತ್ತಿಟ್ಟಿದ್ದ ವಿಚಾರವನ್ನು ತಿಳಿಸಿದೆ. ನಂತರ ಬಂದು ನೋಡಿದಾಗ ಅವರು ಒಪ್ಪಿಕೊಂಡರು. ನಂತರ ಒಂದು ರಾಮಲಲ್ಲಾ, ಒಂದು ಸೀತೆಗೆ ಅಂತ ಹೇಳಿ ಮೂರು ಕಲ್ಲನ್ನು ತೆಗೆದುಕೊಂಡು ಹೋದರು ಎಂದು ಅವರು ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿಲ್ಲಿಯಲ್ಲಿ ಡಿಕೆಶಿ ರಾಜ್ಯ ನೀರಾವರಿ ಸಭೆ
ಗ್ಯಾಸ್ ಇಲ್ಲದೇ ಬೆಳಗಾವಿಯ 60 + ಕೈಗಾರಿಕೆ ಬಂದ್‌ ಹಂತಕ್ಕೆ