ಜನಾರ್ದನ ರೆಡ್ಡಿ ಒಬ್ಬರೇ ಗೆದ್ದು ಸಾಧನೆ ಮಾಡಿದ್ದಾದರೂ ಏನು: ಸೋಮಶೇಖರ ರೆಡ್ಡಿ

KannadaprabhaNewsNetwork |  
Published : Jan 31, 2024, 02:16 AM IST
ಸೋಮಶೇಖರ ರೆಡ್ಡಿ | Kannada Prabha

ಸಾರಾಂಶ

ಜನಾರ್ದನ ರೆಡ್ಡಿ ಪಕ್ಷ ಕಟ್ಟಿದ್ದರಿಂದ ನಾವು ಚುನಾವಣೆಯಲ್ಲಿ ಸೋತಿದ್ದೇವೆ ಎಂಬುದು ಸುಳ್ಳು. ನಾವು ಸೋಲುಂಡಿದ್ದು ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಿಂದಾಗಿಯೇ ಹೊರತು, ಬೇರೆ ಯಾವ ಕಾರಣಗಳಿಲ್ಲ ಎಂದು ಮಾಜಿ ಶಾಸಕ ಸೋಮಶೇಖರ ರೆಡ್ಡಿ ತಿಳಿಸಿದರು.

ಬಳ್ಳಾರಿ: ಜನಾರ್ದನ ರೆಡ್ಡಿ ಒಬ್ಬರೇ ಗೆದ್ದು ಸಾಧನೆ ಮಾಡಿದ್ದಾದರೂ ಏನು ಎಂದು ಜನಾರ್ದನ ರೆಡ್ಡಿ ಸಹೋದರ, ಮಾಜಿ ಬಿಜೆಪಿ ಶಾಸಕ ಜಿ. ಸೋಮಶೇಖರ ರೆಡ್ಡಿ ಪ್ರಶ್ನಿಸಿದ್ದಾರೆ.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ಮಂತ್ರಿಯಾಗಿ ಸದನದಲ್ಲಿ ಮುಂದೆ ಕೂಡಬೇಕಾದ ಜನಾರ್ದನ ರೆಡ್ಡಿ ತಾನೊಬ್ಬನೇ ಹಿಂದೆ ಕೂಡುವಂತಾಯಿತು. ಜನಾರ್ದನ ರೆಡ್ಡಿ ಹೇಳುವಂತೆ ತಾನೇ ಮಾಡಿದ ಶಾಸಕರನ್ನೇ ತಾನೇ ಸೋಲಿಸಿದ್ದಾನೆ. ಹೀಗಾಗಿಯೇ ಸದನದಲ್ಲಿ ಹಿಂದೆ ಕೂಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಒಬ್ಬ ಸಣ್ಣ ಹುಡುಗ (ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ) ಸದನದಲ್ಲಿ ಏನೆಲ್ಲಾ ಮಾತನಾಡುವಂತಾಯಿತು ಎಂದು ಜನಾರ್ದನ ರೆಡ್ಡಿ ವಿರುದ್ಧ ಸೋಮಶೇಖರ ರೆಡ್ಡಿ ತೀಕ್ಷ್ಣವಾಗಿ ಹರಿಹಾಯ್ದರು.

ಜನಾರ್ದನ ರೆಡ್ಡಿ ಪಕ್ಷ ಕಟ್ಟಿದ್ದರಿಂದ ನಾವು ಚುನಾವಣೆಯಲ್ಲಿ ಸೋತಿದ್ದೇವೆ ಎಂಬುದು ಸುಳ್ಳು. ನಾವು ಸೋಲುಂಡಿದ್ದು ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಿಂದಾಗಿಯೇ ಹೊರತು, ಬೇರೆ ಯಾವ ಕಾರಣಗಳಿಲ್ಲ. ಜನಾರ್ದನ ರೆಡ್ಡಿ ಇಲ್ಲದೆ ಬಳ್ಳಾರಿಯಲ್ಲಿ ಬಿಜೆಪಿ ಇಲ್ಲ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಬಿಜೆಪಿಗೆ ಬರುವುದಾದರೆ ಸ್ವಾಗತ ಮಾಡುವೆ. ಚುನಾವಣೆಯಲ್ಲಿ ರಣತಂತ್ರ ಹೆಣೆಯುವುದರಲ್ಲಿ ಜನಾರ್ದನ ರೆಡ್ಡಿ ನಂಬರ್ ಒನ್. ಆದರೆ, ಜನರ ಜತೆ ಇರುವುದರಲ್ಲಿ ಶ್ರೀರಾಮುಲು ನಂಬರ್ ಒನ್. ಇಬ್ಬರು ಕಾಂಬಿನೇಷನ್ ಆದ್ರೆ ಲೋಕಸಭೆಯಲ್ಲಿ ಬಿಜೆಪಿ ಗೆಲ್ಲುವುದು ಖಚಿತ. ಶ್ರೀರಾಮುಲು ಗೆದ್ದರೆ ಉನ್ನತ ಸ್ಥಾನ ಪಡೆಯುತ್ತಾರೆ. ಯಾವುದೋ ಕೆಟ್ಟ ಗಳಿಗೆಯಲ್ಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿದ್ದಾರೆ. ಬಿಜೆಪಿಗೆ ಬಂದರೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸಹಕಾರಿಯಾಗುತ್ತದೆ ಎಂದು ಸೋಮಶೇಖರ ರೆಡ್ಡಿ ಪ್ರತಿಕ್ರಿಯಿಸಿದರು. ಶ್ರೀರಾಮುಲು ದೆಹಲಿಗೆ ದೌಡು: ರೆಡ್ಡಿ ಪಕ್ಷ ಸೇರ್ಪಡೆ ಕುರಿತು ಚರ್ಚೆ?

ಜನಾರ್ದನ ರೆಡ್ಡಿ ಬಿಜೆಪಿಗೆ ಸೇರ್ಪಡೆಯಾಗಲು ಉತ್ಸುಕರಾಗಿದ್ದಾರೆ ಎಂಬಿತ್ಯಾದಿ ಚರ್ಚೆಗಳು ಮುನ್ನೆಲೆಗೆ ಬಂದಿರುವ ನಡುವೆ ಮಾಜಿ ಸಚಿವ ಬಿ. ಶ್ರೀರಾಮುಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿರುವುದು ನಾನಾ ಚರ್ಚೆಗಳಿಗೆ ಆಸ್ಪದ ಮಾಡಿಕೊಟ್ಟಿದೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಹಾಗೂ ಜನಾರ್ದನ ರೆಡ್ಡಿಯನ್ನು ಪಕ್ಷಕ್ಕೆ ಬರ ಮಾಡಿಕೊಂಡರೆ ಆಗುವ ಲಾಭ- ನಷ್ಟಗಳ ಕುರಿತು ಚರ್ಚಿಸಲು ಅಮಿತ್‌ ಶಾ ಅವರು ಶ್ರೀರಾಮುಲುರನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಜಿ ಸಿಎಂ ಕುಮಾರಸ್ವಾಮಿ ಮೂಲಕ ಬಿಜೆಪಿ ಸೇರ್ಪಡೆಗೊಳ್ಳಲು ಜನಾರ್ದನ ರೆಡ್ಡಿ ಪ್ರಯತ್ನ ನಡೆಸಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆಡೆ ಮಾಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ವರ್ಷದಲ್ಲಿ ಭಾರತದ ಅಭಿವೃದ್ಧಿ : ಶ್ರೀ ಶ್ರೀ
ಮಳೆ ನಿಂತು 10 ದಿನ ಕಳೆದ್ರೂ ಬಿದ್ದ ಮರಗಳ ಸಂಗ್ರಹಕ್ಕೆ ಜಿಬಿಎ ಪರದಾಟ