ಸಾಮಾಜಿಕ ಜವಾಬ್ದಾರಿಯನ್ನು ಪತ್ರಕರ್ತರು ಮರೆಯಬಾರದು: ಜಯರಾಮ ಹೆಗಡೆ

KannadaprabhaNewsNetwork |  
Published : Jan 30, 2026, 02:15 AM IST
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶಿರಸಿಯಲ್ಲಿ ಹಿರಿಯ ಪತ್ರಕರ್ತ ಜಯರಾಮ ಹೆಗಡೆ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಹಿರಿಯ ಪತ್ರಕರ್ತ ಜಯರಾಮ ಹೆಗಡೆ ಅವರ ಮನೆಯಂಗಳದಲ್ಲಿ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶಿವಾನಂದ ತಗಡೂರು ಸನ್ಮಾನಿಸಿದರು.

ಕಾರವಾರ: ಪತ್ರಕರ್ತರ ಮೇಲೆ ಜನರ ನಿರೀಕ್ಷೆ ಹೆಚ್ಚಿದ್ದು, ಆ ದಿಸೆಯಲ್ಲಿ ಪತ್ರಕರ್ತರು ಹೆಜ್ಜೆ ಇಡಬೇಕು. ಹಾಗೆಯೇ ಸಾಮಾಜಿಕ ಜವಾಬ್ದಾರಿಯನ್ನು ಎಂದೂ ಮರೆಯಬಾರದು ಎಂದು ಹಿರಿಯ ಪತ್ರಕರ್ತ ಜಯರಾಮ ಹೆಗಡೆ ಹೇಳಿದರು.

ಅವರು ಈಚೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮನೆಯಂಗಳದಲ್ಲಿ ನೀಡುವ ಕೆಯುಡಬ್ಲ್ಯೂಜೆ ಗೌರವ ಸ್ವೀಕರಿಸಿ ಮಾತನಾಡುತ್ತಾ, ಇಳಿವಯಸ್ಸಿನಲ್ಲಿರುವ ನನಗೆ ಶಿರಸಿಯ ನಮ್ಮ ಮನೆಗೆ ಬಂದು ಕಾರ್ಯನಿರತ ಪತ್ರಕರ್ತರ ಸಂಘವು ಗೌರವ ನೀಡಿರುವುದು ಹೃದಯ ತುಂಬಿ ಬಂದಿದೆ ಎಂದರು.

ಪತ್ರಿಕೋದ್ಯಮಕ್ಕೆ ತನ್ನದೇ ಆದ ಇತಿಹಾಸವಿದೆ. ಎಂಥ ಕಾಲಘಟ್ಟದಲ್ಲಿಯೂ ಪತ್ರಿಕೋದ್ಯಮ ತನ್ನ ಮೊನಚು ಕಳೆದುಕೊಂಡಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿಯೂ ಮುದ್ರಣ ಮಾಧ್ಯಮ ಪತ್ರಿಕೋದ್ಯಮ ತನ್ನ ಘನತೆ, ಗೌರವ ಉಳಿಸಿಕೊಂಡಿದೆ. ಇದು ನೂರಾರು ವರ್ಷ ಹೀಗೆಯೇ ಇರಲಿದೆ ಎಂದರು.

ಹಾಸನದಲ್ಲಿ ಪತ್ರಿಕೋದ್ಯಮ ಪ್ರಾರಂಭ ಮಾಡಿದ ದಿನದಿಂದ ಈ ತನಕ ನಾನು ವೃತ್ತಿಬದ್ಧವಾಗಿ ಮಾಡಿಕೊಂಡು ಬಂದಿರುವ ಕೆಲಸ ಮತ್ತು ಸೇವೆ ನನಗೆ ತೃಪ್ತಿ ತಂದಿದೆ. ಶಿರಸಿಯಲ್ಲಿ ಜನಮಾಧ್ಯಮ ಪತ್ರಿಕೆ ಪ್ರಾರಂಭ ಮಾಡಿದ್ದು, ಆ ಮೂಲಕ ಈ ಭಾಗದ ಜನರ ಜೀವನಾಡಿಯಾಗಿದ್ದು ಖುಷಿ ತಂದಿದೆ ಎಂದು ಹೇಳಿದರು.

25 ವರ್ಷಗಳ ಹಿಂದೆ ಬೇಡ್ತಿ ಮತ್ತು ವರದಾ ನದಿ ಜೋಡಣೆಯನ್ನು ವಿರೋಧಿಸಿ ಜನಮಾಧ್ಯಮ ಪತ್ರಿಕೆಯಲ್ಲಿ ನಾನು ಸಂಪಾದಕೀಯ ಬರೆದಿದ್ದು, ಈಗಲೂ ಪ್ರಸ್ತುತವಾಗಿದೆ. ನದಿ ಜೋಡಣೆ ವಿರೋಧಿಸಿ ಚಳವಳಿ ನಡೆಯುತ್ತಿದೆ. ಈ ಬಗ್ಗೆ ಪತ್ರಿಕೆಯು ತನ್ನ ಜವಾಬ್ದಾರಿಯನ್ನು ನಿರ್ವಹಣೆ ಮಾಡಿದ್ದರ ಬಗ್ಗೆ ತುಂಬಾ ಹೆಮ್ಮೆಯಿದೆ ಎಂದು ಹೇಳಿದರು.

ಯುವ ಜನಾಂಗ ಪತ್ರಿಕೋದ್ಯಮದ ಬಗ್ಗೆ ಬದ್ಧತೆ ಇಟ್ಟುಕೊಂಡು ಕೆಲಸ ಮಾಡಲು ಮುಂದೆ ಬರಬೇಕು. ಆಗ ಮಾತ್ರವೇ ಬದಲಾವಣೆ ಸಾಧ್ಯ. ಐಶಾರಾಮಿ ಜೀವನ ನಡೆಸಬೇಕು ಎಂದವರು ಪತ್ರಿಕೋದ್ಯಮಕ್ಕೆ ಬರಬಾರದು ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಎಂಬತ್ತರ ದಶಕದಲ್ಲಿ ಹಾಸನದಲ್ಲಿ ಜನತಾ ಮಾಧ್ಯಮ ಮೂಲಕ ಪತ್ರಿಕೋದ್ಯಮ ಪ್ರವೇಶ ಮಾಡಿದ ಜಯರಾಮ ಹೆಗಡೆ, ಶಿರಸಿಯಲ್ಲಿ ತಮ್ಮದೇ ಸಂಪಾದಕತ್ವದಲ್ಲಿ ಜನಮಾಧ್ಯಮ ಪತ್ರಿಕೆಯ ಮೂಲಕ ನಡೆಸಿದ ಪತ್ರಿಕೋದ್ಯಮ ಜನಪರ ಪತ್ರಿಕೋದ್ಯಮಕ್ಕೆ ಕನ್ನಡಿಯಾಗಿದೆ ಎಂದರು.

ಹಿರಿಯ ಪತ್ರಕರ್ತರ ಸೇವೆಯನ್ನು ಗುರುತಿಸಿ ಅವರ ಮನೆಯಂಗಳಕ್ಕೆ ತೆರಳಿ ಅವರ ಕುಟುಂಬದ ಸಮ್ಮುಖದಲ್ಲಿ ಗೌರವಿಸುವ ಕೆಲಸವನ್ನು ಕೆಯುಡಬ್ಲ್ಯೂಜೆ ನಿರಂತರವಾಗಿ ಮಾಡಿಕೊಂಡು ಬಂದಿದೆ. ಈಗ ಶಿರಸಿಗೆ ಬಂದು ಜಯರಾಮ ಹೆಗಡೆ ಅವರ ಮನೆಯಂಗಳದಲ್ಲಿ ಗೌರವಿಸುತ್ತಿರುವುದು ರಾಜ್ಯ ಸಂಘಕ್ಕೂ ಅಭಿಮಾನದ ಸಂಗತಿಯಾಗಿದೆ ಎಂದರು.

84 ವರ್ಷದ ತುಂಬು ಜೀವನ ಸಾಗಿಸಿರುವ ಜಯರಾಮ ಹೆಗಡೆ ಅವರು ಪತ್ರಕರ್ತರಾಗಿ, ಸಾಹಿತಿಯಾಗಿ ಮತ್ತು ಸಂಘಟಕರಾಗಿ ಮಾಡಿರುವ ಸೇವೆ ಅನನ್ಯ. ಅವರು ಶತಾಯುಷಿಗಳಾಗಿ ಬಾಳಲಿ ಎಂದು ತಗಡೂರು ಶುಭ ಹಾರೈಸಿದರು.

ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಅಡಿ, ಜಯರಾಮ ಹೆಗಡೆ ಅವರ ಪುತ್ರಿ ಸಿಂಧು, ಅಳಿಯ ಚಂದ್ರಶೇಖರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗೆ ಕಾಲಿಟ್ಟಿರೋ ಹುಷಾರ್‌, ಕಚ್ಲಿಕ್ಕೆ ಕಾಯ್ತಿವೆ ಬೀದಿ ನಾಯಿ
ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆಯತ್ನಿಸಿದ ಮೂವರ ಬಂಧನ