ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಗೃಹಿಣಿಯನ್ನು ಯುವಕ ಬರ್ಬರ ಹತ್ಯೆ ಮಾಡಿರುವ ಘಟನೆ ತಾಲೂಕಿನ ಕರೋಠಿ ಗ್ರಾಮದಲ್ಲಿ ನಡೆದಿದೆ.ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಪ್ರಿಯಕರನಿಂದಲೇ ಕೊಲೆಯಾದ ಮಹಿಳೆ. ಕರೋಠಿ ಗ್ರಾಮದ ಪುನೀತ್(28) ಕೊಲೆ ಮಾಡಿದ ಆರೋಪಿ.
ಪ್ರೀತಿ ಎಂಬ ಗೃಹಣಿ ಇಬ್ಬರು ಮಕ್ಕಳು ಮತ್ತು ಗಂಡನೊಂದಿಗೆ ಹಾಸನದ ಹೊಸಕೊಪ್ಪಲು ಗ್ರಾಮದಲ್ಲಿ ವಾಸವಿದ್ದರು. ಕಳೆದ ಗುರುವಾರವಷ್ಟೆ ಫೇಸ್ಬುಕ್ ಮೂಲಕ ಪ್ರೀತಿ ಹಾಗೂ ಪುನೀತ್ ಪರಿಚಯವಾಗಿದೆ. ಇಬ್ಬರು ಲವ್ವಿ-ಡವ್ವಿ ಚಾಟಿಂಗ್ ನಡೆಸಿದ್ದಾರೆ. ನಂತರ ಆಫೇರ್ ನೊಂದಿಗೆ ಕಳೆದ ಮೂರು ದಿನಗಳ ಹಿಂದೆ ಕೆ.ಆರ್.ಪೇಟೆಗೆ ಬಂದಿದ್ದ ಪ್ರೀತಿಯನ್ನು ಪುನೀತ್ ಮೈಸೂರು, ಕೆಆರ್ ಎಸ್ ಸೇರಿದಂತೆ ಹಲವೆಡೆ ಸುತ್ತಾಟ ಮಾಡಿಸಿದ್ದಾನೆ.ಭಾನುವಾರ ಕೆಆರ್ ಪೇಟೆಯ ಕತ್ತರಘಟ್ಟ ಅರಣ್ಯದಲ್ಲಿ ರೊಮ್ಯಾನ್ಸ್ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಜಗಳದ ಬಳಿಕ ಪ್ರೀತಿಯನ್ನು ಹತ್ಯೆ ಮಾಡಿದ ಪುನೀತ್ ಯಾರಿಗೂ ತಿಳಿಯದಂತೆ ತನ್ನ ಜಮೀನಿನಲ್ಲೇ ಹೂತಿದ್ದನು. ಪತ್ನಿ ಪ್ರೀತಿ ನಾಪತ್ತೆಯಾಗಿರುವುದಾಗಿ ಹಾಸನದಲ್ಲಿ ಗಂಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರೀತಿ ಗಂಡನ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಪ್ರೀತಿಯ ಮೊಬೈಲ್ ನೆಟ್ವರ್ಕ್ ನಿಂದ ಹಂತಕನ ಪತ್ತೆಯಾಗಿದೆ.
ನಂತರ ಪೊಲೀಸರು ಪುನೀತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹೂತಿದ್ದ ಶವ ಹೊರಕ್ಕೆ ತೆಗೆದು ಆದಿಚುಂಚನಗಿರಿ ಆಸ್ಪತ್ರೆ ಶವಾಗಾರಕ್ಕೆ ದೇಹ ರವಾನಿಸಲಾಯಿತು. ವೈದ್ಯರು ಪ್ರೀತಿಯ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ಮತ್ತು ಪುನೀತ್ ಇಬ್ಬರ ಪರಿಚಯವಾಗಿದೆ. ಭಾನುವಾರವೇ ಇಬ್ಬರು ಒಂದಾಗಿ ಮೈಸೂರಿನಲ್ಲಿ ಸುತ್ತಾಟದ ನಂತರ ಲಾಡ್ಜ್ ನಲ್ಲಿ ಇದ್ದು, ಬಳಿಕ ಕೆ.ಆರ್.ಪೇಟೆ ಕತ್ತರಘಟ್ಟ ಗ್ರಾಮದ ಅರಣ್ಯ ಪ್ರದೇಶದ ಬಳಿ ಇಬ್ಬರೂ ರೊಮ್ಯಾನ್ಸ್ ವೇಳೆ ಸೆಕ್ಸ್ ಮಾಡುವಂತೆ ಪ್ರೀತಿ ಒತ್ತಾಯಿಸಿದಾಗ ಪುನೀತ್ ಕೆನ್ನೆಗೆ ಬಾರಿಸಿದ್ದು, ಕುಸಿದು ಬಿದ್ದ ಪ್ರೀತಿಯನ್ನು ತನ್ನದೆ ಜಮೀನಿನಲ್ಲಿ ಹೂತಿರುವುದು ತನಿಖೆ ವೇಳೆ ತಿಳಿದು ಬಂದಿದೆ.
ಮಲ್ಲಿಕಾರ್ಜುನ ಬಾಲದಂಡಿ, ಎಸ್ಪಿ ಮಂಡ್ಯ.