-ಷರತ್ತುಗಳ ಉಲ್ಲಂಘಿಸಿದ ಆರೋಪ: ಜಿಲ್ಲಾಡಳಿತದ ನೋಟಿಸ್ಗೆ ನೀಡದ ಉತ್ತರ ಹಿನ್ನೆಲೆ
-ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನಾಲ್ಕು ಕಂಪನಿಗಳಿಗೆ ಮತ್ತೊಂದು ನೋಟಿಸ್
-ವಿಷಗಾಳಿ, ತ್ಯಾಜ್ಯ ಕಾರ್ಖಾನೆಗಳ ವಿರುದ್ಧ ಕ್ರಮಕ್ಕೆ ಮುಂದಾದ ಆಡಳಿತ: ಮತ್ತೆ ನಾಲ್ಕಕ್ಕೆ ಬೀಗಮುದ್ರೆ ಸಾಧ್ಯತೆ..?
- ಕನ್ನಡಪ್ರಭ ಸರಣಿ ವರದಿ ಭಾಗ : 74ಆನಂದ.ಎಂ.ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿ
ವಿಷಗಾಳಿ ಆತಂಕ ಹಾಗೂ ತ್ಯಾಜ್ಯ ದುರ್ನಾತದಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರ ಆರೋಗ್ಯ ಹಾಗೂ ಪರಿಸರ ಮೇಲೆ ವ್ಯತಿರಿಕ್ತ ಪರಿಣಾಗಳುಂಟಾಗುತ್ತಿರುವ ಆರೋಪದಡಿ, ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ 27 ಕೆಮಿಕಲ್ ಕಂಪನಿಗಳಿಗೆ ಈ ಮೊದಲು ಕಾರಣ ಕೇಳಿ ನೋಟೀಸ್ ನೀಡಿದ್ದ ಜಿಲ್ಲಾಡಳಿತ, ಇದೀಗ ನೋಟಿಸ್ಗೆ ಪ್ರತಿಕ್ರಿಯಿಸದ ನಾಲ್ಕು ಕಾರ್ಖಾನೆಗಳಿಗೆ ಮತ್ತೊಂದು ನೋಟಿಸ್ ಜಾರಿ ಮಾಡುವ ಸಿದ್ಧತೆಯಲ್ಲಿದೆ. ಸರ್ಕಾರದ ಷರತ್ತುಗಳ ಉಲ್ಲಂಘನೆ ಆರೋಪದಡಿ, ಈಗಾಗಲೇ ಒಂದು ಕಾರ್ಖಾನೆಗೆ ಬೀಗಮುದ್ರೆ ಜಡಿದಿರುವ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ಮುಂಬರುವ ದಿನಗಳಲ್ಲಿ ಮತ್ತೇ ಮೂರ್ನಾಲ್ಕು ಕಂಪನಿಗಳಿಗೆ ಬೀಗಮುದ್ರೆ ಜಡಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
"ಕನ್ನಡಪ್ರಭ "ಕ್ಕೆ ಲಭ್ಯ ಮೂಲಗಳ ಪ್ರಕಾರ, ಈಗಾಗಲೇ ನೋಟಿಸ್ಗೆ ಪ್ರತಿಕ್ರಿಯಿಸಿರುವ ಕೆಲವು ಕಂಪನಿಗಳ ಉತ್ತರ ಪರಿಶೀಲಿಸುತ್ತಿರುವ ಜಿಲ್ಲಾಡಳಿತ, ಈ ಉತ್ತರಗಳೂ ಸಮಂಜಸ ಅನ್ನಿಸದಿದ್ದಲ್ಲಿ ಮತ್ತೊಂದು ನೋಟಿಸ್ ಜಾರಿ ಮಾಡಲಿದೆ. ಮೇ 27 ರಂದು, 27 ಕಂಪನಿಗಳಿಗೆ ಕಳುಹಿಸಿದ ಕಾರಣ ಕೇಳಿ- ಪರಿಷ್ಕೃತ ನೋಟಿಸ್ಗೆ ಈವರೆಗೆ ಉತ್ತರಿಸದ ನಾಲ್ಕು ಕಂಪನಿಗಳಿಗೆ ನೋಟಿಸ್ ಜಾರಿ ಸಿದ್ಧತೆ ನಡೆಸಿದೆ. ಅಂತಹ ಕಂಪನಿಗಳು ಸರ್ಕಾರದ ಷರತ್ತುಗಳ ಉಲ್ಲಂಘಿಸುವ ಮತ್ತೆ ಮೂರ್ನಾಲ್ಕು ಕೆಮಿಕಲ್ ಕಂಪನಿಗಳಿಗೆ ಸೀಝ್ ಮಾಡಬಹುದು ಅನ್ನಲಾಗುತ್ತಿದೆ.
-
ಕೋಟ್-1 : ವಿಷಕಾರಿ ಕೆಮಿಕಲ್ ಕಂಪನಿಗಳ ವಿರುದ್ಧ ಇಲ್ಲಿನ ಜನರು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ದೂರು ಸಲ್ಲಿಸಿದ್ದಾರೆ. ಅಧಿಕಾರಿಗಳು ವಿಚಾರಣೆಗೆ ಎಂದು ಇಲ್ಲಿ ಬಂದಾಗ ಮಾತ್ರ ಇಲ್ಲಿನ ಕಂಪನಿಗಳು ಕಣ್ತಪ್ಪಿಸಿ, ಎಲ್ಲವೂ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಾಹಿಸುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ತರಹದ ನಕಾರಾತ್ಮಕ ವರದಿ ನೀಡದಂತೆ ಸರ್ಕಾರದ ಭಾಗವಾಗಿರುವ ಕೆಲವು ರಾಜಕೀಯ ಪ್ರಮುಖರು ಸ್ಥಳೀಯ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.
- ಮಾಳಪ್ಪ ದದ್ದಲ್, ಶೆಟ್ಟಿಹಳ್ಳಿ. (20ವೈಡಿಆರ್12)
-
ಕೋಟ್-2: ಈ ಭಾಗದ ರಾಸಾಯನಿಕ ವಿಷಕಾರಿ ಪರಿಸ್ಥಿತಿ, ಜನ-ಜಲ-ಜೀವನದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ತಡೆಯಲು ಸರ್ಕಾರದ ಮೇಲ್ಮಟ್ಟದಲ್ಲಿ ವರದಿ ನೀಡಲು ಸ್ಥಳೀಯ ಅಧಿಕಾರಿಗಳು ಮುಂದಾಗಿದ್ದಾರಾದರೂ, ರಾಜಕೀಯ ಪ್ರಭಾವಿಗಳ ಪರೋಕ್ಷ ಸೂಚನೆಗಳ ಮೇರೆಗೆ ಕ್ರಮ ಕೈಗೊಳ್ಳದೆ ಕೈಕಟ್ಟಿಕೊಂಡು, ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ.
- ಶ್ರೀಕಾಂತ ಪೂಜಾರಿ, ಬಾಡಿಯಾಳ. (20ವೈಡಿಆರ್13)
----
20ವೈಡಿಆರ್11 : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ ನೋಟ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.