ಕನ್ನಡಪ್ರಭ ವಾರ್ತೆ ಕಲಬುರಗಿಈ ಬಾರಿ ಉತ್ತಮ ಮಳೆ ಬಂದು ತೊಗರಿ ಬೆಳೆಯು ಸಹ ಚೆನ್ನಾಗಿತ್ತು. ಆದರೆ ಯಾವುದೋ ವಿಚಿತ್ರ ರೋಗ ಬಂದಿದ್ದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ವಿಚಿತ್ರ ರೋಗದ ಪತ್ತೆಗಾಗಿ ವಿಜ್ಞಾನಿಗಳ ತಂಡವು ಭೇಟಿ ನೀಡಲಿದ್ದು, ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರ ಕೊಡಬೇಕು ಎಂದು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಆಳಂದ್ ಶಾಸಕ ಬಿ.ಆರ್. ಪಾಟೀಲ್ ಅವರು ಒತ್ತಾಯಿಸಿದ್ದಾರೆ.
ಆಳಂದ್ ತಾಲೂಕಿನಲ್ಲಿ 2 ಲಕ್ಷ, 40 ಸಾವಿರ ಎಕರೆ ತೊಗರಿ ಬಿತ್ತನೆಯಾಗಿದೆ. ಹಲವೆಡೆ ಭೇಟಿ ನೀಡಿ, ತೊಗರಿ ವೀಕ್ಷಿಸಿದ್ದೇನೆ. ಬಳಿಕ ಈ ತೊಗರಿಯ ನಾಶ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಇದು ನೆಟೆ ರೋಗವೂ ಅಲ್ಲ ಎಂದು ಅವರು ಹೇಳಿದ್ದಾರೆ. ಅದಕ್ಕಾಗಿ ಈ ವಿಚಿತ್ರ ರೋಗದ ಬಗ್ಗೆ ಶೋಧನೆಗೆ ಕೇಂದ್ರದಿಂದ ವಿಶೇಷ ವಿಜ್ಞಾನಿಗಳ ತಂಡ ಕಳುಹಿಸಬೇಕೆಂದು ಕೋರಿರುವೆ ಎಂದರು.
ಜಿಲ್ಲೆಯಲ್ಲಿ 15 ಲಕ್ಷ ಎಕರೆ ತೊಗರಿ ಬಿತ್ತನೆಯಾಗಿದ್ದು, ಅದರಲ್ಲಿ ತೊಗರಿಗೆ 1 ಲಕ್ಷ 70 ಸಾವಿರ ರೈತರು ತೊಗರಿಗೆ ವಿಮೆ ಮಾಡಿಸಿದ್ದಾರೆ. ಹಲವು ರೈತರು ವಿಮೆ ಸಹ ಮಾಡಿಕೊಂಡಿಲ್ಲ, ನೀರಾವರಿ, ಒಣಭೂಮಿಯಲ್ಲಿ ತೊಗರಿ ಒಣಗುತ್ತಿರುವುದರಿಂದ ರೈತರು ಭಾರೀ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಬೆಳಗಾವಿಯ ಅಧಿವೇಶನಕ್ಕಿಂತ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಗುರುಲಿಂಗಪ್ಪ ಜಂಗಮಶೆಟ್ಟಿ, ಬಸವರಾಜ್ ಉಪ್ಪಿನ್, ಶರಣಬಸಪ್ಪ ಪಾಟೀಲ್, ಸತೀಶ್ ಪಡಶೆಟ್ಟಿ, ನಾಗನಾಥ್ ಉಪಸ್ಥಿತರಿದ್ದರು.