ಹಿರಿಯ ಸಾಹಿತಿ ದಿವಂಗತ ಕಲೀಂ ಬಾಷಾ ಅವರು ತಮ್ಮ ಬದುಕಿನಲ್ಲಿ ಮಾನವೀಯ ಮನೋಭಾವನೆ ಜೊತೆಗೆ ನೈತಿಕತೆಯ ಮೈಗೂಡಿಸಿಕೊಂಡು ಸಮಾಜಕ್ಕೆ ಅವರದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ, ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
- ಹಿರಿಯ ಸಾಹಿತಿ ದಿವಂಗತ ಜೆ.ಕಲೀಂ ಬಾಷಾ ಅವರ ನೆನಪು ನಮನ-ಕವಿಗೋಷ್ಠಿ
- - -
ಕನ್ನಡಪ್ರಭ ವಾರ್ತೆ ಹರಿಹರ
ಹಿರಿಯ ಸಾಹಿತಿ ದಿವಂಗತ ಕಲೀಂ ಬಾಷಾ ಅವರು ತಮ್ಮ ಬದುಕಿನಲ್ಲಿ ಮಾನವೀಯ ಮನೋಭಾವನೆ ಜೊತೆಗೆ ನೈತಿಕತೆಯ ಮೈಗೂಡಿಸಿಕೊಂಡು ಸಮಾಜಕ್ಕೆ ಅವರದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ, ಪುರುಷೋತ್ತಮ ಬಿಳಿಮಲೆ ಹೇಳಿದರು.
ನಗರದ ಕಾಟ್ವೆ ಭವನದಲ್ಲಿ ಭಾನುವಾರ ಪರಸ್ಪರ ಬಳಗ ಹಾಗೂ ಜೆ.ಕಲೀಂ ಬಾಷಾ ಅಭಿಮಾನಿಗಳ ಬಳಗ ವತಿಯಿಂದ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ದಿವಂಗತ ಜೆ.ಕಲೀಂ ಬಾಷಾ ಅವರ ನೆನಪು ನಮನ ಹಾಗೂ ಕವಿಗೋಷ್ಠಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
1980ರ ದಶಕದಲ್ಲಿ ಬಂಡಾಯ ಚಳವಳಿ ಸಂದರ್ಭದಲ್ಲಿ ಶಿವಮೊಗ್ಗ, ದಾವಣಗೆರೆ, ಹರಪನಹಳ್ಳಿಗೆ ಆಗಮಿಸಬೇಕಾದ ಸಂದರ್ಭ ಬಂದಾಗ ನನಗೆ ಮೊದಲು ನೆನಪಾಗುವುದು ಬಂಡಾಯ ಹೋರಾಟಗಾರ, ಸ್ನೇಹಜೀವಿ ಕಲೀಂ ಬಾಷಾ. ನನ್ನ ಸ್ವಾಗತಕ್ಕಾಗಿ ಹರಿಹರದ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ವ್ಯಕ್ತಿ ಅವರು. ಸುಮಾರು 43 ವರ್ಷ ನನ್ನ ಮತ್ತು ಅವರ ಸ್ನೇಹ ವಿಷ್ಮರಣೀಯ ಎಂದರು.
ನೈತಿಕತೆಯನ್ನೇ ಕಳೆದುಕೊಂಡಿರುವ ಇಂದಿನ ಸಮಾಜದಲ್ಲಿ. ಮಾನವೀಯ ಮನೋಭಾವನೆ ಮೂಲಕ ಅವರು ನೈತಿಕತೆ ಮೈಗೂಡಿಸಿಕೊಂಡಿದ್ದರು. ಅನೇಕ ಕವನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ಗೋಕಾಕ್ ಚಳವಳಿ ಹೋರಾಟಗಾರರ ಸನ್ಮಾನಿಸುವ ಸಂದರ್ಭ ಕಲೀಂ ಬಾಷಾ ಅವರಿಗೂ ಮುಖ್ಯಮಂತ್ರಿಗಳಿಂದ ಸನ್ಮಾನಿಸುವ ಭಾಗ್ಯ ದೊರೆತಿದ್ದನ್ನು ನೆನಪಿಸಿಕೊಂಡರು.
ಹಿರಿಯ ಸಾಹಿತಿ ಸಿ.ವಿ. ಪಾಟೀಲ್ ಅವರು ಕಲೀಂ ಬಾಷಾ ಅವರ ವ್ಯಕ್ತಿತ್ವ ಪರಿಚಯ ಕುರಿತು ಮಾತನಾಡಿ, ಕಲೀಂ ಬಾಷಾ ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. ಕವನಗಳ ರಚಿಸುವುದು, ಪುಸ್ತಕಗಳನ್ನು ಬರೆವುದರ ಜೊತೆಗೆ ಬಂಡಾಯ ಹೋರಾಟಗಾರರಾಗಿದ್ದರು. ಕನ್ನಡ ಶಿಕ್ಷಕರಾಗಿ ಕನ್ನಡದ ಮೇಲೆ ಅಪಾರ ಅಭಿಮಾನವನ್ನು ಹೊಂದಿದ್ದರು. ಕನ್ನಡದಲ್ಲಿ ಕವನಗಳನ್ನು ರಚಿಸುವುದನ್ನು ಕರಗತ ಮಾಡಿಕೊಂಡಿದ್ದರು. ಶಹೀನ ಮತ್ತು ಇತರ ಕವಿತೆಗಳು ಎಂಬ ಮೊದಲ ಪುಸ್ತಕವನ್ನು ಪ್ರಕಟಿಸಿದರು. 2001ರಲ್ಲಿ ಮನೆಯಲ್ಲಿ ಬೆಳದಿಂಗಳು ಎಂಬ ಮಕ್ಕಳ ಸಾಹಿತ್ಯದ ಕುರಿತು ಬರೆದ ಕವನ ಸಂಕಲನವು ಹೆಚ್ಚು ಗೌರವವನ್ನು ತಂದು ಕೊಟ್ಟಿತು ಎಂದು ಹೇಳಿದರು.
ಕಲೀಂ ಬಾಷಾ ಅವರ ಪತ್ನಿ ಶಾಹೀನಾ ಕೌಸರ್ ಮಾತನಾಡಿ, ಪೋಲಿಸ್ನ ಮಗಳಾಗಿದ್ದ ನನ್ನನ್ನು ಮದುವೆಯಾದ ನಂತರ ನನಗೆ ಶಿಕ್ಷಣ ಕೊಡಿಸುವ ಮೂಲಕ ಶಿಕ್ಷಕಿಯಾಗಿ ಸೇವೆ ಸಲ್ಲಿಸಲು ಅವರ ಪ್ರೇರಣೆಯಿಂದ ಸಾಧ್ಯವಾಗಿತ್ತು. ಕವಿ, ಸಾಹಿತಿ, ಶಿಕ್ಷಕ, ಮಕ್ಕಳಿಗೆ ಉತ್ತಮ ತಂದೆಯಾಗಿ ಅವರು ಅನೇಕ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅವರ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗಿದ್ದಾರೆ ಎಂದು ಸ್ಮರಿಸಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಮುಖಂಡ ಎಚ್ ಕೆ. ಕೊಟ್ರಪ್ಪ, ಎಡಪಂಥೀಯ ಧೋರಣೆಯ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದ ನೇರ ನಿಷ್ಠುರ ಮಾತುಗಾರ ಮತ್ತು ಬರಹಗಾರರಾಗಿದ್ದ ದಿವಂಗತ ಜೆ.ಕಲೀಂ ಬಾಷ ವರು ಸಮಾನತೆಯ ಭಾವನೆಯನ್ನು ಮೈಗೂಡಿಸಿಕೊಂಡಿದ್ದರು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ, ವಿಶ್ರಾಂತ ಪ್ರಾಚಾರ್ಯ ಡಾ.ಎಸ್.ಎಚ್. ಪ್ಯಾಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಪ್ರತಿನಿಧಿ ಡಾ. ಎ.ಬಿ. ರಾಮಚಂದ್ರಪ್ಪ, ದಾವಣಗೆರೆ ಉರ್ದು ಕವಿಗಳಾದ ದಾವುದ್ ಮೋಸಿನ್, ಗೌಸ್ ಪೀರ್, ತಾಲೂಕು ಕಸಾಪಾ ಅಧ್ಯಕ್ಷ ಡಿ.ಎ. ಮಂಜುನಾಥಯ್ಯ ಮಾತನಾಡಿದರು.
ವೇದಿಕೆಯಲ್ಲಿ ಜೆ.ಕಲೀಂ ಬಾಷ ಪುತ್ರಿ, ಪತ್ರಕರ್ತೆ ನಾಜಿಯಾ ಕೌಸರ್, ಹಿರಿಯ ಸಾಹಿತಿ ಎಚ್.ಎ. ಭಿಕ್ಷಾವರ್ತಿಮಠ. ಜಿಲ್ಲಾ ಕಸಾಪಾ ಮಾಜಿ ಅಧ್ಯಕ್ಷ ಎಚ್.ಎಸ್. ಹೂಗಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ರಿಯಾಜ್ ಅಹ್ಮದ್ ಎ., ರುದ್ರಾಕ್ಷಿಬಾಯಿ, ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಸುಧಾಕರ್, ಪರಸ್ಪರ ಬಳಗದ ಎಚ್.ನಿಜುಗುಣ, ಪತ್ರಕರ್ತ ಶೇಖರಗೌಡ ಕೆ.ಬಿ. ರಾಜಶೇಖರ, ಎಕ್ಕೆಗುಂದಿ ಎಚ್.ಬಿ. ರುದ್ರೇಗೌಡ, ಶಿಕ್ಷಕರಾದ ಬಿ.ಬಿ. ರೇವಣ ನಾಯ್ಕ, ಈಶಪ್ಪ ಬೂದಿಹಾಳ, ವಿ.ಬಿ. ಕೊಟ್ರೇಶಪ್ಪ, ರೇವಣಸಿದ್ದಪ್ಪ ಅಂಗಡಿ, ಪತ್ರಕರ್ತ ಜಿಗಳಿ ಪ್ರಕಾಶ್, ವೈ.ಕೃಷ್ಣಮೂರ್ತಿ ಇತರರಿದ್ದರು.
- - -
-02HRR01 & 01A:
ಸಮಾರಂಭವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ, ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.