ಹಳಿಯಾಳ: ಕಾಳಿ ನದಿ ನೀರಾವರಿ ಯೋಜನೆ ಅಂತಿಮ ಹಂತಕ್ಕೆ ಬಂದಿದೆ. ಯೋಜನೆಗೆ ಕ್ಯಾಬಿನೆಟ್ ಒಪ್ಪಿಗೆ ದೊರಕಿದೆ ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.
ಕಾಳಿನದಿ ಮತ್ತು ಜೋಯಿಡಾದಲ್ಲಿ ಹರಿಯುವ ಪಾಂಡ್ರಿ ನದಿ ನಮ್ಮ ಕ್ಷೇತ್ರಕ್ಕೆ ವರದಾನವಾಗಿದೆ. ಬೇಸಿಗೆಯಲ್ಲಿ ಬೇರೆ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾದರೆ, ಕಾಳಿ ಹಾಗೂ ಪಾಂಡ್ರಿ ನದಿಯಲ್ಲಿ ಹರಿವು ಕಡಿಮೆಯಾಗುವುದಿಲ್ಲ. ಕಾಳಿ ನದಿಯಿಂದ ಹಳಿಯಾಳ ತಾಲೂಕಿನಲ್ಲಿ ನೀರಾವರಿ ಯೋಜನೆಗೆ ನೀರು ದೊರೆಯಲಿದ್ದು, ಬಹುಗ್ರಾಮಗಳಿಗೂ ಕುಡಿಯುವ ಜೀವಜಲ ಲಭ್ಯವಾಗಲಿದೆ. ಹಳಿಯಾಳ ಮತ್ತು ದಾಂಡೇಲಿ ನಗರಗಳಿಗೆ ನಿರಂತರ ನೀರು ಯೋಜನೆಯಡಿ ಕಾಳಿನದಿ ನೀರು ತಲುಪಲಿದೆ. ಇನ್ನೂ ಪಾಂಡ್ರಿ ನದಿಯ ಮೂಲಕ ಜೋಯಿಡಾ ತಾಲೂಕಿನ ಬಹುತೇಕ ಗ್ರಾಮಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ ಎಂದರು.
ಕೆರೆಗಳ ನವೀಕರಣ: ಕಾಳಿನದಿ ನೀರಾವರಿ ಯೋಜನೆಯ ಸಿದ್ಧತೆಗಾಗಿ ಹಳಿಯಾಳ ತಾಲೂಕಿನ ಕೆರೆಗಳ ನವೀಕರಣಕ್ಕಾಗಿ ಸಣ್ಣ ನೀರಾವರಿ ಇಲಾಖೆಯಿಂದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ನೀರಾವರಿ ಯೋಜನೆಯನ್ನು ತಾಂತ್ರಿಕ ಪರಿಶೀಲನಾ ಕಾರ್ಯ ಹಾಗೂ ಟೆಸ್ಟಿಂಗ್ ಕಾರ್ಯ ಮುಗಿದ ಆನಂತರ ಹಂತ ಹಂತವಾಗಿ ಆರಂಭಿಸಲಾಗುವುದು ಎಂದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಸಹ ಹಂತ ಹಂತವಾಗಿ ಪ್ರತಿ ಗ್ರಾಮಗಳಿಗೆ ನೀರು ಪೂರೈಕೆ ಆರಂಭಿಸುವ ಮೂಲಕ ಎಲ್ಲ 113 ಗ್ರಾಮಗಳಿಗೆ ನೀರು ಪೂರೈಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ರವಿ ತೋರಣಗಟ್ಟಿ, ವಿ.ಆರ್.ಡಿ. ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಇದ್ದರು.