ಕನಕ ಯುವಕ ಸಂಘ ಹಮ್ಮಿಕೊಂಡಿದ್ದ ಜಯಂತ್ಯುತ್ಸವ
ಕನ್ನಡಪ್ರಭ ವಾರ್ತೆ ಚಳ್ಳಕೆರೆಸಮಾಜದಲ್ಲಿ ಆಳವಾಗಿ ಬೇರೂರಿದ್ದ ಜಾತೀಯತೆಯ ವಿರುದ್ಧ ಕೀರ್ತನೆಯ ಮೂಲಕ ಜಾಗೃತಿ ಮೂಡಿಸಿದ ಮಹಾನ್ ಸಂತ ಭಕ್ತ ಕನಕದಾಸರು. ಅವರ ಅನೇಕ ಕೀರ್ತನೆಗಳು ಸಮಾಜದಲ್ಲಿ ಪರಿವರ್ತನೆಯ ಗಾಳಿಬೀಸಲು ಕಾರಣವಾದವು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಟಿ. ತಿಪ್ಪೇಸ್ವಾಮಿ ತಿಳಿಸಿದರು.
ಅವರು, ಭಾನುವಾರ ಪಿ. ಮಹದೇವಪುರ ಗ್ರಾಮದಲ್ಲಿ ಕನಕ ಯುವಕ ಸಂಘ ಹಮ್ಮಿಕೊಂಡಿದ್ದ ಕನಕ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಾಸಕ ಟಿ.ರಘುಮೂರ್ತಿ ಪರವಾಗಿ ಕಾರ್ಯಕ್ರಮ ಉದ್ಘಾಟಿಸಿದ ತಿಪ್ಪೇಸ್ವಾಮಿಯವರು ಕನಕದಾಸರ ಆದರ್ಶಗಳು ಎಲ್ಲರಿಗೂ ಸ್ಫೂರ್ತಿಯಾಗಿವೆ ಎಂದರು.ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘ ಅಧ್ಯಕ್ಷ ಆರ್.ಮಲ್ಲೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಾದ್ಯಂತ ಕುರುಬ ಸಮಾಜದ ಸಂಘಟನೆಗಾಗಿ ಪ್ರವಾಸ ನಡೆಸಲಾಗುವುದು. ಇತ್ತೀಚಿನ ದಿನಗಳಲ್ಲಿ ಕನಕ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ನಮ್ಮ ಸಮುದಾಯದ ಬಲಗೊಳ್ಳುತ್ತಿದೆ. ಆದರೆ, ಗ್ರಾಮೀಣ ಪ್ರದೇಶದ ಸಮಾಜದ ಬಂಧುಗಳು ಉತ್ಸಾಹದಿಂದ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ಬಾಬು ಮಾತನಾಡಿ, ಸಂಘಟನೆ ಎಂದರೆ ಕೇವಲ ಪುರುಷರಷ್ಟೇ ಸೇರುವುದಲ್ಲ. ನಮ್ಮ ಸಮಾಜದಲ್ಲಿ ಸಾಕಷ್ಟು ಮಹಿಳೆಯರು ಇದ್ದಾರೆ, ವಿದ್ಯಾವಂತರಿದ್ದಾರೆ. ಅವರೂ ಸಹ ಸಂಘಟನೆಯ ನೇತೃತ್ವ ವಹಿಸಬೇಕು. ಮಹಿಳೆಯರು ಮುನ್ನುಗ್ಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಂಘಟನೆಗೆ ಹೆಚ್ಚು ಬಲಬರುತ್ತದೆ ಎಂದರು.ಕಾರ್ಯಕ್ರಮದಲ್ಲಿ ಪ್ರೊ. ಎಂ.ಶಿವಲಿಂಗಪ್ಪ, ಪರಶುರಾಮೇಗೌಡ, ತ್ಯಾಗರಾಜ, ಎಸ್.ಸುಧೀರ್, ಸಿ.ವೀರಾನಾಯಕ, ಡಾ.ಶಿವಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷ ಓಬಳೇಶ್ ಮುಂತಾದವರು ಪಾಲ್ಗೊಂಡಿದ್ದರು.
- - -೧೦ಸಿಎಲ್ಕೆ೨
ಚಳ್ಳಕೆರೆ ತಾಲೂಕಿನ ಪಿ.ಮಹದೇವಪುರ ಗ್ರಾಮದಲ್ಲಿ ಕನಕಯುವಕ ಸಂಘ ಹಮ್ಮಿಕೊಂಡಿದ್ದ ಕನಕ ಜಯಂತೋತ್ಸವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಟಿ.ತಿಪ್ಪೇಸ್ವಾಮಿ ಮಾತನಾಡಿದರು.