ಕೊಪ್ಪಳ: ಕನಕಗಿರಿ ಉತ್ಸವದ ಅಂಗವಾಗಿ ಕನಕಗಿರಿಯ ಕಲ್ಮಠ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹೊಸ ಬಿಲ್ಡಿಂಗ್ ಆವರಣದಲ್ಲಿ ಬುಧವಾರ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾದಾವಳಿ ಜನಮನಸೂರೆಗೊಂಡಿತು.
ಪುರುಷರ ಕುಸ್ತಿ ಸ್ಪರ್ಧೆ ಫಲಿತಾಂಶ:74 ಕೆಜಿ ಪುರುಷ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ದಾವಣಗೆರೆಯ ಯೋಗೇಶ "ಕನಕಗಿರಿ ಕುಮಾರ " ಪ್ರಶಸ್ತಿ ಪಡೆದರೆ, ಬಾಗಲಕೋಟೆಯ ಅಲ್ತಾಫ್ ಕರ್ಜಗಿ ದ್ವಿತೀಯ ಸ್ಥಾನ ಪಡೆದರು. ಅದೇ ರೀತಿ 61 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಹಳಿಯಾಳದ ರೊಹನ ದೊಮ್ಮನಿ "ಕನಕಗಿರಿ ಕಿಶೋರ್ " ಪ್ರಶಸ್ತಿ ಪಡೆದರೆ, ಮಾಳಪ್ಪ ಹಾತರಕಿ ದ್ವಿತೀಯ ಸ್ಥಾನ ಪಡೆದರು. ಪುರುಷ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಒಟ್ಟು 80 ಕುಸ್ತಿಪಟುಗಳು ಭಾಗವಹಿಸಿದ್ದರು.ಮಹಿಳಾ ಕುಸ್ತಿ ಸ್ಪರ್ಧೆ ಫಲಿತಾಂಶ:65 ಕೆಜಿ ಮೇಲ್ಪಟ್ಟ ಮಹಿಳಾ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಹಳಿಯಾಳದ ಶಾಲಿನಿ ಸಿದ್ದಿ "ಕನಕಗಿರಿ ಮಹಿಳಾ ಕೇಸರಿ " ಪ್ರಶಸ್ತಿ ಪಡೆದರೆ, ಹಳಿಯಾಳದ ಪ್ರಿನ್ಸಿಟಾ ಸಿದ್ದಿ ದ್ವಿತೀಯ ಸ್ಥಾನ ಪಡೆದರು. 55 ಕೆಜಿ ಮಹಿಳಾ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಅಣ್ಣಿಗೇರಿಯ ಶ್ವೇತಾ "ಕನಕಗಿರಿ ಕಿಶೋರಿ " ಪ್ರಶಸ್ತಿ ಪಡೆದರೆ, ಹಳಿಯಾಳದ ಸವಿತಾ ಸಿದ್ದಿ ದ್ವಿತೀಯ ಸ್ಥಾನ ಪಡೆದರು.ಮಹಿಳಾ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಒಟ್ಟು 58 ಮಹಿಳಾ ಕುಸ್ತಿಪಟುಗಳು ಭಾಗವಹಿಸಿದ್ದರು.
ಅಂತಿಮ ಕುಸ್ತಿ ಸ್ಪರ್ಧೆ ವೇಳೆ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ, ಉತ್ಸವದ ಕ್ರೀಡಾ ಸಮಿತಿ ಅಧ್ಯಕ್ಷರು ಆಗಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡ್ರ, ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರಡಿ, ತಾಪಂ ಇಒ ಚಂದ್ರಶೇಖರ ಕಂದಕೂರ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಹಸ್ರಾರು ಸಂಖ್ಯೆಯ ಜನರು ಉಪಸ್ಥಿತರಿದ್ದರು.ಕ್ರೀಡಾ ಇಲಾಖೆ ಎ.ಎನ್.ಯತಿರಾಜು, ತಿಪ್ಪಣ್ಣ ಹಾಗೂ ಕುಸ್ತಿ ತರಬೇತುದಾರರಾದ ಶಿವಾನಂದ ಆರ್., ತುಕಾರಾಂಗೌಡ, ಕಾಟೇಶ್ ನ್ಯಾಮಗೌಡ, ಸತ್ಯಪ್ಪ ಬಿಳಿಕುದರಿ, ವಿನಾಯಕ ಯಂಕಂಚಿ ಮತ್ತಿತರರು ಕುಸ್ತಿ ಪಂದ್ಯವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.