ಭಕ್ತಿಯಿಂದ ಸಮಾನತೆ ಸಾರಿದ ದಾರ್ಶನಿಕ ಕನಕರು: ಶಾಸಕ ಎಸ್.ಎನ್.ಚನ್ನಬಸಪ್ಪ

KannadaprabhaNewsNetwork |  
Published : Nov 09, 2025, 01:45 AM IST
ಪೊಟೊ: 08ಎಸ್‌ಎಂಜಿಕೆಪಿ01ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವಮಾನವ, ಸಂತ ಹಾಗೂ ಶ್ರೇಷ್ಠಕವಿ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಕನಕದಾಸರು ಪ್ರಪಂಚ ಕಂಡ ಶ್ರೇಷ್ಠ ದಾರ್ಶನಿಕ. ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವರು. ಭಕ್ತಿಯ ಮೂಲಕ ಸಮಾನತೆ ಸಾರಿದವರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಸ್ಮರಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕನಕದಾಸರು ಪ್ರಪಂಚ ಕಂಡ ಶ್ರೇಷ್ಠ ದಾರ್ಶನಿಕ. ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವರು. ಭಕ್ತಿಯ ಮೂಲಕ ಸಮಾನತೆ ಸಾರಿದವರು ಎಂದು

ಶಾಸಕ ಎಸ್.ಎನ್.ಚನ್ನಬಸಪ್ಪ ಸ್ಮರಿಸಿದರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕುರುಬರ ಸಂಘ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವಮಾನವ, ಸಂತ ಹಾಗೂ ಶ್ರೇಷ್ಠಕವಿ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಕ್ತಿಯ ಸಾಕಾರಮೂರ್ತಿಯಾದ ಕನಕರು ಉಡುಪಿ ಶ್ರೀ ಕೃಷ್ಣರನ್ನು ಒಲಿಸಿಕೊಂಡ ಬಗೆಯನ್ನು ಸ್ಮರಿಸುವ ನಮ್ಮ ಸಮಾಜ, ಕನಕನ ಕಿಂಡಿ ಮೂಲಕ ಶ್ರೀ ಕೃಷ್ಣನ ದರ್ಶನ ಮಾಡಿದರೆ ಹೆಚ್ಚು ಪುಣ್ಯ ಲಭಿಸುತ್ತದೆ ಎಂದು ನಂಬಿಕೆ ಇದೆ ಎಂದರು.

316 ಕೀರ್ತನೆಗಳನ್ನು ಸಂಗ್ರಹಿಸಿ ಪುಸ್ತಕ ಮಾಡಿ ತಲುಪಿಸುವ ಕೆಲಸ ಆಗಬೇಕು. ತಾವೂ ಸಹ ಈ ಕಾರ್ಯಕ್ಕೆ ಸಹಕರಿಸುವುದಾಗಿ ತಿಳಿಸಿದ ಅವರು ಮುಂದಿನ ವರ್ಷದ ಜಯಂತಿಯಲ್ಲಿ ಎಲ್ಲರಿಗೂ ಈ ಪುಸ್ತಕ ಸಿಗುವಂತಾಗಬೇಕು ಎಂದು ಮನವಿ ಮಾಡಿದರು.

ನಮ್ಮ ಸಂಸ್ಕೃತಿ ಮತ್ತು ದಾಸ ಪರಂಪರೆ ಮುಂದುವರಿಯಬೇಕು. ಆಗ ಮಾತ್ರ ನಮ್ಮ ದೇಶ ಸುಭಿಕ್ಷವಾಗಿರುತ್ತದೆ. ಮನುಕುಲಕ್ಕೆ ಬೇಕಾದ ನೆಲೆಗಟ್ಟನ್ನು ಅವರು ಹಾಕಿಕೊಟ್ಟಿದ್ದು ಅದನ್ನುಉಳಿಸಿಕೊಂಡು ಹೋಗುವ ಕೆಲಸವನ್ನು ನಾವೆಲ್ಲ ಮಾಡಬೇಕು ಎಂದರು.

ಹೆಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಕೆ.ಎನ್.ರೇವಣ್ಣ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕನಕದಾಸ ಎಂದರೆ ಮಹಾನ್ ಕವಿ, ಸಂತ, ಕಲಿ, ಕೀರ್ತನಕಾರ, ಭಕ್ತ ಹಲವಾರು ಪ್ರತಿಭೆ ಒಳಗೊಂಡ ಮಹಾನ್ ಪುರುಷ. ಕನಕ ಕೇವಲ ಕುರುಬ ಜಾತಿಗೆ ಸೀಮಿತ ಅಲ್ಲ. ಅವರು ಭಾರತವೆಂಬ ಪುಣ್ಯಭೂಮಿಗೆ ಸೇರಿದ ಅಂಬೇಡ್ಕರ್, ಬುದ್ದ, ಬಸವನಂತಹ ವ್ಯಕ್ತಿ. ಅವರು ಸಮಾಜದ ಓರೆಕೋರೆ, ಅಂಕುಡೊಂಕು, ತಾರತಮ್ಯಗಳನ್ನು ಕೇವಲ ತಮ್ಮ ಕೀರ್ತನೆಗಳು ಮಾತ್ರವಲ್ಲ ಭಕ್ತಿಯ ಮೂಲಕ ಹೋಗಲಾಡಿಸಲು ಹೋರಾಡಿದರು.

ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಆರ್ ಪ್ರಸನ್ನಕುಮಾರ್ ಮಾತನಾಡಿ, ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬುದು ಮುಖ್ಯವಾಗಬೇಕು. ಕನಕರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು ಕುರುಬರ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ರು. ೫೦ ಲಕ್ಷ ನೀಡಲು ಒಪ್ಪಿದ್ದು ಅಭಿನಂದನೆ ತಿಳಿಸುತ್ತೇನೆಂದರು.

ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಹಾಗೂ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ. ಮತ್ತು ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ. ಮಾತನಾಡಿದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಶಿವಮೊಗ್ಗ ತಹಸೀಲ್ದಾರ್ ವಿ ರಾಜೀವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಸಮಾಜದ ಮುಖಂಡರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ