ಚನ್ನಪಟ್ಟಣ: ನಾಡಿನ ಪ್ರತಿಯೊಬ್ಬರು ಕನ್ನಡ ಭಾಷಾಭಿಮಾನ ಬೆಳೆಸಿಕೊಂಡು ಕನ್ನಡವನ್ನು ಅಂತರಂಗದ ಭಾಷೆ, ಕರುಳಿನ ಭಾಷೆಯನ್ನಾಗಿ ಸ್ವೀಕರಿಸಿ, ಶಿಕ್ಷಣ, ಆಡಳಿತದಲ್ಲಿ ಬೆಳೆಸಿದಾಗ ಮಾತ್ರ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಉಳಿಯಲು-ಬೆಳೆಯಲು ಸಾಧ್ಯ ಎಂದು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಇಂದ್ರಮ್ಮ ಕೆ.ಆರ್.ಅಭಿಪ್ರಾಯಪಟ್ಟರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ೭೦ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡದ ಇತಿಹಾಸ ಹಾಗೂ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ವಿವರಿಸಿದರು.ಕನ್ನಡ ಭಾಷೆಗೆ ೮ ಜ್ಞಾನ ಪೀಠ ಪ್ರಶಸ್ತಿಗಳು ಸಂದಿವೆ. ದೇಶದಲ್ಲಿ ೩ನೇ ಶಾಸ್ತ್ರೀಯ ಸ್ಥಾನಮಾನ ದೊರಕಿದೆ. ಕನ್ನಡ ಸಂಪೂರ್ಣ ಅನುಷ್ಠಾನಕ್ಕೆ ಬರಬೇಕು ಎಂದು ನೂರಾರು ಸರ್ಕಾರಿ ಆದೇಶಗಳು ಹೊರ ಬಂದರೂ ಇಂದಿಗೂ ಕನ್ನಡ ಆಡಳಿತ ಭಾಷೆ ಆಗದೇ ಪರಿತಪಿಸುವಂತಾಗಿದೆ. ನೆಲ ಜಲ, ಭಾಷೆ,ಗಡಿ ಸಮಸ್ಯೆಯನ್ನು ಇಂದಿಗೂ ಎದುರಿಸುತ್ತಿದ್ದೇವೆ. ಕನ್ನಡ ಭಾಷೆ ಬರೀ ಮಾತಿನಿಂದ ಬೆಳೆಯದು. ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಕನ್ನಡ ಭಾಷೆ ಕಡ್ಡಾಯ ಮಾಡಬೇಕು. ದಿನನಿತ್ಯ ಕನ್ನಡ ಮಾತನಾಡಿದಾಗ ರಾಜ್ಯೋತ್ಸವ ಆಚರಣೆಗೆ ಮತ್ತಷ್ಟು ಗೌರವ ಬರುತ್ತದೆ ಎಂದರು.
ತಹಸೀಲ್ದಾರ್ ಬಿ.ಎನ್.ಗಿರೀಶ್ ಧ್ವಜಾರೋಹಣವನ್ನು ನೆರವೇರಿಸಿ, ಜನತೆಗೆ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿ, ಹಿರಿಯ ಚೇತನಗಳ ತ್ಯಾಗ ಪರಿಶ್ರಮದಿಂದ ಅಖಂಡ ಕರ್ನಾಟಕವಾಗಿ ರೂಪುಗೊಂಡು ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿಯನ್ನು ಸಾಧಿಸಿದೆ.ಇಡೀ ದೇಶಕ್ಕೆ ಕರ್ನಾಟಕ ರಾಜ್ಯ ಮಾದರಿಯಾಗಿದೆ. ನಾವು ನವೆಂಬರ್ ಕನ್ನಡಿಗರಾದೇ ವರ್ಷದ ಕನ್ನಡಿಗರಾಗಬೇಕು. ಕನ್ನಡ ನಾಡು ಭಾಷೆ, ನೆಲ ಜಲದ ಬಗ್ಗೆ ಪ್ರೀತಿ ಅಭಿಮಾನವನ್ನು ಬೆಳೆಸಿಕೊಂಡು ನಮ್ಮ ನಡೆ ನುಡಿ ಕಾರ್ಯದಲ್ಲಿ ಕನ್ನಡತನವನ್ನು ತೋರಿ, ನಮ್ಮ ಮನೆ ಹಾಗೂ ಮಕ್ಕಳೊಂದಿಗೆ ಮತ್ತು ಅನ್ಯ ಭಾಷಿಗರೊಂದಿಗೆ ಕನ್ನಡದಲ್ಲಿ ಮಾತನಾಡಿ ಕನ್ನಡ ಭಾಷೆ ಮತ್ತು ಸರ್ಕಾರಿ ಶಾಲೆಗಳನ್ನು ಉಳಿಸೋಣ. ಕನ್ನಡವನ್ನು ಬೆಳೆಸೋಣ ಎಂದು ಹೇಳಿದರು.ನಗರಸಭೆ ಅಧ್ಯಕ್ಷ ವಾಸಿಲ್ ಆಲಿ ಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಚ.ಯೋ.ಪ್ರಾ.ಅಧ್ಯಕ್ಷ ಎಸ್.ಆರ್.ಪ್ರಮೋದ್, ತಾ.ಗ್ಯಾರಂಟಿ ಯೋ. ಸಮಿತಿ ಅಧ್ಯಕ್ಷ ರಂಗನಾಥ್, ಜಿಲ್ಲಾ ಉಪಾಧ್ಯಕ್ಷ ಎಸ್.ಸಿ.ಶೇಖರ್, ತಾಪಂ ಇಒ ಸಂದೀಪ್, ಪೌರಾಯುಕ್ತ ಮಹೇಂದ್ರ, ಕ್ಷೇತ್ರ ಸಮನ್ವಯಾಧಿಕಾರಿ ಸಿ.ರಾಜಶೇಖರ್, ನಗರಸಭಾ ಸದಸ್ಯರಾದ ಲಿಯಾಕತ್ ಆಲಿ ಖಾನ್, ಮಹಮದ್ ಸಾಬೀರ್, ಮತೀನ್ ಖಾನ್, ನಾಗೇಶ್, ಸರ್ವಮಂಗಳ ಲೋಕೇಶ್, ತಿಮ್ಮರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿದ್ದರಾಜು ಇತರರಿದ್ದರು.
ಪೊಟೋ೧ಸಿಪಿಟಿ೧:ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ೭೦ನೇ ಕನ್ನಡ ರಾಜ್ಯೋತ್ಸವವನ್ನು ಅತಿಥಿಗಳು ಉದ್ಘಾಟಿಸಿದರು.