ಕನ್ನಡ ಭಾಷೆ ಉಳಿಸಿ ಬೆಳೆಸಬೇಕಿದೆ: ಸಪ್ತಶ್ರೀ

KannadaprabhaNewsNetwork |  
Published : Nov 02, 2025, 02:15 AM IST
ಭವ್ಯ ಇತಿಹಾಸ ಹೊಂದಿರುವ ಕನ್ನಡ ಭಾಷೆ ಉಳಿಸಿ ಬೆಳೆಸಬೇಕಿದೆ : ಸಪ್ತಶ್ರೀ | Kannada Prabha

ಸಾರಾಂಶ

ಕರ್ನಾಟಕವನ್ನು ಕದಂಬರು, ಗಂಗರು, ರಾಷ್ಟ್ರಕೂಟರು, ಯಾದವರು, ಬಲ್ಲಾಳರು ಸೇರಿದಂತೆ ಮುಂತಾದವರು ಆಳಿದ್ದಾರೆ. ಆಡಳಿತ ಭಾಷೆ, ಮಾತೃಭಾಷೆ, ವ್ಯವಹಾರಿಕ ಭಾಷೆಯಾದ ಕನ್ನಡವನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಬಳಸಬೇಕು.

ಕನ್ನಡಪ್ರಭ ವಾರ್ತೆ ತಿಪಟೂರು

ವಿವಿಧ ಭಾಗಗಳಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕವು ಏಕೀಕರಣಗೊಂಡ ನಂತರ ಹೊಸರೂಪ ಪಡೆದುಕೊಂಡಿದ್ದು, ಅಖಂಡ ಕರ್ನಾಟಕದಲ್ಲಿ ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಲಿಪಿಗಳ ರಾಣಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ತಿಳಿಸಿದರು.ನಗರದ ಕಲ್ಪತರು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶನಿವಾರ ನಡೆದ 70ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಎಲ್ಲಾ ಭಾಷೆಗಳಿಗಿಂತ ಸುಂದರ ಭಾಷೆಯಾಗಿದೆ ಎಂದರು.

ಕರ್ನಾಟಕವನ್ನು ಕದಂಬರು, ಗಂಗರು, ರಾಷ್ಟ್ರಕೂಟರು, ಯಾದವರು, ಬಲ್ಲಾಳರು ಸೇರಿದಂತೆ ಮುಂತಾದವರು ಆಳಿದ್ದಾರೆ. ಆಡಳಿತ ಭಾಷೆ, ಮಾತೃಭಾಷೆ, ವ್ಯವಹಾರಿಕ ಭಾಷೆಯಾದ ಕನ್ನಡವನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಬಳಸಬೇಕು. ಕನ್ನಡದಲ್ಲೇ ದೊಡ್ಡ ಮಟ್ಟದ ಸಂಶೋಧನೆ, ಆವಿಷ್ಕಾರಗಳನ್ನು ಮಾಡಬೇಕೆಂಬ ಉದ್ದೇಶದಿಂದ ಹಂಪಿ ಕನ್ನಡ ವಿವಿಯನ್ನು ಸ್ಥಾಪಿಸಿ ಉತ್ತೇಜನ ನೀಡಿದೆ. ಎಲ್ಲರು ರಾಷ್ಟ್ರಾಭಿಮಾನ, ಭಾವೈಕ್ಯತೆ, ನಾಡಿಗಾಗಿ ದುಡಿದ, ಮಡಿದ ಮಹನೀಯರನ್ನು ಸ್ಮರಿಸುತ್ತಾ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಕನ್ನಡ ಕಟ್ಟಾಳುಗಳಾಗಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಷಡಕ್ಷರಿ ಮಾತನಾಡಿ, ಕನ್ನಡ ಭಾಷೆ ಕೇವಲ ಭಾಷೆ ಅಲ್ಲ, ಅದು ನಮ್ಮ ಉಸಿರು, ಬದುಕು, ನಾಡು, ನುಡಿ, ಕಲೆ, ಸಂಸ್ಕೃತಿ, ಸಾಹಿತ್ಯದ ಒಟ್ಟು ಪರಂಪರೆಯೇ ಕನ್ನಡವಾಗಿದೆ. ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಕಲಿಯಬೇಕು. ಹೊರ ರಾಜ್ಯಗಳಿಂದ ಬಂದಂತಹ ಅಧಿಕಾರಿಗಳಿಗೂ ಸಹ ಕನ್ನಡ ಕಡ್ಡಾಯವಾಗಿ ಕಲಿಯಬೇಕೆಂಬ ಆದೇಶವಿದೆ. ಈ ನಾಡು ಸಂಪದ್ಭರಿತ ನಾಡಾಗಿದ್ದು ಹಲವಾರು ಕವಿ, ಸಾಹಿತಿಗಳನ್ನೊಳಗೊಂಡಿದ್ದು ಇಂತಹ ಕನ್ನಡ ನಾಡಿನಲ್ಲಿ ಹುಟ್ಟಿದ ನಾವೇ ಪುಣ್ಯವಂತರು ಎಂದರು. ಸಮಾರಂಭದಲ್ಲಿ ತಹಸೀಲ್ದಾರ್ ಮೋಹನ್‌ಕುಮಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಬಿಇಓ ತಾರಾಮಣಿ, ಸಿಡಿಪಿಓ ದೀಪಾ ಹೆಬ್ಬಳ್ಳಿ, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಹಿಂದುಳಿದ ವರ್ಗ ಇಲಾಖೆಯ ಜಲಜಾಕ್ಷಮ್ಮ, ಬೆಸ್ಕಾಂ ಎಇಇ ಮನೋಹರ್, ಕೃಷಿ ಇಲಾಖೆ ಪವನ್ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ವಿವಿಧ ಶಾಲೆಗಳ ಮಕ್ಕಳಿಂದ ದೇಶಭಕ್ತಿ, ನಾಡಿನ ಸಂಸ್ಕೃತಿಯನ್ನು ಬಿಂಬಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮಕ್ಕೂ ಮುನ್ನಾ ನಗರದ ಶ್ರೀ ಕೆಂಪಮ್ಮದೇವಿ ದೇವಾಲಯದಿಂದ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ನಗರದ ರಾಜ ಬೀದಿಗಳಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ವಿವಿಧ ಇಲಾಖೆಗಳಿಂದ ತಮ್ಮ ಯೋಜನೆಗಳನ್ನು ಸಾರುವ ಸ್ತಬ್ಧ ಚಿತ್ರಗಳ ಮೆರವಣಿಗೆ ಕಲ್ಪತರು ಕ್ರೀಡಾಂಗಣದವರೆಗೆ ಸಾಗಿತು. ಫೋಟೋ 1-ಟಿಪಿಟಿ1ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ತಿಪಟೂರಿನ ಕಲ್ಪತರು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಶಾಸಕ ಕೆ. ಷಡಕ್ಷರಿ, ಉಪವಿಭಾಗಾಧಿಕಾರಿ ಸಪ್ತಶ್ರೀ ರಾಷ್ಟ್ರ ಮತ್ತು ನಾಡ ಧ್ವಜಾರೋಹಣ ನೆರವೇರಿಸಿದರು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ