ಅಣ್ಣಾಸಾಬ ತೆಲಸಂಗಕನ್ನಡಪ್ರಭ ವಾರ್ತೆ ಅಥಣಿಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದ ಬೆಳಗಾವಿ ಜಿಲ್ಲೆಯ ದೊಡ್ಡ ತಾಲೂಕು ಅಥಣಿಯಲ್ಲಿ ಕಳೆದ 5 ವರ್ಷಗಳಿಂದ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕ ಯಾವುದೇ ಕಾರ್ಯಚಟುವಟಿಕೆ ನಡೆಸದೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಪದಾಧಿಕಾರಿಗಳ ಜತೆಗೆ ಸಾಹಿತ್ಯ ಪರಿಷತ್ತಿನ ಸದಸ್ಯರಿಗೂ ಜವಾಬ್ದಾರಿ ಇದೆ. ತಾಲೂಕಿನಲ್ಲಿ ಒಂದು ಸಾವಿರ ಸದಸ್ಯರಿದ್ದರೂ ಯಾರು ಈ ಬಗ್ಗೆ ಚಕಾರ ಎತ್ತದಿರುವುದು ವಿಷಾಧನೀಯ.ಮಹಾರಾಷ್ಟ್ರದ ಗಡಿ ಭಾಗದಲ್ಲಿ ಅಥಣಿ ತಾಲೂಕು ಇರುವುದರಿಂದ ಇಲ್ಲಿನ ಜನರು ಕನ್ನಡದ ಜೊತೆಗೆ ಮರಾಠಿ ಭಾಷೆಯಲ್ಲಿ ಕೂಡ ವ್ಯವಹರಿಸುವುದು ಸಾಮಾನ್ಯ. ಅಥಣಿ ಆಧ್ಯಾತ್ಮ ಕೇಂದ್ರದಲ್ಲಿ ಸಾಹಿತ್ಯಾಸಕ್ತರು ಹಾಗೂ ಕನ್ನಡಪರ ಹೋರಾಟಗಾರರು, ಕನ್ನಡ ಕಲಾಭಿಮಾನಿಗಳಿಗೆ ಕೊರತೆ ಇಲ್ಲ. ಕನ್ನಡಪರ ಹೋರಾಟಗಳಿಂದ ಮಾತ್ರ ಕನ್ನಡ ಜಾಗೃತಿ ಕಾರ್ಯಕ್ರಮ ಜರುಗುತ್ತಿವೆ. ಆದರೆ, ಕನ್ನಡ ಸಾಹಿತ್ಯ ಪರಿಷತ್ತು ಅಥಣಿ ತಾಲೂಕ ಘಟಕ ಯಾವುದೇ ಕಾರ್ಯಚಟುವಟಿಕೆ ನಡೆಸುತ್ತಿಲ್ಲ ಎಂದು ಸಾಹಿತ್ಯಾಸಕ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಮಹತ್ವದ ಕಾರ್ಯಕ್ರಮ ನಡೆಸಿಲ್ಲ. ಕನ್ನಡ ರಾಜ್ಯೋತ್ಸವ, ಸಾಹಿತ್ಯ ಪರಿಷತ್ನ ಸಂಸ್ಥಾಪನಾ ದಿನವನ್ನೂ ಆಚರಿಸದಿರುವುದು ವಿಪರ್ಯಾಸದ ಸಂಗತಿ. ಅನೇಕ ವರ್ಷಗಳಿಂದ ಜೀವ ಪಡೆದುಕೊಂಡಿದ್ದ ಸಾಹಿತ್ಯ ಪರಿಷತ್ ಕಳೆದ 5 ವರ್ಷದಿಂದ ಯಾವುದೇ ಕಾರ್ಯ ಚಟುವಟಿಕೆಗಳಿಲ್ಲದೆ ತಾಲೂಕ ಘಟಕಕ್ಕೆ ಕಾರ್ಮೋಡ ಕವಿದಂತಾಗಿದೆ. ಕಸಾಪ ತಾಲೂಕು ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ ನೇತೃತ್ವದಲ್ಲಿ 2015ರಲ್ಲಿ ಜಿಲ್ಲಾ ಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಥಣಿಯ ಗಚ್ಚಿನ ಮಠದಲ್ಲಿ ಆಯೋಜಿಸಿದ್ದು ಐತಿಹಾಸಿಕ ಕಾರ್ಯಕ್ರಮ. ತದನಂತರ ಅಧಿಕಾರ ವಹಿಸಿಕೊಂಡ ಡಾ.ಮಹಾಂತೇಶ ಉಕಲಿ ಐದು ವರ್ಷಗಳ ಕಾಲ ವಿವಿಧ ಕನ್ನಡ ಪರ ಕಾರ್ಯಕ್ರಮಗಳು, ತಾಲೂಕ ಮಟ್ಟದ ಸಾಹಿತ್ಯ ಸಮ್ಮೇಳನ, ಉಪನ್ಯಾಸ, ಪುಸ್ತಕ ಬಿಡುಗಡೆ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲಾಯಿತು. ಆದರೆ, 2021-26ನೇ ಸಾಲಿನಲ್ಲಿ ಮತ್ತೆ ಮಲ್ಲಿಕಾರ್ಜುನ ಕನಶೆಟ್ಟಿ ಅಧ್ಯಕ್ಷ ಸ್ಥಾನವನ್ನು ಹಠಕ್ಕೆ ಬಿದ್ದು ಪಡೆದರು. ಆದರೆ, ರಾಜ್ಯ ಸರ್ಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕ ಮತ್ತು ಜಿಲ್ಲಾ ಬಿಡಿಗಾಸು ಸಹಾಯಧನ ಇಲ್ಲದೇ ಇರುವುದರಿಂದ ಸಾಹಿತ್ಯ ಚಟುವಟಿಕೆಗಳು ನಿಷ್ಕ್ರಿಯಗೊಂಡಿವೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ದಾನಿಗಳ ಸಹಕಾರದಿಂದ ತಾಲೂಕು ಸಮ್ಮೇಳನ ಹಾಗೂ ಕಾರ್ಯ ಚಟುವಟಿಕೆಗಳು ಜರುಗಿದವು. ಆದರೆ ಅಥಣಿಯಲ್ಲಿ ಘಟಕದ ಅಧ್ಯಕ್ಷರು ಈ ಬಗ್ಗೆ ಇಚ್ಛಾಶಕ್ತಿ ತೋರಲಿಲ್ಲ, ಐದು ವರ್ಷಗಳಲ್ಲಿ ಒಂದೂ ತಾಲೂಕು ಸಮ್ಮೇಳನ ನಡೆಸಲಿಲ್ಲ. ಸಮ್ಮೇಳನ ಅಧ್ಯಕ್ಷ ಸ್ಥಾನದಿಂದ ವಂಚಿತ
ರಾಜ್ಯ ಮತ್ತು ಜಿಲ್ಲಾ ಘಟಕಕ್ಕೆ ಚುನಾವಣೆಗಳು ನಡೆಯುವಂತೆ ತಾಲೂಕ ಘಟಕ ಚುನಾವಣೆ ನಡೆಸುವುದು ಅಗತ್ಯ. ಒಮ್ಮೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರಿಗೆ ಮತ್ತೊಮ್ಮೆ ಅವಕಾಶಗಳನ್ನು ನೀಡಬಾರದು. ಹೊಸಬರಿಗೆ ಅವಕಾಶಗಳನ್ನು ನೀಡುವುದರಿಂದ ಇನ್ನಷ್ಟು ಕನ್ನಡ ಪರ ಕಾರ್ಯಕ್ರಮಗಳನ್ನು ಕೈಕೊಳ್ಳಲು ಸಾಧ್ಯವಾಗುತ್ತದೆ. ಜಿಲ್ಲಾ ಮತ್ತು ರಾಜ್ಯ ಘಟಕ ತಾಲೂಕು ಘಟಕದ ಬಗ್ಗೆ ಗಮನ ಹರಿಸಿ ಕ್ರಮಬದ್ಧ ಕಾರ್ಯ ಚಟುವಟಿಕೆ ಕೈಗೊಳ್ಳುವಂತೆ ಪ್ರೋತ್ಸಾಹ ಮತ್ತು ಸಹಾಯ ನಿಧಿಯನ್ನು ನೀಡಬೇಕು. ಕಾರ್ಯಕ್ರಮ ಕೈಗೊಳ್ಳದಿದ್ದಾಗ ತಾಲೂಕ ಘಟಕದ ಎಲ್ಲ ಸದಸ್ಯರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುವ ಮೂಲಕ ಸೂಕ್ತ ಬದಲಾವಣೆ ಕೈಗೊಳ್ಳಬೇಕು ಎಂಬುದು ಸಾಹಿತಿಗಳ ಒತ್ತಾಸೆ.------
ಕೋಟ್ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಘಟಕ ಸಂಪೂರ್ಣ ನಿಷ್ಕ್ರಿಯವಾಗಿದೆ. ಇತ್ತೀಚಿಗೆ ರಾಜ್ಯ ಸರ್ಕಾರ ಸಾಹಿತ್ಯ ಚಟುವಟಿಕೆಗಳಿಗೆ ಅನುದಾನ ನೀದಿರುವುದು ವಿಷಾಧನಿಯ ಸಂಗತಿ. ಗಡಿಭಾಗದಲ್ಲಿ ಕನ್ನಡ ಕಾರ್ಯಕ್ರಮಗಳನ್ನು, ಕವಿಗೋಷ್ಠಿ ಮತ್ತು ಉಪನ್ಯಾಸ ನಡೆಸುವುದು ಅನಿವಾರ್ಯತೆ ಇದೆ. ರಾಜ್ಯ ಮತ್ತು ಜಿಲ್ಲಾ ಘಟಕದವರು ಈ ಬಗ್ಗೆ ಗಮನ ಹರಿಸುವುದು ಅಗತ್ಯ. ನಾಡು-ನುಡಿಯ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸಮಿತಿ ಜಿಲ್ಲಾ ಮತ್ತು ತಾಲೂಕ ಘಟಕಗಳಿಗೆ ವಿಶೇಷ ಅನುದಾನ ಒದಗಿಸಬೇಕು. - ಅಪ್ಪಾಸಾಹೇಬ ಅಲಿಬಾಲಿ, ಹಿರಿಯ ಸಾಹಿತಿಗಳು ಅಥಣಿ.