ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಹಿರಿಮೆ ಸಾರುವ, ಇತಿಹಾಸ ಸ್ಮರಿಸುವ ಪ್ರಯತ್ನದ ಫಲವಾಗಿ ಕನ್ನಡಪ್ರಭ ಹೊರತಂದ ಮೂರನೇ ವಿಶೇಷ ಸಂಚಿಕೆಯ ಬಿಡುಗಡೆ ಸಮಾರಂಭ ಗುರುವಾರ ಬಳ್ಳಾರಿ ನಗರದ ರಾಘವ ಕಲಾ ಮಂದಿರದಲ್ಲಿ ಸಂಭ್ರಮಕ್ಕೆ ಸಾಕ್ಷಿಯಾಯಿತು.ಸಾಧಕ ಕಲಾವಿದರ, ವಿದ್ಯಾರ್ಥಿಗಳು, ಹೋರಾಟಗಾರರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ಪತ್ರಿಕೆ ಹೊರತಂದ ಅಖಂಡ ಬಳ್ಳಾರಿ ವಿಶೇಷ ಸಂಚಿಕೆಯ ಲೋಕಾರ್ಪಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಸನ್ಮಾನಿಸುವ ಅರ್ಥಪೂರ್ಣ ಕಾರ್ಯಕ್ರಮ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ನ ಪ್ರಧಾನ ಸಂಪಾದಕ ರವಿ ಹೆಗಡೆ ಅವರ ಘನ ಉಪಸ್ಥಿತಿಯಲ್ಲಿ ನಡೆಯಿತು.
ಕನ್ನಡಪ್ರಭ ಕೇವಲ ಸುದ್ದಿ ನೀಡುವುದು ಅಷ್ಟೇ ಅಲ್ಲ ಅದರ ಜೊತೆ ಸಮಾಜ ಮುಖಿ ಕಾರ್ಯಕ್ರಮ, ಸಾಧಕರನ್ನು ಗುರುತಿಸುವ ಕಾರ್ಯವನ್ನು ಮಾಡುತ್ತಿದೆ. ಇದರ ಜೊತೆಗೆ ಅಯಾ ಜಿಲ್ಲೆಯ ಇತಿಹಾಸ, ವಿಶೇಷತೆಯನ್ನು ಒಳಗೊಂಡು ವಿಶೇಷ ಸಂಚಿಕೆಯನ್ನು ತರುವ ಕಾರ್ಯವನ್ಮು ಮಾಡುತ್ತಿದೆ. ಬಳ್ಳಾರಿ ಜಿಲ್ಲೆಯಿಂದಲೇ ಇಂಥ ಮೂರು ಸಂಚಿಕೆಗಳನ್ನು ಅರ್ಥಪೂರ್ಣವಾಗಿ ರೂಪಿಸಿ ಹೊರತಂದಿದೆ ಎನ್ನುವುದು ವಿಶೇಷವಾಗಿದೆ.
ಇಡೀ ಬಳ್ಳಾರಿ ಜಿಲ್ಲೆಯನ್ನು ಅಕ್ಷರ ರೂಪದಲ್ಲಿ ಅನಾವರಣಗೊಳಿಸುವ ಮಹತ್ವಾಕಾಂಕ್ಷೆಯ ಅಖಂಡ ಬಳ್ಳಾರಿ ಸಂಚಿಕೆಯ ಲೋಕಾರ್ಪಣೆ, ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಿತು.
ವಿಷಯ ಮಂಡನೆ ಅದ್ಭುತ!:
ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದು, ಡಾ. ಮೃತ್ಯುಂಜಯ ರುಮಾಲೆ ಅವರ ವಿಷಯ ಮಂಡನೆ. ಬಳ್ಳಾರಿ ಜಿಲ್ಲೆಯ ಹುಟ್ಟು, ಬೆಳವಣಿಗೆ, ಸಾಹಿತ್ಯ, ಶಿಕ್ಷಣ, ರಾಜಕೀಯ ಹಾಗೂ ಏಕೀಕರಣದ ಕುರಿತು ಅವರು ನೀಡಿದ ಅಂಕಿ-ಅಂಶ ಸಹಿತ ವಿಶ್ಲೇಷಣೆ ನೆರೆದವರನ್ನು ಮಂತ್ರಮುಗ್ಧರನ್ನಾಗಿಸಿತು. ಬಳ್ಳಾರಿಯ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯನ್ನು ಅವರು ಕಟ್ಟಿಕೊಟ್ಟ ರೀತಿ ನಿಜಕ್ಕೂ ಪ್ರಶಂಸನೀಯ.
ಮೂರು ಗಂಟೆಗಳ ಕಾಲ ಆಸಕ್ತಿ ಕಾಯ್ದುಕೊಂಡ ಆಸಕ್ತರು!
ಕಾರ್ಯಕ್ರಮದ ಸುಂದರ ನಿರೂಪಣೆ, ಅಚ್ಚುಕಟ್ಟುತನ ಮತ್ತು ಪ್ರಬುದ್ಧ ವಿಷಯ ಮಂಡನೆ ನೆರೆದಿದ್ದ ಗಣ್ಯರನ್ನು ಮಾತ್ರವಲ್ಲದೆ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಆಸಕ್ತರನ್ನು ಸತತವಾಗಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಆಸಕ್ತಿಯಿಂದ ಕುಳಿತುಕೊಳ್ಳುವಂತೆ ಮಾಡಿತು. ಪ್ರತಿಯೊಬ್ಬರೂ ಕಾರ್ಯಕ್ರಮದ ಪ್ರತಿ ಕ್ಷಣವನ್ನೂ ಅತ್ಯಂತ ಉತ್ಸಾಹದಿಂದ ಆಸ್ವಾದಿಸಿದ್ದು, ಇಡೀ ವಾತಾವರಣಕ್ಕೆ ವಿಶೇಷ ಮೆರುಗು ನೀಡಿತ್ತು.
ಕನ್ನಡಪ್ರಭದ ಮಾನವೀಯ ಸ್ಪರ್ಶ-ಸ್ಮಶಾನ ಕಾಯುವವರಿಗೂ ಸನ್ಮಾನ!:
ಕನ್ನಡಪ್ರಭ ಪತ್ರಿಕೆ ಯಾವಾಗಲೂ ತನ್ನ ಅನನ್ಯತೆ ಮತ್ತು ಹೊಸತನಗಳಿಂದ ಗಮನ ಸೆಳೆದಿದೆ. ಗುರುವಾರದ ಕಾರ್ಯಕ್ರಮ ಇದಕ್ಕೆ ಮತ್ತೊಂದು ಜೀವಂತ ಸಾಕ್ಷಿಯಾಯಿತು. ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅಂತ್ಯ ಕಾಲದಲ್ಲಿ ಅತ್ಯಗತ್ಯ ಸೇವೆ ಸಲ್ಲಿಸುವ ಸ್ಮಶಾನ ಕಾರ್ಮಿಕರಿಗೂ ವೇದಿಕೆ ಕಲ್ಪಿಸಿ ಸನ್ಮಾನಿಸಲಾಯಿತು. ಅವರ ಕೆಲಸವನ್ನು ಗೌರವಿಸಿ, ಸಮಾಜದ ಅತ್ಯಂತ ಪ್ರಮುಖ ವ್ಯಕ್ತಿಗಳು ಎಂದು ಸಾರುವ ಮೂಲಕ ಕನ್ನಡಪ್ರಭ, ತನ್ನ ಸಾಮಾಜಿಕ ಬದ್ಧತೆ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಿತು. ಇದು ನಿಜಕ್ಕೂ ನೆರೆದಿದ್ದ ಎಲ್ಲರ ಹೃದಯಗಳನ್ನು ಗೆದ್ದ ಒಂದು ಸನ್ಮಾನವಾಗಿತ್ತು.
ಲೋಹಿಯಾ ಪ್ರಕಾಶನದ ಚಿಂತಕ ಸಿ.ಚೆನ್ನಬಸಣ್ಣ ಕನ್ನಡ ಪತ್ರಿಕೋದ್ಯಮ ಸೇರಿದಂತೆ ಬಳ್ಳಾರಿ ಜಿಲ್ಲೆಯ ಕುರಿತು ಮಾತನಾಡಿದರು.
ಸಾಹಿತಿ ಡಾ. ಮೃತ್ಯುಂಜಯ ರುಮಾಲೆ ಬಳ್ಳಾರಿ ಜಿಲ್ಲೆಯ ಉದಯ ಹಾಗೂ ಬೆಳೆದು ಬಂದ ಹಾದಿಯ ಬಗ್ಗೆ ಸುದೀರ್ಘವಾಗಿ ವಿವರಿಸಿದರು.
ಸಾನ್ನಿಧ್ಯವನ್ನು ವಹಿಸಿದ್ದ ಸಂಡೂರು ವಿರಕ್ತಮಠ ಪ್ರಭು ಸ್ವಾಮಿಗಳು ಆಶೀರ್ವಚನ ನೀಡಿ, ಪುಣ್ಯ ಮಾಡಿದವರು ಮಾತ್ರ ಗಡಿ ಭಾಷೆಯಲ್ಲಿ ಹುಟ್ಟುತ್ತಾರೆ. ಇದು ಸಾಹಿತ್ಯ ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಪುರವಣಿ ಸಂಪಾದಕ ಜೋಗಿ ಹಾಗೂ ಪುರವಣಿಯ ಸಮನ್ವಯ ಸಂಪಾದಕ ಮಲ್ಲಿಕಾರ್ಜುನಯ್ಯ ಮುಂತಾದವರಿದ್ದರು. ಬಳ್ಳಾರಿ ಕನ್ನಡಪ್ರಭ ಪ್ರಧಾನ ವರದಿಗಾರ ಕೆ.ಎಂ. ಮಂಜುನಾಥ ಸ್ವಾಗತಿಸಿದರು. ಹುಬ್ಬಳ್ಳಿ ಕನ್ನಡಪ್ರಭ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣವರ ನಿರೂಪಿಸಿ, ವಿಜಯನಗರ ವರದಿಗಾರ ಕೃಷ್ಣ ಲಮಾಣಿ ವಂದಿಸಿದರು. ಯಲ್ಲನಗೌಡ ಶಂಕರಬಂಡೆ, ದೊಡ್ಡಬಸವ ಗವಾಯಿ ಡಿ.ಕಗ್ಗಲ್, ವಸಂತ ಕುಮಾರ್ ಹಾಗೂ ಜಡೇಶ್ ಎಮ್ಮಿಗನೂರು ಅವರು ನಾಡಗೀತೆ ಹಾಗೂ ಕನ್ನಡಗೀತೆಗಳನ್ನು ಪ್ರಸ್ತುತಪಡಿಸಿದರು.
ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.