ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಭಾರತೀಯ ಜೀವನ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಬೇಕು, ಜನರಿಗೆ ಆಧ್ಯಾತ್ಮದ ಅನುಭೂತಿಯುಂಟಾಗಬೇಕು ಎಂಬ ಉದ್ದೇಶದಿಂದ ಚಾತುರ್ಮಾಸ್ಯ ವ್ರತಾಚರಣೆ ಮಾಡಲಾಗುತ್ತದೆ. ಈ ಬಾರಿಯ ಚಾತುರ್ಮಾಸ್ಯ ವೃತಾಚಾರಣೆ ಕ್ಷೇತ್ರದ ಶಾಖಾ ಮಠ ಭಟ್ಕಳದ ಕರಿಕಲ್ನಲ್ಲಿ ಜು.21ರಿಂದ ಆ.30ರ ವರೆಗೆ ನಡೆಯಲಿದೆ ಎಂದು ನಿತ್ಯಾನಂದ ನಗರದ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಶ್ರೀರಾಮ ಕ್ಷೇತ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ವ್ರತಾಚರಣೆಯ ವಿವರಗಳನ್ನು ನೀಡಿದರು.ಜು.21ರಂದು ಗುರುಪೂರ್ಣಿಮೆಯಂದು ಬೆಳಗ್ಗೆ ಚಾತುರ್ಮಾಸ್ಯ ವ್ರತ ಸಂಕಲ್ಪ ಪ್ರಯುಕ್ತ ರಾಮತಾರಕ ಯಜ್ಞ ವೈದಿಕ ವಿಧಿ ವಿಧಾನ, ಬಳಿಕ ಶ್ರೀ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಿಂದ ಶ್ರೀಗಳ ಪುರ ಪ್ರವೇಶದ ವೈಭವದ ಮೆರವಣಿಗೆ, ಕರಿಕಲ್ ಮಠದಲ್ಲಿ ಶ್ರೀ ರಾಮ ದೇವರಿಗೆ ವಿಶೇಷ ಪೂಜೆ, ಶ್ರೀಗಳ ಗುರುಪೂರ್ಣಿಮೆಯ ವ್ಯಾಸಪೀಠ ಪೀಠಾರೋಹಣ, ಗುರು ಪಾದುಕ ಪೂಜೆ, ಶ್ರೀಗಳ ಆಶೀರ್ವಚನ, ಧಾರ್ಮಿಕ ಕಾರ್ಯಕ್ರಮವನ್ನು ಮೀನುಗಾರಿಕೆ ಸಚಿವ ಮಾಂಕಾಳ ಎಸ್. ವೈದ್ಯ ಉದ್ಘಾಟಿಸುವರು. ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದರಾದ ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಎಂಎಲ್ಸಿ ಹರಿ ಪ್ರಸಾದ್, ಶಾಸಕರಾದ ವಿ. ಸುನಿಲ್ ಕುಮಾರ್ ಕಾರ್ಕಳ, ಬೇಲೂರು ಗೋಪಾಲಕೃಷ್ಣ, ಭೀಮಣ್ಣ ಸಿರ್ಸಿ, ಹರೀಶ್ ಪೂಂಜ ಬೆಳ್ತಂಗಡಿ, ದಿನಕರ ಶೆಟ್ಟಿ ಕುಮಟಾ, ಶಿವರಾಮ್ ಹೆಬ್ಬಾರ್ ಯಲ್ಲಾಪುರ, ಸತೀಶ್ ಸೈಲ್ ಕಾರವಾರ, ಮಾಜಿ ಸಚಿವ ಹರತಾಳು ಹಾಲಪ್ಪ, ಶಿವಾನಂದ ನಾಯ್ಕ,, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಭಟ್ಕಳದ ಮಾಜಿ ಶಾಸಕರಾದ ಸುನಿಲ್ನಾಯ್ಕ, ಜೆ.ಡಿ. ನಾಯ್ಕ ಮೊದಲಾದವವರು ಭಾಗವಹಿಸಲಿದ್ದಾರೆ ಎಂದರು.
ಚಾತುರ್ಮಾಸ್ಯ ಪರ್ವ ಕಾಲದಲ್ಲಿ ಪ್ರತಿದಿನ ಭಜನೆ, ಪಾದುಕ ಪೂಜೆ, ಸಂಜೆ 6ರಿಂದ 10ರ ತನಕ ಭಕ್ತಿಪ್ರಧಾನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜು.22 ರಿಂದ 28ರ ವರೆಗೆ ಉಜಿರೆ ಅಶೋಕ ಭಟ್ ಸಂಯೋಜನೆಯಲ್ಲಿ ಬಾಲಕಾಂಡದಿಂದ ಉತ್ತರಾಕಾಂಡದ ವರೆಗೆ ಸಂಪೂರ್ಣ ರಾಮಾಯಣ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆ, ಏಕಾದಶಿಯಂದು ಶ್ರೀಗಳು ಮೌನ ವೃತದಲ್ಲಿರುವುದರಿಂದ ಆ ದಿನಗಳಲ್ಲಿ ಸೂರ್ಯಾಸ್ತದ ಬಳಿಕ ಗುರುಗಳ ದರ್ಶನ ಇರುತ್ತದೆ. ಸೆ.3ರಂದು ಶ್ರೀ ಗುರುದೇವ ಮಠದಲ್ಲಿ ಶ್ರೀಗಳ ಪಟ್ಟಾಭಿಷೇಕ ವರ್ಧಂತಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಪೀತಾಂಬರ ಹೆರಾಜೆ, ಜಯಂತ್ ಕೋಟ್ಯಾನ್, ರಾಜೇಶ್ ಮೂಡುಕೋಡಿ, ಪುರುಷೋತ್ತಮ ಡಿ., ದಯಾನಂದ ಬೆಳಾಲು ಇದ್ದರು.