ಹಾವೇರಿ: ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಬುಧವಾರ ಹೋರಿಗಳನ್ನು ಶೃಂಗರಿಸಿ ಓಡಿಸುವ ಮೂಲಕ ರೈತರು ಕಾರ ಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಜಿಲ್ಲೆಯ ಗ್ರಾಮೀಣ ಭಾಗದ ರೈತರು ಬುಧವಾರ ಬೆಳಗ್ಗೆಯಿಂದಲೇ ತಮ್ಮ ಮನೆಗಳಲ್ಲಿರುವ ಎತ್ತು ಹಾಗೂ ಹೋರಿಗಳ ಮೈತೊಳೆದು, ಬಣ್ಣ ಹಚ್ಚಿ, ವಿವಿಧ ಬಣ್ಣದ ರಿಬ್ಬನ್, ಜೂಲಾ ಕಟ್ಟಿ, ಕೊಂಬಡುಸು ಹಾಕಿ, ಗೆಜ್ಜೆಸರ, ಕಾಲ್ಗೆಜ್ಜೆ, ಒಣಕೊಬ್ಬರಿ, ಚಕ್ಕುಲಿ, ಕೊಡುಬಳಿ ಹಾರ ಹಾಕಿ ಸಿಂಗಾರಗೊಳಿಸಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಶೃಂಗರಿಸಲಾಗಿದ್ದ ಹೋರಿಗಳನ್ನು ಗ್ರಾಮದ ಅಗಸಿಗಳಲ್ಲಿ ಅಖಾಡಕ್ಕೆ ಕರೆತಂದು ಸಾಲು ಸಾಲಾಗಿ ಓಡಿಸಿ, ಸಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು. ಅಖಾಡಗಳಲ್ಲಿ ಗಟ್ಟಿತನ ಪ್ರದರ್ಶಿಸುವ ಕೆಲ ಯುವಕರು, ಪಡ್ಡೆ ಹುಡುಗರು ತಲೆಗೆ ಟವೆಲ್ ಕಟ್ಟಿ ಜಟ್ಟಿಯಾಗಿ ನಿಂತು, ಹೋರಿ ಜತೆಗೆ ಭರ್ಜರಿಯಾಗಿ ಫೋಸ್ ಕೊಟ್ಟು ಕರಿ ಹರಿಯುವಂತಹ ಸಾಹಸಮಯ ದೃಶ್ಯಗಳು ಎಲ್ಲೆಡೆ ಕಂಡುಬಂದವು. ಬಳಿಕ ಅಖಾಡದಲ್ಲಿ ಓಟ ಪ್ರದರ್ಶಿಸಿ ಮನೆಗೆ ಬಂದ ಹೋರಿಗಳಿಗೆ ರೈತ ಮಹಿಳೆಯರು ಆರತಿ ಎತ್ತಿ ಖುಷಿಪಟ್ಟರು. ಹಬ್ಬದ ಅಂಗವಾಗಿ ರೈತಾಪಿ ಕುಟುಂಬದವರು ಮನೆಯಲ್ಲಿ ಕಡಬು, ಕರ್ಚಿಕಾಯಿ, ಅಕ್ಕಿಹುಗ್ಗಿ, ರೊಟ್ಟಿ, ಹೆಸರುಕಾಳು, ಮಡಿಕೆ ಕಾಳಿನಪಲ್ಲೆ, ಬದನೆಕಾಯಿ ಪಲ್ಯ, ಅನ್ನ ಸಾಂಬಾರ, ಚಕ್ಕುಲಿ, ಸ್ಯಾಂಡಿಗೆ, ಹಪ್ಪಳ, ಮಾವಿನಹಣ್ಣಿನ ಸೀಕರಣೆ, ಹೋಳಿಗೆ ಸೇರಿದಂತೆ ಮತ್ತಿತರ ವಿಶೇಷ ಸಿಹಿ ಖಾದ್ಯಗಳನ್ನು ತಯಾರಿಸಿ ಸೇವನೆ ಮಾಡಿದರು.ಸಾಲಬಾಧೆ ತಾಳದೇ ರೈತ ಆತ್ಮಹತ್ಯೆರಾಣಿಬೆನ್ನೂರು: ಸಾಲಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ತಾಲೂಕಿನ ಹುಲ್ಲತ್ತಿ ತಾಂಡಾದ ಬಳಿ ನಡೆದಿದೆ.ರಾಮಪ್ಪ ಠಾಖಪ್ಪ ಲಮಾಣಿ(58) ಮೃತಪಟ್ಟ ರೈತ. ರಾಮಪ್ಪ ಹಾಗೂ ಅವರ ಸಹೋದರರ ಜಂಟಿ ಖಾತೆಯಲ್ಲಿ 5.20 ಎಕರೆ ಜಮೀನಿದೆ. ಕೃಷಿಗಾಗಿ ರಾಮಪ್ಪ ಅವರು ರಾಣಿಬೆನ್ನೂರಿನ ಎಡಿಬಿ ಬ್ಯಾಂಕ್ನಲ್ಲಿ 2014ನೇ ಸಾಲಿನಲ್ಲಿ ₹1.80 ಲಕ್ಷ ಬೆಳೆ ಸಾಲ ಮಾಡಿದ್ದು, ನಂತರ ಸರ್ಕಾರ ಬೆಳೆ ಸಾಲ ಮನ್ನಾ ಮಾಡಿದಾಗ ₹31 ಸಾವಿರ ಬಾಕಿಯಿತ್ತು. ಇದಲ್ಲದೆ ರಾಮಪ್ಪ ಪುತ್ರನ ಹೆಸರಿನಲ್ಲಿ ರಾಣಿಬೆನ್ನೂರಿನ ಮಣಪ್ಪುರಂ ಬ್ಯಾಂಕಿನಲ್ಲಿ ಮಾಡಿದ ₹5 ಲಕ್ಷ ಹೋಂ ಲೋನ್ನಲ್ಲಿ ₹3.80 ಲಕ್ಷ ಬಾಕಿಯಿದೆ. ಬೆಳೆಸಾಲ ಹಾಗೂ ಪುತ್ರ ಮಾಡಿರುವ ಗೃಹ ಸಾಲ ತೀರಿಸುವ ಚಿಂತೆಯಿಂದ ನೊಂದು ಹುಲ್ಲತ್ತಿ ತಾಂಡಾ ಕ್ರಾಸ್ ಬಳಿಯ ತಮ್ಮ ಜಮೀನಿನಲ್ಲಿ ವಿಷ ಸೇವನೆ ಮಾಡಿದ್ದರು. ನಂತರ ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.